
ಮಾಗಡಿ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ರಾಜ್ಯಕ್ಕೆ ಏನೂ ಕೊಡುಗೆ ನೀಡಿಲ್ಲ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಎ.ಮಂಜುನಾಥ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಬಹಿರಂಗ ಚರ್ಚೆಗೆ ಬರುವಂತೆ ಸವಾಲು ಹಾಕಿದರು.
ಜೆಡಿಎಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಕೇಂದ್ರ ಸಚಿವರಾಗಿ ಇಡೀ ದೇಶದ ಕಾರ್ಯಭಾರ ಹೊಂದಿದ್ದಾರೆ. ಮುಚ್ಚಿ ಹೋದ ಅನೇಕ ಕಾರ್ಖಾನೆಗಳನ್ನು ಪುನರಾರಂಭಿಸಿದ್ದಾರೆ. ಅದಿರು ಕಾರ್ಖಾನೆಗಳ ಮೂಲಕ ಉದ್ಯೋಗಾವಕಾಶ ಸೃಷ್ಟಿಸಿದ್ದಾರೆ. ಅವರು ರಾಜ್ಯಕ್ಕೆ ನೀಡಿರುವ ಕೊಡುಗೆ ಎಲ್ಲರಿಗೂ ಗೊತ್ತು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಕೂಡ ದೊಡ್ಡ ಕೊಡುಗೆ ನೀಡಿದ್ದಾರೆ. ಸಿಎಂ ಮತ್ತು ಡಿಸಿಎಂ ಬಹಿರಂಗ ಸಭೆ ಕರೆಯಲಿ. ನಾಯಕರ ಸಾಧನೆ ದಾಖಲೆಗಳೊಂದಿಗೆ ಇಡಲಾಗುವುದು ಎಂದರು.
ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಲು ಪ್ರಯತ್ನಿಸುತ್ತಿದ್ದಾರೆ ಎಂಬ ಪ್ರಶ್ನೆಗೆ, ‘ಅವರು ನಮ್ಮ ಜಿಲ್ಲೆಯ ನಾಯಕರು. ಕಾಂಗ್ರೆಸ್ ಅನ್ನು ಬಲಪಡಿಸಿದ್ದಾರೆ. ಅವರು ಸಿಎಂ ಆಗಲು ನಮಗೆ ಆಕ್ಷೇಪವಿಲ್ಲ’ ಎಂದರು.
ಹೇಮಾವತಿ ಯೋಜನೆ ವಿಳಂಬ ಬಗ್ಗೆ ಪ್ರತಿಕ್ರಿಯಿಸಿ, ಮಾಜಿ ಡಿಸಿಎಂ ಡಾ.ಅಶ್ವತ್ಥನಾರಾಯಣ ಅವರಿಗೆ ಹೆಸರು ಬರುತ್ತದೆ ಎಂಬ ಕಾರಣಕ್ಕೆ ಯೋಜನೆ ಉದ್ಘಾಟನೆಗೆ ತಡೆ ಮಾಡುತ್ತಿರುವುದು ಸರಿಯಲ್ಲ. ನಮ್ಮ ಅವಧಿಯಲ್ಲಿ ನಡೆದ ಕಾಮಗಾರಿಗಳ ಕೊಡುಗೆಯನ್ನು ಸ್ಥಳದಲ್ಲೇ ಬಹಿರಂಗಪಡಿಸಲಾಗುವುದು. ಯೋಜನೆ ತ್ವರಿತವಾಗಿ ಪೂರ್ಣಗೊಳ್ಳಲಿ ಎಂದು ಒತ್ತಾಯಿಸಿದರು.
ಪಟ್ಟಣದ ಎನ್ಇಎಸ್ ವೃತ್ತದಲ್ಲಿ ಅವೈಜ್ಞಾನಿಕವಾಗಿ ಗಾಂಧಿ ಪ್ರತಿಮೆ ನಿರ್ಮಿಸಲಾಗಿದೆ ಎಂದು ಟೀಕಿಸಿದ ಅವರು, ಇದು ಅಪಘಾತ ಸ್ಥಳವಾಗುತ್ತಿದೆ. ಸುರಕ್ಷಿತ ಕ್ರಮ ತೆಗೆದುಕೊಳ್ಳಬೇಕು. ಗಾಂಧಿ ಪ್ರತಿಮೆ ಜತೆಗೆ ತಾಲ್ಲೂಕಿನ ಇತರ ಮಹನೀಯರ ಪ್ರತಿಮೆಗಳನ್ನು ಸ್ಥಾಪಿಸಬಹುದಿತ್ತು ಎಂದರು.
ಜೆಡಿಎಸ್ ಮುಖಂಡರಾದ ಪಂಚೆ ರಾಮಣ್ಣ, ಜೈಕುಮಾರ್, ಬೆಳಗುಂಬ ವಿಎಸ್ಎಸ್ ಎನ್ ಅಧ್ಯಕ್ಷ ಹೊಸಹಳ್ಳಿ ರಂಗನಾಥ್, ಜೆಡಿಎಸ್ ಯುವ ಘಟಕದ ಅಧ್ಯಕ್ಷ ವಿಜಯಕುಮಾರ್, ಕೆ.ವಿ.ಬಾಲು, ಮಹೇಶ್, ವೆಂಕಟೇಶ್, ಕೆಂಪಸಾಗರ ಗುಂಡ, ನರಸಿಂಹಮೂರ್ತಿ, ರೋಹಿತ್ ಸೇರಿದಂತೆ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.