ಚನ್ನಪಟ್ಟಣ: ತಾಲ್ಲೂಕಿನ ದೇವರ ಹೊಸಹಳ್ಳಿ ಹಾಗೂ ತಿಟ್ಟಮಾರನಹಳ್ಳಿ ಗ್ರಾಮಗಳ ನಡುವೆ ಬೆಂಗಳೂರು– ಮೈಸೂರು ದಶಪಥದಲ್ಲಿ ಸೋಮವಾರ ಮಧ್ಯರಾತ್ರಿ ಕೆಟ್ಟುನಿಂತಿದ್ದ ಕಾರಿನಲ್ಲಿದ್ದ ದಂಪತಿಯ ಚಿನ್ನಾಭರಣ ಮತ್ತು ನಗದು ದೋಚಲಾಗಿದೆ.
ಕೆಲಸದ ನಿಮಿತ್ತ ಬೆಂಗಳೂರಿಗೆ ತೆರಳಿದ್ದ ಮೈಸೂರಿನ ವೈದ್ಯ ಲೋಹಿತ್ ರಾವ್ ಮತ್ತು ಅವರ ಪತ್ನಿ ರಾತ್ರಿ ಕಾರಿನಲ್ಲಿ ವಾಪಸ್ಸು ಆಗುತ್ತಿದ್ದರು. ತಾಲ್ಲೂಕಿನ ದೇವರ ಹೊಸಹಳ್ಳಿ ಹಾಗೂ
ತಿಟ್ಟಮಾರನಹಳ್ಳಿ ದಶಪಥದಲ್ಲಿ ಕಾರು ಕೆಟ್ಟು ನಿಂತಿದೆ. ಆಗ ದಂಪತಿ ಹೆದ್ದಾರಿ ಸಹಾಯವಾಣಿ 1033 ಕ್ಕೆ ಕರೆ ಮಾಡಿದ್ದಾರೆ. ಆದರೆ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ.
ಈ ವೇಳೆ ಕಾರಿನಲ್ಲಿ ಕುಳಿತಿದ್ದ ದಂಪತಿ ಬಳಿಗೆ ಬೈಕ್ನಲ್ಲಿ ಬಂದ ಇಬ್ಬರು ಅಪರಿಚಿತರು ಚಾಕು ತೋರಿಸಿ ವೈದ್ಯರ ಪತ್ನಿಯ ಕೊರಳಲ್ಲಿದ್ದ ಚಿನ್ನಾಭರಣ ಹಾಗೂ ₹2.50 ಲಕ್ಷ ನಗದು ದೋಚಿ
ಪರಾರಿಯಾಗಿದ್ದಾರೆ. ಈ ಬಗ್ಗೆ ಮಂಗಳವಾರ ಬೆಳಿಗ್ಗೆ ಡಾ.ಲೋಹಿತ್ ರಾವ್ ಅವರು ಚನ್ನಪಟ್ಟಣದ ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
‘ದಶಪಥದಲ್ಲಿ ಪ್ರಯಾಣಿಕರಿಗೆ ಸುರಕ್ಷತೆ ಇಲ್ಲ’: ಬೆಂಗಳೂರು–ಮೈಸೂರು ದಶಪಥದಲ್ಲಿ ಪ್ರಯಾಣಿಸು ವವರಿಗೆ ಯಾವುದೇ ಸುರಕ್ಷತೆ ಇಲ್ಲ ಎಂದು ಡಾ.ಲೋಹಿತ್ ರಾವ್ ದೂರಿದ್ದಾರೆ.
‘ಹೆದ್ದಾರಿಯ ಸಹಾಯವಾಣಿ ಕಾರ್ಯನಿರ್ವಹಿಸುತ್ತಿಲ್ಲ. ವಿಶ್ರಾಂತಿ ತಾಣಗಳಿಲ್ಲ. ಬೀದಿದೀಪಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಹೆದ್ದಾರಿಯಲ್ಲಿ ಸಂಪೂರ್ಣ ಅಸುರಕ್ಷತೆ ಕಾಡುತ್ತಿದೆ’ ಎಂದು ಆರೋಪಿಸಿದ್ದಾರೆ.
‘ಹೆದ್ದಾರಿಯನ್ನು ಉತ್ತಮವಾಗಿ ನಿರ್ಮಾಣ ಮಾಡಿ ಇತರ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳದಿದ್ದದರೆ ಹೇಗೆ’ ಎಂದು ಅವರು ಪ್ರಶ್ನಿಸಿದ್ದಾರೆ. ಟೋಲ್ ಕಟ್ಟಿಸಿಕೊಳ್ಳುವವರು ಅಗತ್ಯ ಸೌಲಭ್ಯಗಳನ್ನೂ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.