
ಬಂಧನ
ಚನ್ನಪಟ್ಟಣ: ‘ನನ್ನ ಪತಿ ಹಾಗೂ ಅವರ ಮನೆಯವರು ನನ್ನ ಮೇಲೆ ಹಲ್ಲೆ ನಡೆಸಿದ್ದು, ಈ ಬಗ್ಗೆ ದೂರು ನೀಡಲು ಹೋಗಿದ್ದಾಗ ತಾಲ್ಲೂಕಿನ ಎಂ.ಕೆ. ದೊಡ್ಡಿ ಪೊಲೀಸರು ಸರಿಯಾಗಿ ಸ್ಪಂದಿಸದೆ ಸತಾಯಿಸಿದ್ದಾರೆ’ ಎಂದು ತಾಲ್ಲೂಕಿನ ಅಂಗರಹಳ್ಳಿ ಗ್ರಾಮದ ಅನಿತಾ ಆರೋಪಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾನು ಗೊಲ್ಲರಹಳ್ಳಿದೊಡ್ಡಿ ಚೇತನ್ ಅವರನ್ನು ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದೆ. ನಮ್ಮಿಬ್ಬರ ನಡುವೆ ಆಗಾಗ್ಗೆ ಗಲಾಟೆ ನಡೆಯುತ್ತಿತ್ತು. ನನ್ನ ತಾಯಿಗೆ ಅನಾರೋಗ್ಯ ಇದ್ದ ಕಾರಣ ಮಂಗಳವಾರ ನಾನು ತವರು ಮನೆಗೆ ಹೋಗಲು ನನ್ನ ಪತಿ ಹಾಗೂ ಅವರ ಮನೆಯವರು ತೊಂದರೆ ನೀಡಿದರು. ಈ ಬಗ್ಗೆ ಪ್ರಶ್ನಿಸಿದಕ್ಕೆ ಹಲ್ಲೆ ನಡೆಸಿದ್ದರು. ಈ ಬಗ್ಗೆ ದೂರು ನೀಡಲು ಎಂ.ಕೆ.ದೊಡ್ಡಿ ಪೊಲೀಸ್ ಠಾಣೆಗೆ ತೆರಳಿದಾಗ ಅವರು ಸ್ಪಂದಿಸಿಲ್ಲ’ ಎಂದು ಆರೋಪಿಸಿದರು.
‘ನಮ್ಮ ಬಳಿ ಮೂರು, ನಾಲ್ಕು ಬಾರಿ ದೂರು ಬರೆಸಿಕೊಂಡರು. ಪ್ರತಿ ಸಲವೂ ಅದು ಸರಿ ಇಲ್ಲ, ಇದು ಸರಿ ಇಲ್ಲ, ನಿಮಗೆ ಸರಿಯಾಗಿ ಬರೆಯಲು ಬರುತ್ತಿಲ್ಲ ಎಂದು ಸಬೂಬು ಹೇಳಿ ದೂರು ಸ್ವೀಕರಿಸಲು ಸತಾಯಿಸಿದರು. ದೂರು ಕೊಡುವ ಸಂದರ್ಭದಲ್ಲಿ ನಮ್ಮನ್ನು ಪೊಲೀಸರು ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಮಾನಿಸಿದ್ದಾರೆ. ಇದರಿಂದ ನೋವಾಗಿದೆ. ಈ ಬಗ್ಗೆ ಮೇಲಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ನ್ಯಾಯ ದೊರಕಿಸಿಕೊಡಬೇಕು’ ಎಂದು ಮನವಿ ಮಾಡಿದರು.
ಸಂಬಂಧಿಕರಾದ ನಾಗಲಿಂಗಯ್ಯ, ಜಿ.ಎನ್. ರವಿ, ಮಂಜೇಶ್ ಹಾಜರಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.