
ಚನ್ನಪಟ್ಟಣ: ರೈತ ಹಾಗೂ ಕವಿ ಸಮಾಜದ ಎರಡು ಕಣ್ಣುಗಳಿದ್ದಂತೆ. ರೈತ ಸುಗ್ಗಿ ಹಬ್ಬ ಸಂಕ್ರಾಂತಿ ಮಾಡಿದರೆ, ಕವಿ ಕಾವ್ಯದ ಮೂಲಕ ಸಾಮಾಜಿಕ ಕ್ರಾಂತಿ ಮಾಡುತ್ತಾನೆ ಎಂದು ಜಾನಪದ ವಿದ್ವಾಂಸ ಚಕ್ಕೆರೆ ಶಿವಶಂಕರ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ವಂದಾರಗುಪ್ಪೆಯಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಕಸಾಪದಿಂದ ಬುಧವಾರ ನಡೆದ ಸಂಕ್ರಾಂತಿ ಕವಿಗೋಷ್ಠಿ ಹಾಗೂ ಗೀತಗಾಯನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾವ್ಯವೆಂಬುದು ಸೃಜನಶೀಲ ಪ್ರಕ್ರಿಯೆ. ಕಾವ್ಯವೆಂಬುದು ಸಾಧಾರಣವಾದುದಲ್ಲ. ಭಾವನೆಗಳನ್ನು ಹೊರಹರಿಸುವುದಕ್ಕೆ ಭಾಷೆಯ ಮುಖಾಂತರ ರೂಪ ಕೊಡುವುದು ಕಾವ್ಯ. ಕವಿ ಸಾಮಾಜಿಕ ಹೊಣೆಗಾರಿಕೆಯನ್ನು ಹೊತ್ತಿರಬೇಕು ಎಂದರು.
ದೀರ್ಘವಾದ ಕತ್ತಲೆಯಿಂದ ಸುದೀರ್ಘವಾದ ಬೆಳಕಿನೆಡೆಗೆ ಸಾಗುವುದೇ ಸಂಕ್ರಾಂತಿ. ಸಂಕ್ರಾಂತಿಯ ನಿಜವಾದ ಅರ್ಥ ಮನುಷ್ಯನನ್ನು ಅಜ್ಞಾನದಿಂದ ಜ್ಞಾನದ ಕಡೆಗೆ ಕರೆದೊಯ್ಯುವುದು. ಸಮ್ಮಿಲನ, ಸ್ನೇಹ, ಸೌಹಾರ್ದ, ಭಾವೈಕ್ಯ ಸಾರುವುದೇ ಸಂಕ್ರಾಂತಿ ಎಂದರು.
ವಂದಾರಗುಪ್ಪೆ ವಿಎಸ್ಎಸ್ಎನ್ ಅಧ್ಯಕ್ಷ ವಿ.ಬಿ. ಚಂದ್ರು ಮಾತನಾಡಿ, ಅಂಧಕಾರದಲ್ಲಿರುವ ಸಮಾಜಕ್ಕೆ ಕವಿಗಳು ಕಾವ್ಯಗಳ ಮೂಲಕ ಕಣ್ಣು ತೆರೆಸಬೇಕಿದೆ ಎಂದು ಹೇಳಿದರು.
ಕಸಾಪ ಜಿಲ್ಲಾಧ್ಯಕ್ಷ ಬಿ.ಟಿ. ನಾಗೇಶ್ ಮಾತನಾಡಿ, ಯುವ ಸಮುದಾಯ ಸ್ವಾರ್ಥಕ್ಕಾಗಿ ಕವಿತೆಗಳನ್ನು ರಚಿಸಿದೆ ಸಮಾಜದ ಹಿತಕ್ಕಾಗಿ ಕವಿತೆಗಳನ್ನು ಬರೆಯಬೇಕಿದೆ ಎಂದರು.
ವಿಎಸ್ಎಸ್ಎನ್ ನಿರ್ದೇಶಕ ರಾಂಪುರ ರಾಜಣ್ಣ, ಗ್ರಾ.ಪಂ. ಸದಸ್ಯ ಎಸ್.ಪ್ರಭಾಕರ್, ಎಂಪಿಸಿಎಸ್ ಅಧ್ಯಕ್ಷ ಎನ್.ರಾಜೇಶ್, ತಾಲ್ಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ ಶ್ರೀನಿವಾಸ ರಾಂಪುರ, ನಿವೃತ್ತ ಅಧ್ಯಾಪಕ ಚನ್ನವೀರೇಗೌಡ, ಜಿಲ್ಲಾ ಸಂಚಾಲಕ ಚಕ್ಕೆರೆ ಪುಟ್ಟಸ್ವಾಮಿ, ವೀಣಾ ಇದ್ದರು.
ಬಿ.ಚಲುವರಾಜು, ಕೂ.ಗಿ.ಗಿರಿಯಪ್ಪ, ಕೂರಣಗೆರೆ ಕೃಷ್ಣಪ್ಪ, ಮಂಜೇಶ್ ಬಾಬು, ಎಂ.ಶ್ರೀನಿವಾಸ್, ಡಾ.ಹೇಮಂತ್ ಕುಮಾರ್, ಬಸವರಾಜು ಅರಳಾಪುರ ಕವಿತೆ ವಾಚಿಸಿದರು. ಗಾಯಕರಾದ ಗೋವಿಂದಹಳ್ಳಿ ಶಿವಣ್ಣ, ಕೆಂಗಲ್ ವಿನಯ್ ಕುಮಾರ್, ರಾಮಕೃಷ್ಣಯ್ಯ ಬ್ರಹ್ಮಣೀಪುರ ಗೀತಗಾಯನ ನಡೆಸಿಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.