ADVERTISEMENT

ಚನ್ನಪಟ್ಟಣ ವಿಧಾನಸಭಾ ಉಪ ಚುನಾವಣೆ; ದೆಹಲಿಯಲ್ಲಿ ಅಂತಿಮ ನಿರ್ಧಾರ: ಸಿಪಿವೈ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2024, 7:19 IST
Last Updated 6 ಆಗಸ್ಟ್ 2024, 7:19 IST
ಸಿ.ಪಿ. ಯೋಗೇಶ್ವರ್
ಸಿ.ಪಿ. ಯೋಗೇಶ್ವರ್   

ಚನ್ನಪಟ್ಟಣ: ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯಾಗುವ ನೀರಿಕ್ಷೆ ಇತ್ತು. ಅದಕ್ಕೆ ಪೂರಕ ವಾತಾವರಣವೂ ಇತ್ತು. ಆದರೆ ಕೆಲವು ರಾಜಕೀಯ ಕಾರಣಗಳಿಂದ ಅಪಸ್ಪರ ಕೇಳಿ ಬರುತ್ತಿದೆ. ದೆಹಲಿಯಿಂದ ಅಂತಿಮ ನಿರ್ಧಾರ ಹೊರ ಬೀಳಲಿದೆ ಎಂದು ಸಿ.ಪಿ. ಯೋಗೇಶ್ವರ್ ತಿಳಿಸಿದರು.

ಚನ್ನಪಟ್ಟಣ ಉಪ ಚುನಾವಣೆ ಸ್ಪರ್ಧೆ ವಿಚಾರವಾಗಿ ಚರ್ಚಿಸಲು ಸಂಸದ ಬಸವರಾಜ ಬೊಮ್ಮಾಯಿ ಭೇಟಿಯಾಗುವಂತೆ ತಿಳಿಸಿದ್ದಾರೆ. ಪಕ್ಷ ಏನೇ ತೀರ್ಮಾನ ತೆಗೆದುಕೊಳ್ಳಲಿ. ಅದಕ್ಕೂ ಮಿಗಿಲಾಗಿ ಅಭಿಮಾನಿಗಳು, ಹಿತೈಷಿಗಳು ತೆಗೆದುಕೊಳ್ಳುವ ತೀರ್ಮಾನ ಮುಖ್ಯ ಎಂದು ಸ್ಪಷ್ಟಪಡಿಸಿದರು.

‘ಚುನಾವಣೆಗಳು ನನಗೆ ಹೊಸದಲ್ಲ. ಈವರೆಗೆ ಒಂಬತ್ತು ಚುನಾವಣೆ ಎದುರಿಸಿದ್ದೇನೆ. ಕ್ಷೇತ್ರದ ಅಭಿವೃದ್ಧಿ  ಹಿತದೃಷ್ಟಿಯಿಂದ ಹಲವು ರಾಜಕೀಯ ನಿರ್ಧಾರ ತೆಗೆದುಕೊಂಡಾಗಲೂ ತಾಲ್ಲೂಕಿನ ಜನ ನನ್ನ ಜೊತೆ ನಿಂತಿದ್ದಾರೆ. ಇಬ್ಬರು ಪ್ರಬಲರ ನಡುವೆ ತಾಲ್ಲೂಕಿನವನಾದ ನನ್ನನ್ನು ಈಗಲೂ ಕೈಹಿಡಿದು ಮುನ್ನಡೆಸುತ್ತಾರೆ ಎಂಬ ನಂಬಿಕೆ ಇದೆ’ ಎಂದು ಬಂಡಾಯದ ಸೂಚನೆ ನೀಡಿದರು.

ADVERTISEMENT

‘ನನ್ನ ರಾಜಕೀಯ ಜೀವನದಲ್ಲಿ ಬೆಂಬಲಿಗರು ಹಾಗೂ ಹಿತೈಷಿಗಳ ಪಾತ್ರ ಅಪಾರವಾಗಿದೆ. ಹಾಗಾಗಿ ಮುಂಬರುವ ಉಪ ಚುನಾವಣೆ ವಿಚಾರವಾಗಿ ಅಂದು ನನ್ನ ಬೆಂಬಲಿಗರು ಹಾಗೂ ಹಿತೈಷಿಗಳು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧವಾಗಿರುತ್ತೇನೆ’ ಎಂದು ಘೋಷಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.