ADVERTISEMENT

ಚನ್ನಪಟ್ಟಣ | ಗ್ರಾ.ಪಂ ವ್ಯಾಪ್ತಿಯಲ್ಲಿ ರೈತರ ಕುಂದುಕೊರತೆ ಸಭೆ: ತಹಶೀಲ್ದಾರ್

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 5:43 IST
Last Updated 23 ಡಿಸೆಂಬರ್ 2025, 5:43 IST
ಚನ್ನಪಟ್ಟಣದ ತಾ.ಪಂ. ಸಭಾಂಗಣದಲ್ಲಿ ನಡೆದ ರೈತರ ಕುಂದುಕೊರತೆ ಸಭೆಯಲ್ಲಿ ತಹಶೀಲ್ದಾರ್ ಬಿ.ಎನ್. ಗಿರೀಶ್, ತಾ.ಪಂ. ಇಒ ಸಂದೀಪ್, ಪೊಲೀಸ್‌ ಅಧಿಕಾರಿಗಳಾದ ಪ್ರಕಾಶ್, ರವಿಕಿರಣ್, ನಗರಸಭಾ ಆಯುಕ್ತ ಮಹೇಂದ್ರ ಹಾಜರಿದ್ದರು
ಚನ್ನಪಟ್ಟಣದ ತಾ.ಪಂ. ಸಭಾಂಗಣದಲ್ಲಿ ನಡೆದ ರೈತರ ಕುಂದುಕೊರತೆ ಸಭೆಯಲ್ಲಿ ತಹಶೀಲ್ದಾರ್ ಬಿ.ಎನ್. ಗಿರೀಶ್, ತಾ.ಪಂ. ಇಒ ಸಂದೀಪ್, ಪೊಲೀಸ್‌ ಅಧಿಕಾರಿಗಳಾದ ಪ್ರಕಾಶ್, ರವಿಕಿರಣ್, ನಗರಸಭಾ ಆಯುಕ್ತ ಮಹೇಂದ್ರ ಹಾಜರಿದ್ದರು   

ಚನ್ನಪಟ್ಟಣ: ರೈತರ ಸಮಸ್ಯೆ ಆಲಿಸಿ ಪರಿಹಾರ ಕಂಡು ಹಿಡಿಯಲು ಮುಂದಿನ ತಿಂಗಳಿನಿಂದ ಗ್ರಾಮ ಪಂಚಾಯಿತಿವಾರು ರೈತರ ಕುಂದುಕೊರತೆ ಸಭೆ ನಡೆಸಲಾಗುವುದು ಎಂದು ತಹಶೀಲ್ದಾರ್ ಬಿ.ಎನ್. ಗಿರೀಶ್ ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ರೈತರ ಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡಿದರು.

ಗ್ರಾಮ ಪಂಚಾಯಿತಿ ಅಧಿಕಾರಿಗಳು ಲಭ್ಯವಾಗುತ್ತಿಲ್ಲ. ಇದರಿಂದ ರೈತರ ಕೆಲಸ ಆಗುತ್ತಿಲ್ಲ ಎಂದು ರೈತರು ಆರೋಪ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್‌, ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಗ್ರಾಮ ಸಹಾಯಕರು ರೈತರ ಕುಂದುಕೊರತೆ ಆಲಿಸಿ, ಪರಿಹಾರ ನೀಡಬೇಕು. ಇಲ್ಲವಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ADVERTISEMENT

ತಾಲ್ಲೂಕಿನ ಬಹುತೇಕ ಕಡೆ ಸರ್ಕಾರಿ ಆಸ್ತಿ ಒತ್ತುವರಿಯಾಗಿವೆ. ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂಬುವುದು ರೈತರ ಮತ್ತೊಂದು ಆರೋಪ ಮಾಡಿದರು.

ಇದಕ್ಕೆ ತಹಶೀಲ್ದಾರ್‌, ತಾಲ್ಲೂಕಿನಲ್ಲಿ ಸರ್ಕಾರಿ ಆಸ್ತಿ ಒತ್ತುವರಿಯಾದರೆ ಯಾವ ಇಲಾಖೆಯ ಆಸ್ತಿ ಒತ್ತುವರಿಯಾಗಿದೆಯೋ ಆ ಇಲಾಖೆಯನ್ನು ಹೊಣೆ ಮಾಡಿ ಇಲಾಖೆಯ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
 
ತಾಲ್ಲೂಕಿನಲ್ಲಿನ ಬಹುತೇಕ ಸರ್ಕಾರಿ ಕೆರೆ, ಕಟ್ಟೆಗಳ ಒತ್ತುವರಿಯನ್ನು ಈಗಾಗಲೆ ತೆರವು ಮಾಡಲಾಗಿದೆ. ಈ ಜಾಗಗಳು ಮತ್ತೆ ಒತ್ತುವರಿಯಾದರೆ ಅದರ ಹೊಣೆ ಕಂದಾಯ ಇಲಾಖೆ ಅಧಿಕಾರಿಗಳದ್ದೇ ಆಗಿರುತ್ತದೆ ಎಂದರು.

ಸಭೆಯಲ್ಲಿ ಕಂದಾಯ ಹಾಗೂ ಸರ್ವೆ ಇಲಾಖೆಗೆ ಸಂಬಂಧಿಸಿದಂತೆ ಹೆಚ್ಚಿನ ಸಮಸ್ಯೆಗಳು ಚರ್ಚೆಗೆ ಬಂದವು. ರೈತರ  ಸಮಸ್ಯೆಗಳಿಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳ ವ್ಯಾಪ್ತಿಯ 66 ವಿಷಯಗಳನ್ನು ಪಟ್ಟಿ ಮಾಡಲಾಗಿತ್ತು.  ಸಮಯದ ಅಭಾವದ ಕಾರಣ 20 ವಿಷಯ ಮಾತ್ರ ಚರ್ಚೆಗೆ ಬಂದವು. ಸಭೆಯನ್ನು ಮುಂದಿನ ವಾರಕ್ಕೆ ಮುಂದೂಡಲಾಯಿತು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಂದೀಪ್, ಗ್ರಾಮಾಂತರ ಸರ್ಕಲ್ ಇನ್‌ಸ್ಪೆಕ್ಟರ್ ಪ್ರಕಾಶ್, ಪುರ ಸರ್ಕಲ್ ಇನ್ ಸ್ಪೆಕ್ಟರ್ ರವಿಕಿರಣ್, ನಗರಸಭಾ ಆಯುಕ್ತ ಮಹೇಂದ್ರ, ಹೊಂಬಾಳೆಗೌಡ, ಮಲ್ಲಿಕಾರ್ಜುನ, ರುದ್ರಪ್ಪ, ಜಯರಾಮು, ರವೀಂದ್ರ, ರಾಜು, ರಾಮು, ರಾಮಕೃಷ್ಣ, ಬಸವೇಶ್, ಲಕ್ಷ್ಮಣ, ರುದ್ರೇಗೌಡ, ರಮೇಶ್ ಸೇರಿದಂತೆ ಅನೇಕ ರೈತರು ಭಾಗವಹಿಸಿದ್ದರು.

ಕಾಡಾನೆ ಹಾವಳಿಗೆ ಶೀಘ್ರ ಮುಕ್ತಿ

ತಾಲ್ಲೂಕಿನಲ್ಲಿ ರೈತರ ಬೆಳೆಗಳ ಮೇಲೆ ಕಾಡಾನೆ ಕಾಡುಹಂದಿ ನವಿಲು ಸೇರಿದಂತೆ ಕಾಡುಪ್ರಾಣಿಗಳ ಹಾವಳಿಯನ್ನು ತಡೆಗಟ್ಟುವಳ್ಳಿ ಅರಣ್ಯ ಇಲಾಖೆ ವಿಫಲವಾಗಿದೆ. ಕಾಡಾನೆಗಳ ಹಾವಳಿಯಂತು ಮಿತಿಮೀರಿದೆ ಎಂದು ರೈತ ಮುಖಂಡ ಸಿ.ಪುಟ್ಟಸ್ವಾಮಿ ಆರೋಪಿಸಿದರು.ಕಾಡಾನೆಗಳನ್ನು ಕಾಡಿಗಟ್ಟಲು ಕ್ರಮ ವಹಿಸಲಾಗುತ್ತಿದೆ. ಜೊತೆಗೆ ಜಿಲ್ಲೆಯ ಗಡಿದಾಟಿ ಕಾಡಾನೆಗಳು ಬಾರದಂತೆ ಬ್ಯಾರಿಕೇಡ್ ನಿರ್ಮಾಣ ಮಾಡಲಾಗುತ್ತಿದೆ. ಕಾಮಗಾರಿ ತ್ವರಿತವಾಗಿ ನಡೆಯುತ್ತಿದೆ. ಕಾಮಗಾರಿ ಶೀಘ್ರ ಪೂರ್ಣವಾದರೆ ಕಾಡಾನೆಗಳ ಹಾವಳಿಗೆ ಶಾಶ್ವತ ಮುಕ್ತಿ ಸಿಗಲಿದೆ ಎಂದು ಅರಣ್ಯ ಇಲಾಖೆ ವಲಯ ಅರಣ್ಯಾಧಿಕಾರಿ ಮಲ್ಲೇಶ್ ಭರವಸೆ ನೀಡಿದರು. ಕಾಡಾನೆ ದಾಳಿಯಿಂದ ನಷ್ಟ ಅನುಭವಿಸಿದ ರೈತರಿಗೆ ವೈಜ್ಞಾನಿಕ ಪರಿಹಾರ ನೀಡುವ ಕುರಿತು ಸರ್ಕಾರಕ್ಕೆ ಅರಣ್ಯ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ. ಬೆಳೆನಷ್ಟದ ಪರಿಹಾರ ವಿಳಂಬ ಆಗಿರುವ ಬಗ್ಗೆಯೂ ಸರ್ಕಾರದ ಗಮನ ಸೆಳೆಯಲಾಗಿದೆ ಎಂದು ತಿಳಿಸಿದರು.

ಉತ್ತರಿಸಲು ತಡವರಿಸಿದ ಅಧಿಕಾರಿ

ಸರ್ಕಾರಿ ರೇಷ್ಮೆ ಬಿತ್ತನೆ ಕೋಠಿಯ ರೇಷ್ಮೆ ಮೊಟ್ಟೆಗಳು ಸಂಪೂರ್ಣ ಕಳಪೆಯಾಗಿವೆ. ಸರ್ಕಾರ ಸಾಕಷ್ಟು ಸೌಲಭ್ಯ ನೀಡುತ್ತಿದ್ದರೂ ಸಹ ರೈತರಿಗೆ ಉತ್ತಮ ಗುಣಮಟ್ಟದ ರೇಷ್ಮೆ ಬಿತ್ತನೆ ಮೊಟ್ಟೆ ನೀಡುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ರೇಷ್ಮೆ ಬೆಳೆಗಾರರಿಗೆ ಇಲಾಖೆ ವತಿಯಿಂದ ಒದಗಿಸಲಾಗಿರುವ ಉಚಿತ ಔಷಧಿ ಪರಿಕರ ಮತ್ತು ಸಾಕಾಣಿಕೆ ಮನೆಗಳು ಸಮರ್ಪಕವಾಗಿ ಸಿಗುತ್ತಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು. ಸಭೆಯಲ್ಲಿ ಹಾಜರಿದ್ದ ರೇಷ್ಮೆ ಇಲಾಖೆಯ ಕಿರಿಯ ಅಧಿಕಾರಿಯೊಬ್ಬರು ಈ ಆರೋಪಗಳಿಗೆ ಉತ್ತರಿಸಲು ತಡವರಿಸಿದರು. ಮುಂದಿನ ವಾರ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ರೈತರ ಪತ್ಯೇಕ ಸಭೆ ಮಾಡೋಣ ಎಂದು ತಹಶೀಲ್ದಾರ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.