ಚನ್ನಪಟ್ಟಣ: ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪುಸ್ತಕ ನೋಡದೆ ಸಂವಿಧಾನ ಪೀಠಿಕೆ ಓದಿರುವ ತಾಲ್ಲೂಕಿನ ಅರಳಾಳುಸಂದ್ರ ಕರ್ನಾಟಕ ಪಬ್ಲಿಕ್ ಶಾಲೆ ಯುಕೆಜಿ ಪುಟ್ಟ ಬಾಲಕ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.
ಶುಕ್ರವಾರ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಯುಕೆಜಿ ವಿದ್ಯಾರ್ಥಿ ಹರ್ಷವರ್ಧನ್, ಸಂವಿಧಾನದ ಪೀಠಿಕೆಯನ್ನು ಪುಸ್ತಕ ನೋಡದೆ ವೇದಿಕೆಯಲ್ಲಿ ಹೇಳಿದ್ದ. ಇದನ್ನು ಶಾಲೆಯ 750 ಮಂದಿ ವಿದ್ಯಾರ್ಥಿಗಳು ಉಚ್ಚಾರಣೆ ಮಾಡಿದ್ದರು. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.
ಈ ವಿಡಿಯೊವನ್ನು ನೋಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಭಾನುವಾರ ಹಂಚಿಕೊಂಡಿದ್ದರು. ’ಪುಟ್ಟ ಬಾಲಕನ ತೊದಲು ನುಡಿಯಲ್ಲಿ ಸಂವಿಧಾನದ ಪೀಠಿಕೆ ಕೇಳುವುದೇ ಒಂದು ಖುಷಿ. ಈ ಹುಡುಗನಂತೆ ಪ್ರತಿಯೊಬ್ಬರ ಮನದಲ್ಲೂ ಸಂವಿಧಾನದ ಪ್ರತಿಪದ ಅಚ್ಚಾಗಬೇಕು. ಆಗ ಮಾತ್ರ ಸಮಾನತೆ, ಬಹುತ್ವದ ತಳಹದಿ ಮೇಲೆ ಬಲಿಷ್ಠ ಭಾರತ ರೂಪುಗೊಳ್ಳಲು ಸಾಧ್ಯ’ ಎಂದು ಹೇಳಿದ್ದರು.
ಬಾಲಕನ ಸಂವಿಧಾನ ಪೀಠಿಕೆ ತೊದಲು ನುಡಿ ವಿಚಾರ ಮುಖ್ಯಮಂತ್ರಿ ಮೆಚ್ಚುಗೆಗೆ ಪಾತ್ರವಾಗಿರುವುದಕ್ಕೆ ಗ್ರಾಮಸ್ಥರು, ತಾಲ್ಲೂಕಿನ ಶಿಕ್ಷಕ ವರ್ಗ ಹರ್ಷ ವ್ಯಕ್ತಪಡಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.