
ಚನ್ನಪಟ್ಟಣ: ತಾಲ್ಲೂಕಿನ ಯಲಚಿಪಾಳ್ಯ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿರುವ ಖಾಸಗಿ ಜಮೀನೊಂದರಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ನೆಲೆಸಿದ್ದಾರೆ ಎಂಬ ಅನುಮಾನದ ಹಿನ್ನೆಲೆಯಲ್ಲಿ ಆಂತರಿಕ ಭದ್ರತಾ ಪಡೆಯ ಸಿಬ್ಬಂದಿ (ಐಎಸ್ ಡಿ) ಪರಿಶೀಲನೆ ನಡೆಸಿದ ಘಟನೆ ಸೋಮವಾರ ನಡೆದಿದೆ.
ಗ್ರಾಮದ ವ್ಯಕ್ತಿಯೊಬ್ಬರ ಜಮೀನಿನಲ್ಲಿ ಸುಮಾರು 12ಕ್ಕೂ ಹೆಚ್ಚು ಟೆಂಟ್ ಗಳನ್ನು ನಿರ್ಮಿಸಿಕೊಂಡು 24 ಮಂದಿ ಅಪರಿಚಿತರು ವಾಸಿಸುತ್ತಿದ್ದಾರೆ. ಪ್ಲಾಸ್ಟಿಕ್ ಪೇಪರ್, ಬಾಟಲಿಗಳನ್ನು ಆಯುವ ಕೆಲಸ ಮಾಡುತ್ತಿರುವ ಇವರು ಬಾಂಗ್ಲಾ ದೇಶದ ನಿವಾಸಿಗಳಂತೆ ಕಾಣುತ್ತಿದ್ದಾರೆ ಎಂದು ಆಜಾದ್ ಬಿಗ್ರೇಡ್ ಸಂಘಟನೆಯವರು ನೀಡಿದ ಮಾಹಿತಿ ಮೇರೆಗೆ ಇಲಾಖೆಯ ಅಧಿಕಾರಿ ಕಾರ್ತಿಕ್ ಹಾಗೂ ಇತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಅಲ್ಲಿ ನೆಲೆಸಿರುವರ ದಾಖಲಾತಿಗಳನ್ನು ಪರಿಶೀಲನೆ ನಡೆಸಿದಾಗ ಅವರು ಅಸ್ಸಾಂನಿಂದ ಬಂದಿರುವುದಾಗಿ ಮಾಹಿತಿ ಲಭ್ಯವಾಗಿದೆ. ಈ ಹಿಂದೆ ಇವರುಗಳು ಕುಂಬಳಗೂಡು ಬಳಿಯಲ್ಲಿ ಟೆಂಟ್ ಹಾಕಿಕೊಂಡು ನೆಲೆಸಿದ್ದರು. ಇವರುಗಳನ್ನು ಚನ್ನಪಟ್ಟಣದ ವಾಸಿ ಅಜರ್ ಎಂಬಾತ ಚನ್ನಪಟ್ಟಣಕ್ಕೆ ಕರೆದುಕೊಂಡು ಬಂದು ಅವರೆಲ್ಲರಿಗೂ ಸ್ವಾಮಿ ಎಂಬುವರ ಜಮೀನನ್ನು ಬಾಡಿಗೆಗೆ ಪಡೆದು ಟೆಂಟ್ ಗಳನ್ನು ನಿರ್ಮಿಸಿಕೊಟ್ಟಿದ್ದಾರೆ ಎಂದು ಇಲಾಖೆಯ ಸಿಬ್ಬಂದಿ ತಿಳಿಸಿದರು.
ಇಲ್ಲಿ ನೆಲೆಸಿರುವ ವಾಸಿಗಳ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಆಜಾದ್ ಬ್ರಿಗೇಡ್ ಸಂಘಟನೆಯ ಕಾರ್ಯಕರ್ತರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಚನ್ನಪಟ್ಟಣ ಉಪ ವಿಭಾಗದ ಡಿ ವೈ ಎಸ್ ಪಿ ಅವರನ್ನು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.