ADVERTISEMENT

ಚನ್ನಪಟ್ಟಣ | ₹200 ಕೋಟಿ ಅನುದಾನಕ್ಕೆ ಪ್ರಸ್ತಾವ: ಸಿ.ಪಿ.ಯೋಗೇಶ್ವರ್

ಚನ್ನಪಟ್ಟಣ ತಾಲ್ಲೂಕಿನಲ್ಲಿ ಬಾಕಿ ಇರುವ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2025, 5:00 IST
Last Updated 5 ನವೆಂಬರ್ 2025, 5:00 IST
ಚನ್ನಪಟ್ಟಣ ತಾಲ್ಲೂಕಿನ ತಗಚಗೆರೆ ಗ್ರಾಮ ಪಂಚಾಯಿತಿ ನೂತನ ಕಟ್ಟಡವನ್ನು ಶಾಸಕ ಸಿ.ಪಿ.ಯೋಗೇಶ್ವರ್ ಉದ್ಘಾಟಿಸಿದರು. ಗ್ರಾ.ಪಂ.ಅಧ್ಯಕ್ಷೆ ಸಿ.ಎನ್.ಗೀತಾ ಶಿವಕುಮಾರ್ ಇತರರು ಹಾಜರಿದ್ದರು
ಚನ್ನಪಟ್ಟಣ ತಾಲ್ಲೂಕಿನ ತಗಚಗೆರೆ ಗ್ರಾಮ ಪಂಚಾಯಿತಿ ನೂತನ ಕಟ್ಟಡವನ್ನು ಶಾಸಕ ಸಿ.ಪಿ.ಯೋಗೇಶ್ವರ್ ಉದ್ಘಾಟಿಸಿದರು. ಗ್ರಾ.ಪಂ.ಅಧ್ಯಕ್ಷೆ ಸಿ.ಎನ್.ಗೀತಾ ಶಿವಕುಮಾರ್ ಇತರರು ಹಾಜರಿದ್ದರು   

ಚನ್ನಪಟ್ಟಣ: ತಾಲ್ಲೂಕಿನಲ್ಲಿ ಬಾಕಿ ಇರುವ ಕಾಮಗಾರಿ ಪೂರ್ಣಗೊಳಿಸಲು ₹200ಕೋಟಿ ವೆಚ್ಚದ ಕ್ರಿಯಾ ಯೋಜನೆ ತಯಾರಿಸಲಾಗಿದ್ದು, ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ತಿಳಿಸಿದರು.

ತಾಲ್ಲೂಕಿನ ತಗಚಗೆರೆ ಗ್ರಾಮ ಪಂಚಾಯಿತಿ ನೂತನ ಕಟ್ಟಡವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಮೂಲ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಬಾಕಿ ಇರುವ ಪೈಪ್‌ಲೈನ್ ಕಾಮಗಾರಿ, ರಸ್ತೆ, ಚರಂಡಿ ಕಾಮಗಾರಿ ಪಟ್ಟಿ ಮಾಡಲಾಗಿದೆ. ಇವುಗಳನ್ನು ಪೂರ್ಣ ಮಾಡಲು ₹200ಕೋಟಿ ಅನುದಾನಕ್ಕಾಗಿ ಮುಖ್ಯಮಂತ್ರಿಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದರು.

ಸರ್ಕಾರದ ಎಲ್ಲ ಯೋಜನೆಗಳು ಗ್ರಾಮ ಪಂಚಾಯಿತಿ ಆಡಳಿತದ ಮೂಲಕವೇ ಜಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಗ್ರಾ.ಪಂ ಸದಸ್ಯರು ಪ್ರಾಮಾಣಿಕವಾಗಿ ಶ್ರಮಿಸಿದರೆ ಗ್ರಾಮೀಣ ಭಾಗ ಅಭಿವೃದ್ಧಿಯಾಗುತ್ತದೆ. ಗ್ರಾ.ಪಂ.ಸದಸ್ಯರು ತಮಗೆ ಮತ ಹಾಕಿದ ಮತದಾರರಿಗೆ ಪ್ರಾಮಾಣಿಕ ಸೇವೆ ಮಾಡಬೇಕು ಎಂದು ಕಿವಿಮಾತು ಹೇಳಿದರು.

ADVERTISEMENT

ಕೆರೆಗಳಿಗೆ ನೀರು: ಕೆಆರ್‌ಎಸ್‌ನಲ್ಲಿ ಸದ್ಯ 124 ಅಡಿ ನೀರು ಇದೆ. ತಾಲ್ಲೂಕಿನ ಪ್ರತಿ ಕೆರೆಗಳಿಗೆ ಬೇಸಿಗೆಯಲ್ಲೂ ಎರಡು ಬಾರಿ ನೀರನ್ನು ತುಂಬಿಸಿ ಅಂತರ್ಜಲ ಹೆಚ್ಚಳ ಮಾಡಬಹುದು. ಈ ನಿಟ್ಟಿನಲ್ಲಿ ಸಣ್ಣ ಕೆರೆಗಳಿಗೂ ನೀರನ್ನು ತುಂಬಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ತಾಲ್ಲೂಕಿನ ಎಲ್ಲ 32 ಗ್ರಾಮ ಪಂಚಾಯಿತಿಗಳಿಗೆ ಒಂದೊಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿರ್ಮಾಣ ಮಾಡಲು ಸರ್ಕಾರ ಆದೇಶ ಹೊರಡಿಸಿದೆ ಎಂದು ತಿಳಿಸಿದರು.

ಗ್ರಾ.ಪಂ. ವ್ಯಾಪ್ತಿಯ ಹೈನೋದ್ಯಮಕ್ಕೆ ಹೆಚ್ಚು ಉತ್ತೇಜನ ನೀಡುವ ನಿಟ್ಟಿನಲ್ಲಿ ಡಿಸಿಸಿ ಬ್ಯಾಂಕ್ ಮೂಲಕ ಎರಡು ಹಸುಗಳನ್ನು ಕೊಳ್ಳಲು ₹1.80ಲಕ್ಷ ಸಾಲ ಸೌಲಭ್ಯ ನೀಡಲಾಗುವುದು ಎಂದು ತಿಳಿಸಿದರು.

ಗ್ರಾ.ಪಂ.ಅಧ್ಯಕ್ಷೆ ಸಿ.ಎನ್.ಗೀತಾ ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಗ್ಯಾರಂಟಿ ಯೋಜನೆಗಳ ತಾಲ್ಲೂಕು ಅಧ್ಯಕ್ಷ ಬೋರ್ ವೆಲ್ ರಂಗನಾಥ್, ಮುಖಂಡರಾದ ಅಣ್ಣಯ್ಯ, ಮಹಾಲಿಂಗು, ಗ್ರಾ.ಪಂ.ಉಪಾಧ್ಯಕ್ಷ ಬಿ.ವೆಂಕಟೇಶ್, ಸದಸ್ಯರಾದ ಅಂದಾನಯ್ಯ, ಶಿವರಾಮು, ಟಿ.ಎನ್.ಭುವನೇಶ್ವರಿ, ರಮ್ಯ, ಬಿ.ಆರ್.ಮಂಜುಳ, ಕೆ.ಎ.ಗೀತಾ, ಪ್ರಸನ್ನ, ವೆಂಕಟಗಿರಿ, ಆರ್.ಸುಧಾ, ಎಂ.ನೇತ್ರಾ, ಟಿ.ಉಮೇಶ್, ಜಯರಾಮು, ಗೌರಮ್ಮ, ತಾರಾ, ಟಿ.ಎನ್.ಲಕ್ಷ್ಮೀಶ, ನಾಗಮ್ಮ, ಪಿಡಿಒ ಶ್ವೇತಾ, ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.