ADVERTISEMENT

ಗ್ರಾಮೀಣ ಬಂದ್‌ ಬೆಂಬಲಿಸಿ

​ಪ್ರಜಾವಾಣಿ ವಾರ್ತೆ
Published 7 ಜನವರಿ 2020, 13:12 IST
Last Updated 7 ಜನವರಿ 2020, 13:12 IST

ಮಾಗಡಿ: ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ರಾಜ್ಯ ಸಮಿತಿಯ ಕರೆಯ ಮೇರೆಗೆ ತಾಲ್ಲೂಕು ಸಮಿತಿ ವತಿಯಿಂದ ಜ.8ರಂದು ಗ್ರಾಮೀಣ ಕರ್ನಾಟಕ ಬಂದ್ ಯಶಸ್ವಿಗೊಳಿಸಲು ಸಮಸ್ತ ಜನತೆ ಕೈಜೋಡಿಸಬೇಕು ಎಂದು ರಾಜ್ಯ ಸಮಿತಿ ಸದಸ್ಯೆ ಎಸ್.ಜಿ.ವನಜ ಮನವಿ ಮಾಡಿದರು.

ಸುದ್ಧಿಗಾರರೊಂದಿಗೆ ಅವರು ಮಾತನಾಡಿ, ರೈತರು, ಕೃಷಿ ಕೂಲಿಕಾರರ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಬಂದ್ ನಡೆಯಲಿದ್ದು, ವರ್ತಕರು ಅಂಗಡಿಗಳನ್ನು ಮುಚ್ಚಿ ಮುಷ್ಕರಕ್ಕೆ ಬೆಂಬಲ ಸೂಚಿಸಬೇಕು ಎಂದರು.

ಮುಷ್ಕರ

ADVERTISEMENT

ಕರ್ನಾಟಕ ರಾಜ್ಯ ಗ್ರಾಮಪಂಚಾಯಿತಿ ನೌಕರರ ಸಂಘದ ತಾಲ್ಲೂಕು ಸಮಿತಿ ಸಂಚಾಲಕ ನಾಗರಾಜು ಮಾತನಾಡಿ, ಪಂಚಾಯತ್ ರಾಜ್ ಸಂಸ್ಥೆಗಳಿಗೆ ಶೇ 95 ರಷ್ಟು ಅನುದಾನ ಕಡಿತ ವಿರೋಧಿಸಿ ಜ.8ರಂದು ಬೆಳಿಗ್ಗೆ 10ಕ್ಕೆ ಪುರಸಭೆ ಮುಂದಿನ ಕೆಂಪೇಗೌಡ ಪುತ್ಥಳಿ ಬಳಿಯಿಂದ ತಾಲ್ಲೂಕು ಪಂಚಾಯಿತಿ ಕಚೇರಿಯ ತನಕ ಸಾರ್ವತ್ರಿಕ ಮುಷ್ಕರ ಮತ್ತು ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂದರು. ಎರಡೂ ಸಂಘಟನೆಗಳ ಪದಾಧಿಕಾರಿಗಳು ಇದ್ದರು.

ಬಸ್‌ ಸಂಚಾರವಿದೆ

‘ಸಾರ್ವತ್ರಿಕ ಮುಷ್ಕರ ಇದ್ದರೂ ಸರ್ಕಾರಿ ಬಸ್‌ ಸಂಚಾರ ಮಾಮೂಲಿನಂತೆ ಇರುತ್ತದೆ. ನಮ್ಮ ಘಟಕದ ಎಲ್ಲ ಬಸ್‌ಗಳು ಸಂಚರಿಸಲಿವೆ’ ಎಂದು ಸರ್ಕಾರಿ ಬಸ್‌ ಡಿಪೊ ಮ್ಯಾನೇಜರ್‌ ನಟರಾಜ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.