ರಾಮನಗರ: ಆಟಿಕೆಗಳ ಮಾರಾಟ ಪ್ರೋತ್ಸಾಹಿಸುವ ದಿಸೆಯಲ್ಲಿ ಕೇಂದ್ರ ಸರ್ಕಾರ ಪ್ರಥಮ ಬಾರಿಗೆ 'ದಿ ಇಂಡಿಯಾ ಟಾಯ್ ಫೇರ್'ಪ್ರದರ್ಶನ ಹಮ್ಮಿಕೊಂಡಿದ್ದು, ಇದಕ್ಕೆ ಚನ್ನಪಟ್ಟಣದ ಕರಕುಶಲಿಗರೂ ಆಯ್ಕೆಯಾಗಿದ್ದಾರೆ.
ಇದೇ ತಿಂಗಳ 27ರಿಂದ ಮಾರ್ಚ್ 2ರ ವರೆಗೆ ಈ ಪ್ರದರ್ಶನ ನಡೆಯಲಿದೆ. ಇದರ ಎಕ್ಸ್ಪೋರ್ಟ್ ಪ್ರಮೋಷನ್ ಕೌನ್ಸಿಲ್ ಫಾರ್ ಹ್ಯಾಂಡಿಕ್ರಾಫ್ಟ್ (ಇಸಿಪಿಎಚ್) ಮತ್ತು ಡಿಸಿಎಚ್ ಸಂಸ್ಥೆಗಳು ಇದರ ಉಸ್ತುವಾರಿ ಹೊತ್ತಿವೆ. ಈ ಕಾರ್ಯಕ್ರಮ ಸಂಪೂರ್ಣ ಆನ್ಲೈನ್ಮಯವಾಗಿದ್ದು, ಸ್ಥಳೀಯ ಮಟ್ಟದ ಗೊಂಬೆ ತಯಾರಕರು ಭಾಗಿ ಆಗಲಿದ್ದಾರೆ.
ರಾಜ್ಯದಲ್ಲಿ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನಿಂದ 16 ಮಂದಿ ಹಾಗೂ ಕಿನ್ನಾಳದಿಂದ 11 ಮಂದಿಯನ್ನು ಆಯ್ಕೆ ಮಾಡಲಾಗಿದೆ. ಇಸಿಪಿಎಚ್ ಸಂಸ್ಥೆಯ ತಾಂತ್ರಿಕ ವಿಭಾಗದ ಸಿಬ್ಬಂದಿ ಈ ಕರಕುಶಲ ಕರ್ಮಿಗಳ ಬಳಿಗೆ ತೆರಳಿದ್ದು, ಅವರು ತಯಾರಿಸುವ ವಿವಿಧ ಮಾದರಿಯ ಬೊಂಬೆಗಳನ್ನು ಚಿತ್ರ ಹಾಗೂ ವಿಡಿಯೊ ರೂಪದಲ್ಲಿ ದಾಖಲಿಸಿಕೊಂಡಿದ್ದಾರೆ. ಇದನ್ನು ಆನ್ಲೈನ್ ವೇದಿಕೆಯಲ್ಲಿ ಪ್ರಸ್ತುತಪಡಿಸಲಿದ್ದಾರೆ.
ಕಾರ್ಯಕ್ರಮದ ಸಲುವಾಗಿಯೇ ಕೇಂದ್ರ ಸರ್ಕಾರ ವೆಬ್ಸೈಟ್ ಲಿಂಕ್ ನೀಡಿದೆ. ಇದರಲ್ಲಿ ಸ್ಥಳೀಯ ಕರಕುಶಲ ಕರ್ಮಿಯ ಹೆಸರು, ಮೊಬೈಲ್ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ, ಬೊಂಬೆಗಳ ಚಿತ್ರ, ವಿಡಿಯೊ ಹಾಗೂ ಅದರ ಬೆಲೆಯನ್ನು ಹಾಕಲಿದ್ದಾರೆ. 27ರಂದು ಆರಂಭವಾಗಲಿರುವ ಪ್ರದರ್ಶನದಲ್ಲಿ ಇವುಗಳ ಕುರಿತು ಮಾಹಿತಿ ನೀಡಲಾಗುತ್ತದೆ. ಆಸಕ್ತರು ಆನ್ಲೈನ್ನಲ್ಲೇ ಉತ್ಪನ್ನಗಳನ್ನು ಖರೀದಿ ಮಾಡಬಹುದಾಗಿರುತ್ತದೆ.
ತರಬೇತಿ: ತಾಂತ್ರಿಕ ತಂಡದ ಸಿಬ್ಬಂದಿಯು ವರ್ಚುವಲ್ನಲ್ಲಿ ಭಾಗವಹಿಸುವ ಕರಕುಶಲ ಕರ್ಮಿಗಳಿಗೆ ತರಬೇತಿ ನೀಡಲಿದ್ದಾರೆ. ಹೇಗೆ ಭಾಗವಹಿಸಬೇಕು? ಆರ್ಡರ್ ಹೇಗೆ ತೆಗೆದುಕೊಳ್ಳಬೇಕು, ಯೂಸರ್ ಐಡಿ ಪಾಸ್ವರ್ಡ್ಗಳ ಹೇಗೆ ಬಳಕೆ ಮಾಡಬೇಕೆಂಬುದು ಇದರಲ್ಲಿ ಇರಲಿದೆ. ಆ ಮೂಲಕ ಕರಕುಶಲ ಕರ್ಮಿಗಳಿಗೆ ನೇರ ಮಾರಾಟ ಮಾಡಲು ವೇದಿಕೆ ಸಿದ್ಧಪಡಿಸಲಾಗುತ್ತಿದೆ.
***
ಚನ್ನಪಟ್ಟಣದ ಗೊಂಬೆಗಳು ನೈಸರ್ಗಿಕ ಬಣ್ಣ, ಕಲೆಯಿಂದ ವಿಶ್ವ ಪ್ರಸಿದ್ಧಿ ಆಗಿವೆ. ಈ ಕಾರ್ಯಕ್ರಮದಿಂದಾಗಿ ಸ್ಥಳೀಯ ಆಟಿಕೆಗಳಿಗೆ ಬೇಡಿಕ ಹೆಚ್ಚಾಗಲಿದೆ
-ಪ್ರಕಾಶ್, ಕರಕುಶಲ ಕರ್ಮಿಗಳ ತರಬೇತಿ ಶಿಕ್ಷಕ, ಚನ್ನಪಟ್ಟಣ
***
ಕಾರ್ಯಕ್ರಮಕ್ಕೆ ಚನ್ನಪಟ್ಟಣದ 16 ಮಂದಿ ಆಯ್ಕೆ ಆಗಿರುವುದು ಹೆಮ್ಮೆಯ ವಿಚಾರ. ಇಲ್ಲಿನ ಆಟಿಕೆಗಳು ಜಾಗತಿಕ ಮಾರುಕಟ್ಟೆಗಳಿಗೆ ಲಗ್ಗೆ ಹಾಕಲಿವೆ
-ಡಾ. ಸಿ.ಎನ್. ಅಶ್ವತ್ಥನಾರಾಯಣ, ಜಿಲ್ಲಾ ಉಸ್ತುವಾರಿ ಸಚಿವ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.