ಸಾತನೂರು(ಕನಕಪುರ): ಬೆಂಗಳೂರಿನಂತ ನಗರ ಪ್ರದೇಶಗಳಿಗೆ ಸರಿಸಮಾನವಾಗಿ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆಗಳನ್ನು ತೆರೆದು ಕಡಿಮೆ ಶುಲ್ಕದಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಎಂದು ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಕುರುಬಳ್ಳಿ ಶಂಕರ್ ಹೇಳಿದರು.
ಇಲ್ಲಿನ ಸಾತನೂರು ಹೋಬಳಿ ಕಬ್ಬಾಳು ಗ್ರಾಮದಲ್ಲಿನ ಚಿರಂತನ ವ್ಯಾಲಿ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.
‘ಇಂದಿನ ಪರಿಸ್ಥಿತಿಯಲ್ಲಿ ನಾವು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ಕೊಡುತ್ತಿದ್ದೇವೆ. ಗುಣಮಟ್ಟದ ಶಿಕ್ಷಣಕ್ಕಾಗಿ ನಗರ ಪ್ರದೇಶಗಳಿಗೆ ಹತ್ತಾರು ಕಿಲೋ ಮೀಟರ್ ಹೋಗಬೇಕಾದೆ ಅನಿವಾರ್ಯತೆಯಿದೆ. ಈ ಶಾಲೆಯ ಸಂಸ್ಥಾಪಕರು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅನುಕೂಲವಾಗಲೆಂದು ಇಲ್ಲಿ ಉತ್ತಮ ನುರಿತ ಶಿಕ್ಷಕರೊಂದಿಗೆ ಶಿಕ್ಷಣ ಸಂಸ್ಥೆಯನ್ನು ತೆರೆದು ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ’ ಎಂದರು.
ತಾಲ್ಲೂಕು ಪಂಚಾಯಿತಿ ಸದಸ್ಯ ಕೆ.ಎಸ್. ಧನಂಜಯ ಮಾತನಾಡಿ, ‘ಉತ್ತಮ ವಾತಾವರಣದಲ್ಲಿ ಶಾಲೆಯನ್ನು ಮಕ್ಕಳಿಗೆ ಅನುಕೂಲವಾಗುವಂತೆ ನಡೆಸುತ್ತಿದ್ದಾರೆ. ಮಕ್ಕಳು ಹೆಚ್ಚಿನ ದೂರ ಪ್ರಯಾಣ ಮಾಡಬೇಕಾದ ಸಮಸ್ಯೆಯಿಲ್ಲ. ಶ್ರದ್ಧೆಯಿಂದ ಚೆನ್ನಾಗಿ ಶಿಕ್ಷಣಭ್ಯಾಸವನ್ನು ಮಾಡಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ’ ಎಂದು ಸಲಹೆ ನೀಡಿದರು.
ಸಂಸ್ಥೆಯ ಮಾಗದರ್ಶಕ ಶಿವಪ್ಪ ಕಾರ್ಯದರ್ಶಿ ಕುಬೇರ, ಖಜಾಂಚಿ ಸಂತೋಷ, ಟ್ರಸ್ಟಿ ನಾಗಭೂಷಣ್ ಉಪಸ್ಥಿತರಿದ್ದರು. ಟ್ರಸ್ಟಿ ಅಮರ್ ನಾಗಭೂಷಣ್ ಮತ್ತು ನಿರ್ದೇಶಕ ಸೀತಾರಾಮು ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.
ಕನ್ನಡ, ತಮಿಳು, ತೆಲುಗು, ಮಲಯಾಳ, ಒಡಿಶಾ ಹಾಡುಗಳಿಗೆ ಮಕ್ಕಳು ನೃತ್ಯ ಪ್ರದರ್ಶನ ಮಾಡಿದರು. ಯಕ್ಷಗಾನ ಪ್ರದರ್ಶನ, ದಶಾವತಾರ, ಬಾಹುಬಲಿ, ರತನ್ ಇಂಗ್ಲಿಷ್ ಭಾಷೆಯ ನಾಟಕ ಪ್ರದರ್ಶನ ಮಾಡಿದರು.
ಪ್ರಾಂಶುಪಾಲೆ ಗೀತಾ ಚಂದ್ರಶೇಖರ್, ಉಪ ಪ್ರಾಂಶುಪಾಲೆ ಮಂಗಳ, ಶಿಕ್ಷಕರಾದ ಶಾಂತಲಾ, ಗೀತಾ, ಶಾಲೆಯ ಸಿಬ್ಬಂದಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.