ADVERTISEMENT

ಕೆಂಗಲ್‌ನಲ್ಲಿ ವಿಜೃಂಭಣೆಯ ಬ್ರಹ್ಮರಥೋತ್ಸವ

​ಪ್ರಜಾವಾಣಿ ವಾರ್ತೆ
Published 19 ಜನವರಿ 2020, 14:18 IST
Last Updated 19 ಜನವರಿ 2020, 14:18 IST
ಚನ್ನಪಟ್ಟಣ ತಾಲ್ಲೂಕಿನ ಕೆಂಗಲ್‌ನಲ್ಲಿ ಶ್ರೀ ಲಕ್ಷ್ಮಿ ವೆಂಕಟೇಶ್ವರಸ್ವಾಮಿ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನೆರವೇರಿತು
ಚನ್ನಪಟ್ಟಣ ತಾಲ್ಲೂಕಿನ ಕೆಂಗಲ್‌ನಲ್ಲಿ ಶ್ರೀ ಲಕ್ಷ್ಮಿ ವೆಂಕಟೇಶ್ವರಸ್ವಾಮಿ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನೆರವೇರಿತು   

ಚನ್ನಪಟ್ಟಣ: ಇಲ್ಲಿನ ಇತಿಹಾಸ ಹಾಗೂ ಪುರಾಣ ಪ್ರಸಿದ್ಧ ಕೆಂಗಲ್ ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ಶ್ರೀ ಲಕ್ಷ್ಮಿ ವೆಂಕಟೇಶ್ವರಸ್ವಾಮಿ ಬ್ರಹ್ಮರಥೋತ್ಸವ ಭಾನುವಾರ ವಿಜೃಂಭಣೆಯಿಂದ ನೆರವೇರಿತು.

ರಥೋತ್ಸವದ ಅಂಗವಾಗಿ ಬೆಳಿಗ್ಗೆಯಿಂದ ರಥಾಂಗಹೋಮ, ಯಾತ್ರಾದಾನ, ಮಂಟಪೋತ್ಸವ, ಬಲಿಪ್ರಧಾನ, ಗೋವು ಹಾಗೂ ಅಶ್ವಪೂಜೆ, ಪೂಜಾ ಕುಣಿತ, ತಮಟೆ, ಡೊಳ್ಳುಕುಣಿತ, ತೋಮಾಲಸೇವೆ, ಯಾತ್ರಾದಾನ ಸೇವೆ ಮುಂತಾದ ಕಾರ್ಯಕ್ರಮಗಳು ನಡೆದವು.

ಮಧ್ಯಾಹ್ನ ತಹಶೀಲ್ದಾರ್ ಸುದರ್ಶನ್ ಪೂಜೆ ಸಲ್ಲಿಸುವುದರ ಮೂಲಕ ಸರ್ಕಾರಿಸೇವೆ ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡಿದರು. ತಾಲ್ಲೂಕಿನ ಹಲವು ಇಲಾಖೆಗಳ ಅಧಿಕಾರಿಗಳು ಇದರಲ್ಲಿ ಪಾಲ್ಗೊಂಡಿದ್ದರು.

ADVERTISEMENT

ಭಕ್ತಾಧಿಗಳು ರಥವನ್ನು ದೇವಸ್ಥಾನದ ಆವರಣ ಹಾಗೂ ಅಕ್ಕಪಕ್ಕದ ರಸ್ತೆಗಳಲ್ಲಿ ಎಳೆದರು. ರಾಜ್ಯದ ವಿವಿಧೆಡೆಗಳಿಂದ ಬಂದಿದ್ದ ಭಕ್ತರು ಬ್ರಹ್ಮರಥೋತ್ಸದಲ್ಲಿ ಭಾಗವಹಿಸಿ, ಇಷ್ಟಾರ್ಥ ಸಿದ್ಧಿಗಾಗಿ ಹಣ್ಣು, ಕಾಯಿ, ಜವನ ಅರ್ಪಿಸಿದರು.

ಸಂಜೆ ಮುತ್ತಿನ ಪಲ್ಲಕ್ಕಿ ಉತ್ಸವ, ಹೂವಿನ ಪಲ್ಲಕ್ಕಿ ಉತ್ಸವ, ವಸಂತೋತ್ಸವ, ಅಶ್ವವಾಹನೋತ್ಸವ, ಪುಷ್ಪಮುಡಿ ಉತ್ಸವ, ಧ್ವಜಾರೋಹಣ, ಪೂರ್ಣಾಹುತಿ, ಪುಷ್ಪಯಾಗ ಕಾರ್ಯಕ್ರಮಗಳು ನೆರವೇರಿದವು. ಆಂಜನೇಯಸ್ವಾಮಿಗೆ ಜಾತ್ರೆ ಅಂಗವಾಗಿ ವಿಶೇಷ ಅಲಂಕಾರ ಮಾಡಲಾಗಿತ್ತು.

ಬ್ರಹ್ಮರಥೋತ್ಸವದಲ್ಲಿ ಜಿಲ್ಲೆಯ ಹಾಗೂ ತಾಲ್ಲೂಕಿನ ಹಲವು ಗಣ್ಯರು, ಜನಪ್ರತಿನಿಧಿಗಳು, ಅಧಿಕಾರಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಮುಖಂಡರು ಭಾಗವಹಿಸಿದ್ದರು. ಬ್ರಹ್ಮರಥೋತ್ಸವದ ಜತೆಗೆ ಇತಿಹಾಸ ಪ್ರಸಿದ್ಧ ಕೆಂಗಲ್ ದನಗಳ ಜಾತ್ರೆ ಸಹ ಭಾನುವಾರ ಅಂತ್ಯ ಕಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.