ಗೀತಾ ಮತ್ತು ರಾಕಮ್ಮ
ಚನ್ನಪಟ್ಟಣ: ಬೆಂಗಳೂರಿನಲ್ಲಿ ಶನಿವಾರ ಸಂಭವಿಸಿದ ಅಪಘಾತದಲ್ಲಿ ಮೊಮ್ಮಗಳು ಮೃತಪಟ್ಟ ವಿಷಯ ಕೇಳಿದ ತಾಲ್ಲೂಕಿನ ವಿರೂಪಸಂದ್ರ ಗ್ರಾಮದಲ್ಲಿದ್ದ ಆಕೆಯ ಅಜ್ಜಿ ಹೃದಯಾಘಾತದಿಂದ ಮೃತಪಟ್ಟಿದ್ದಾಳೆ.
ಬೆಂಗಳೂರಿನ ರಾಜಾಜಿನಗರದಲ್ಲಿ ಸಂಭವಿಸಿದ ಅಪಘಾತದಲ್ಲಿ ಮೊಮ್ಮಗಳು ಗೀತಾ (21) ಮೃತಪಟ್ಟ ಸುದ್ದಿ ಕೇಳಿದ ಅಜ್ಜಿ ರಾಕಮ್ಮ (65) ಕುಸಿದು ಬಿದ್ದು ಹೃದಯಾಘಾದಿಂದ ಮೃತಪಟ್ಟರು.
ಮೂರು ತಿಂಗಳ ಹಿಂದೆ ಕನಕಪುರ ತಾಲ್ಲೂಕಿನ ಭೀಮಗೋಡನಹಳ್ಳಿ ಗ್ರಾಮದ ಸುನೀಲ್ ಎಂಬುವರ ಜೊತೆ ಗೀತಾ ಮದುವೆಯಾಗಿತ್ತು. ಬೆಂಗಳೂರಿನ ಮಲ್ಲೇಶ್ವರದಲ್ಲಿ ನೆಲೆಸಿದ್ದ ದಂಪತಿ, ಅಲ್ಲಿ ಪಾನಿಪುರಿ ಅಂಗಡಿ ಇಟ್ಟುಕೊಂಡಿದ್ದರು.
ದಂಪತಿ ಕಾರ್ಯನಿಮಿತ್ತ ಬೈಕ್ನಲ್ಲಿ ರಾಜಾಜಿ ನಗರಕ್ಕೆ ಹೋಗಿ ವಾಪಸ್ ಮಲ್ಲೇಶ್ವರಕ್ಕೆ ಬರುವಾಗ ಹಿಂದಿನಿಂದ ಬಂದ ಕಾರು ಬೈಕ್ ಗೆ ಡಿಕ್ಕಿ ಹೊಡೆಯಿತು.
ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ಗೀತಾ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟರು. ಪತಿ ಸುನೀಲ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ವಿರೂಪಸಂದ್ರ ಗ್ರಾಮದಲ್ಲಿದ್ದ ಅಜ್ಜಿ ರಾಕಮ್ಮ ಈ ಸುದ್ದಿ ಕೇಳಿ ಕುಸಿದು ಬಿದ್ದು, ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಒಂದೇ ಎರಡು ಜೀವಗಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮಟ್ಟಿತ್ತು.
ಗೀತಾ ಅವರ ಶವವನ್ನು ವಿರೂಪಸಂದ್ರ ಗ್ರಾಮಕ್ಕೆ ತರಲಾಯಿತು.ಗ್ರಾಮದ ರುದ್ರಭೂಮಿಯಲ್ಲಿ ಸಂಜೆ ಅಜ್ಜಿ ಹಾಗೂ ಮೊಮ್ಮಗಳನ್ನು ಅಂತ್ಯಕ್ರಿಯೆ ನೆರವೇರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.