ರಾಮನಗರ: ‘ಕೇಂದ್ರ ಸರ್ಕಾರ ಕಾವೇರಿ ವಿಚಾರದಲ್ಲಿ ಈ ಹಿಂದೆ ನಮ್ಮ ಪರವಾಗಿ ಅಫಿಡವಿಟ್ ಕೊಟ್ಟಿದೆ. ಎಲ್ಲ ಸಮಯದಲ್ಲೂ ರಾಜ್ಯದ ನೆರವಿಗೆ ಬರುತ್ತಿದೆ’ ಎಂದು ಉನ್ನತ ಶಿಕ್ಷಣ ಮತ್ತು ಐ.ಟಿ. ಬಿ.ಟಿ. ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಸಮರ್ಥಿಸಿಕೊಂಡರು.
ನಗರದಲ್ಲಿ ಭಾನುವಾರ ಸ್ವಾತಂತ್ರ್ಯೋತ್ಸವ ಅಂಗವಾಗಿ ಧ್ವಜಾರೋಹಣ ಮಾಡಿದ ಬಳಿಕ ಪತ್ರಕರ್ತರ ಜೊತೆ ಅವರು ಮಾತನಾಡಿದರು.
‘ತಮಿಳುನಾಡು ಸಹ ಕೇಂದ್ರ ಸರ್ಕಾರ ಕರ್ನಾಟಕದ ಪರ ಇದ್ದು, ನಮಗೆ ಮಲತಾಯಿ ಧೋರಣೆ ತೋರುತ್ತಿದೆ ಎಂದು ಆರೋಪಿಸಿದೆ. ಯೋಜನೆಯಿಂದ ತಮಿಳುನಾಡಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಅವರಿಗೆ ಸಲ್ಲಬೇಕಾದ ನೀರನ್ನು ಕಾಲಕಾಲಕ್ಕೆ ಕೊಡುವ ಪ್ರಯತ್ನ ಮಾಡುತ್ತಿದ್ದೇವೆ. ನಮ್ಮ ಹಕ್ಕು ನಾವು ಪಡೆದುಕೊಳ್ಳಲು ಯಾವ ಸಮಸ್ಯೆಯೂ ಇಲ್ಲ. ಈ ಬಗ್ಗೆ ಇರುವ ಕಾನೂನು ತೊಡಕನ್ನು ನಿವಾರಿಸಿಕೊಳ್ಳಲಾಗುವುದು’ ಎಂದರು.
‘ಸರ್ಕಾರ ವಿಳಂಬ ಮಾಡಿದರೆ ರೈತರೇ ಯೋಜನೆಗೆ ಅಡಿಗಲ್ಲು ಹಾಕುತ್ತೇವೆ ಎಂದಿರುವ ಕೋಡಿಹಳ್ಳಿ ಚಂದ್ರಶೇಖರ್ ಹೇಳಿಕೆ ಸ್ವಾಗತಾರ್ಹ. ನಮಗೆ ರೈತರ ಸಹಕಾರವೂ ಬೇಕು. ಆದರೆ ಈ ಬಗ್ಗೆ ಅವರಿಗೆ ಆತಂಕ ಬೇಡ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.