
ಮಾಗಡಿ: ಇತ್ತೀಚಿಗೆ ನಡೆದ ಚಕ್ರಬಾವಿ ವಿಎಸ್ಎಸ್ಎನ್ ಚುನಾವಣೆ ಪಾರದರ್ಶಕವಾಗಿ ನಡೆದಿಲ್ಲ. ಚುನಾವಣೆಯಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ಮಾಜಿ ಶಾಸಕ ಎ.ಮಂಜುನಾಥ್ ಆರೋಪಿಸಿದ್ದಾರೆ.
ಫಲಿತಾಂಶ ತಡೆಹಿಡಿದು ಮರು ಚುನಾವಣೆ ಮಾಡಬೇಕು. ಈ ಬಗ್ಗೆ ಸಹಕಾರ ಇಲಾಖೆ ಹಾಗೂ ನ್ಯಾಯಲಯಕ್ಕೆ ದೂರು ನೀಡಲಾಗುವುದು ಜೆಡಿಎಸ್ ಕಚೇರಿಯಲ್ಲಿ ಬುಧವಾರ ಸುದ್ದಿಗಾರರಿಗೆ ತಿಳಿಸಿದರು.
‘ರಾಷ್ಟ್ರಪತಿ ಚುನಾವಣೆ ಗೆದ್ದ ರೀತಿ ಕಾಂಗ್ರೆಸ್ ಮುಖಂಡರು ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಈ ಚುನಾವಣೆ ಮಾಡಬಾರದಿತ್ತು. ನನ್ನಿಂದಾಗಿ ಈ ಚುನಾವಣೆ ನಡೆದಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. 40 ವರ್ಷಗಳಿಂದ ಕಾಂಗ್ರೆಸ್ ಕಪಿಮುಷ್ಠಿಯಲ್ಲಿರುವ ಚಕ್ರಬಾವಿ ಸೊಸೈಟಿಗೆ ಈ ಬಾರಿ ಚುನಾವಣೆ ನಡೆಯುವಂತಾಯಿತು’ ಎಂದರು.
ಪಾರದರ್ಶಕ ಚುನಾವಣೆ ನಡೆದಿಲ್ಲ. ಚುನಾವಣಾಧಿಕಾರಿ ಮಂಜುನಾಥ್ ಚುನಾವಣಾ ಅಕ್ರಮದಲ್ಲಿ ಶಾಮೀಲಾಗಿದ್ದಾರೆ. ಪೊಲೀಸ್ ಇಲಾಖೆ ಬಳಸಿಕೊಂಡು ತಮ್ಮ ಬೆಂಬಲಿಗರಿಗೆ 25 ರಿಂದ 30 ಮತ ಅಕ್ರಮವಾಗಿ ಹಾಕಿ ಚುನಾವಣೆ ಗೆದ್ದಿದ್ದಾರೆ ಎಂದು ಆರೋಪಿಸಿದರು.
ಈ ಚುನಾವಣೆ ಪಾರದರ್ಶಕವಾಗಿ ಇಲ್ಲ ಎಂದು ಎಆರ್, ಡಿಆರ್, ಜಾಯಿಂಟ್ ರಿಜಿಸ್ಟರ್, ಆರ್ ಸಿಎಸ್ಗೆ ದೂರು ನೀಡಲಾಗಿದೆ ಎಂದರು.
‘ಈ ಚುನಾವಣೆಗೆ ಅಮಾಯಕ ಬೆಂಬಲಿಗರನ್ನು ನಿಲ್ಲಿಸಿ ಬೀದಿಪಾಲು ಮಾಡಿದ್ದಾರೆ ಎಂದು ಬಾಲಕೃಷ್ಣ ಟೀಕೆಗೆ ತಿರುಗೇಟು ನೀಡಿದ ಅವರು, ಬೆಳಗುಂಬ ಚುನಾವಣೆಯಲ್ಲಿ ಒಂಬತ್ತು ಜನ ನಿಮ್ಮ ಬೆಂಬಲಿಗರು ಸೋತರಲ್ಲ, ಆ ಅಮಾಯಕರನ್ನು ನೀವು ಬೀದಿಪಾಲು ಮಾಡಲು ಚುನಾವಣೆಗೆ ನಿಲ್ಲಿಸಿದ್ರಾ’ ಎಂದು ಪ್ರಶ್ನಿಸಿದರು.
40 ವರ್ಷಗಳಿಂದ ಬಾಲಕೃಷ್ಣ ಕುಟುಂಬ ಆಡಳಿತ ನಡೆಸುತ್ತಿದ್ದು ಚಕ್ರಬಾವಿ ಸೊಸೈಟಿ ಕಟ್ಟಡವನ್ನು ಮನೆ ಹಣದಿಂದ ಕಟ್ಟಿದ್ದಾರಾ? ರೈತರು ಪ್ರತಿವರ್ಷ ಸಾಲದ ಬಡ್ಡಿ ಹಣದಲ್ಲಿ ಸೊಸೈಟಿ, ಬಿಡಿಸಿಸಿ ಬ್ಯಾಂಕ್ ಹಾಗೂ ನಿರ್ದೇಶಕರ ಜೀವನ ನಡೆಯುತ್ತಿದೆ ಎಂದರು.
ಕೆಸಿಸಿ ಕೃಷಿ ಸಾಲ ₹280 ಕೋಟಿ ಬರುತ್ತಿದೆ. ಶೇ. ಮೂರರಷ್ಟು ಕಮಿಷನ್ ನಿರ್ದೇಶಕರಿಗೆ ಹೋಗುತ್ತದೆ. ಪ್ರತಿ ವರ್ಷ ಶಾಸಕರ ಮನೆ ಬಾಗಿಲಿಗೆ ₹9 ರಿಂದ ₹10 ಕೋಟಿ ಹೋಗುತಿದೆ. ಇವರ ಹೆಂಡತಿ ಇವರ ಕುಟುಂಬಸ್ಥರು ಶಾಪಿಂಗ್ ಮಾಡಲು ಸೊಸೈಟಿಯ ಮುಖ್ಯ ಅಧಿಕಾರಿಗಳು ಇವರಿಗೆ ಹಣ ಕೊಡಬೇಕು ಎಂದರು.
ಕುದೂರು ಬಿಡಿಸಿಸಿ ಬ್ಯಾಂಕ್ ನಲ್ಲಿ ನಕಲಿ ಚಿನ್ನ ಇಟ್ಟು ₹18 ಕೋಟಿ ಹಣ ಲೂಟಿ ಮಾಡಿದ್ದು ಈ ಬಗ್ಗೆ ಕುದುರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಚಿನ್ನ ಪರೀಕ್ಷೆ ಮಾಡುವ ಇಬ್ಬರ ಮೇಲೆ ದೂರು ದಾಖಲಾಗಿದೆ. ಅವರ ಆಸ್ತಿಯನ್ನು ಕಾಂಗ್ರೆಸ್ ಪ್ರಭಾವಿ ಮಗನ ಹೆಸರಿನಲ್ಲಿ ಮಾಡಿಸಿಕೊಂಡು ನಂತರ ಶಾಸಕ ಬಾಲಕೃಷ್ಣ ಕುಟುಂಬದ ಹೆಣ್ಣು ಮಗಳ ಹೆಸರಿನಲ್ಲಿ ಜಿಪಿಎ ಮಾಡಿಸಲಾಗಿದೆ ಎಂದು ಎ.ಮಂಜು ಆರೋಪ ಮಾಡಿದರು.
ಚಕ್ರಬಾವಿ ಸೊಸೈಟಿಯಲ್ಲಿ 2018ರಲ್ಲಿ ಮುಖ್ಯಾಧಿಕಾರಿ ₹1.80 ಕೋಟಿಯನ್ನು ಚುನಾವಣೆಗೆ ಬಳಸಿಕೊಳ್ಳಲು ಬ್ಯಾಂಕಿನಿಂದ ಡ್ರಾ ಮಾಡಿ ಇಟ್ಟುಕೊಂಡಿದ್ದರು. ಇದು ನನಗೆ ಗೊತ್ತಾಗಿತ್ತು. ಆ ಸಮಯದಲ್ಲಿ ಪ್ರಕರಣ ಹೊರಬರದಂತೆ ರೈತರಿಗೆ ಹಣ ವಾಪಸ್ ಕೊಟ್ಟಿದ್ದು ತಾಲೂಕಿನ ಜನತೆಗೆ ಗೊತ್ತಿದೆ. ಇದು ಬಾಲಕೃಷ್ಣ ಅವರ ಪ್ರಬುದ್ಧ ರಾಜಕಾರಣ ಎಂದರು.
‘ನಾನು ಶಾಸಕನಾಗಿದ್ದ ಅವಧಿಯಲ್ಲಿ ವಿಎಸ್ಎಸ್ಎನ್ ಅಧಿಕಾರಿಗಳಿಂದ ಒಂದು ಕಾಫಿ ಕೂಡ ಕುಡಿದಿಲ್ಲ. ಇದು ನನ್ನ ರಾಜಕೀಯ ಬದ್ಧತೆ. ಬಿಡಿಸಿಸಿ ಬ್ಯಾಂಕ್ ಹಗರಣದಲ್ಲಿ ಜಾಮೀನಿನ ಮೇಲಿರುವ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಚ್ಎನ್ ಅಶೋಕ್ ಚುನಾವಣೆ ಎದುರಿಸಿದರು. ಇದು ಅವರ ಪ್ರಬುದ್ಧತೆ. ಎಂದು ವಾಗ್ದಾಳಿ ನಡೆಸಿದರು.
ಜೆಡಿಎಸ್ ಪಕ್ಷದ ಏಳಿಗೆಹಳ್ಳಿ ತಮ್ಮಣ್ಣ ಗೌಡ, ವಿಜಯಕುಮಾರ್, ಹೊಸಹಳ್ಳಿ ರಂಗಣಿ, ಕೋರಮಂಗಲ ಶ್ರೀನಿವಾಸ್, ಚಕ್ರಬಾವಿ ಪ್ರಸನ್ನ, ಅರಳುಕುಪ್ಪೆ ಗಿರಿಧರ್, ಬೆಳಗವಾಡಿ ರಂಗಸ್ವಾಮಿ, ಅಂಬಿ ವಿಜಿ, ಮರೂರು ಸಾಗರ್, ರಂಗಸ್ವಾಮಿ, ಕರಡಿ ನಾಗರಾಜು, ಜಯರಾಂ, ಕೆಂಪೇಗೌಡ, ನಾಗರಾಜು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.