ಚನ್ನಪಟ್ಟಣ: ತಾಲ್ಲೂಕಿನ ಬ್ರಹ್ಮಣೀಪುರ ಗ್ರಾಮದಲ್ಲಿರುವ ಪುರಾತನ ಕಾಲದ ಬ್ರಹ್ಮಣ್ಯತೀರ್ಥರ ಕಲ್ಯಾಣಿಯನ್ನು ಗ್ರಾಮಸ್ಥರು ಸ್ವಚ್ಛ ಮಾಡುವ ಮೂಲಕ ಪುರಾತನ ಕಲ್ಯಾಣಿಗೆ ಹೊಸ ಮೆರುಗು ತಂದರು.
ಕಲ್ಯಾಣಿಯಲ್ಲಿ ಗಿಡಗಂಟಿ ಬೆಳೆದು ಸಂಪೂರ್ಣ ಮುಚ್ಚಿ ಹೋಗುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು, ಸೋಮವಾರ ಅದನ್ನು ಸ್ವಚ್ಛ ಮಾಡಿ ಪಾರಂಪರಿಕ ಕಲ್ಯಾಣಿಗೆ ಹೊಸ ಮೆರುಗು ನೀಡಿದರು.
ಗ್ರಾಮಸ್ಥರಾದ ಕೇಬಲ್ ಶ್ರೀನಿವಾಸ್, ಉಪನ್ಯಾಸಕ ಲೋಕೇಶ್, ಹಿರಿಯರಾದ ಕೆಂಗಲ್ಲೇಗೌಡ, ಕೆಂಪರಾಜು, ಪಾಪೇಗೌಡರ ಚಿಕ್ಕೋನು, ಶಿವರಾಜು, ರಾಜು, ಗೋವಿಂದೇಗೌಡ ಮುಂತಾದವರು ಪುರಾತನ ಕಾಲದ ಕಲ್ಯಾಣಿಯಲ್ಲಿ ಬೆಳೆದುನಿಂತಿದ್ದ ಗಿಡಗಂಟಿಗಳನ್ನು ತೆಗೆದು, ಕಸಕಡ್ಡಿಗಳನ್ನು ಹೊರಹಾಕಿ ಸ್ವಚ್ಛಗೊಳಿಸಿದರು.
ತಾಲ್ಲೂಕಿನ ಹಲವಾರು ಗ್ರಾಮಗಳಲ್ಲಿ ಇಂತಹ ಐತಿಹಾಸಿಕ ಸ್ಥಳಗಳು ಸಾಕಷ್ಟಿವೆ. ಅಂತಹ ಪ್ರದೇಶಗಳಲ್ಲಿ ಗಿಡಗಂಟೆಗಳು ಬೆಳೆದು ಅವು ಮುಚ್ಚಿಹೋಗುವ ಅಪಾಯ ಎದುರಿಸುತ್ತಿವೆ. ಅವುಗಳನ್ನು ಆಯಾ ಗ್ರಾಮಸ್ಥರೆ ಸ್ವಚ್ಛ ಮಾಡಿ ಅವುಗಳಿಗೆ ಸ್ಪಷ್ಟ ರೂಪ ಕೊಡುವ ಅಗತ್ಯ ಇದೆ ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟರು.
2018 ರಲ್ಲಿ ಪಟ್ಟಣದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್. ವಿದ್ಯಾರ್ಥಿಗಳು ಈ ಕಲ್ಯಾಣಿಯನ್ನು ಸ್ವಚ್ಚಗೊಳಿಸಿದ್ದರು. ಇದನ್ನು ನಾವುಗಳು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸ್ವಚ್ಛ ಮಾಡಿದ್ದು, ಮುಂದೆಯೂ ಇದರ ರಕ್ಷಣೆ ಮಾಡುತ್ತೇವೆ ಎಂದು ಗ್ರಾಮಸ್ಥರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.