ರಾಮನಗರ: ‘ಜಿಲ್ಲೆಯ ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ನನ್ನ ಅಸ್ತಿತ್ವವನ್ನೇ ಅಲುಗಾಡಿಸಲು ಕಾಂಗ್ರೆಸ್ ಮುಖಂಡರು ಸಂಚು ರೂಪಿಸಿದ್ದು, ಇದರ ವಿರುದ್ಧ ಹೋರಾಟ ನಡೆಸುತ್ತೇನೆ’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
‘ರಾಜ್ಯದಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡ ಪರಿಣಾಮ ಜೆಡಿಎಸ್ಗೆ ಹಿನ್ನಡೆ ಆಯಿತು. ರಾಮನಗರದಲ್ಲಿ ಈ ಹಿಂದೆ ನಮ್ಮ ತಂದೆ ಮತ್ತು ನಾನು ಬಂದಾಗ ಕಾಂಗ್ರೆಸ್ನವರು ಮನೆ ಸೇರಿದ್ದರು. ಇದೀಗ ಕ್ಷೇತ್ರದಲ್ಲಿ ನನ್ನ ಅಸ್ತಿತ್ವ ಅಲುಗಾಡಿಸಲು ಹೊರಟಿದ್ದಾರೆ. ಚಿತ್ರದುರ್ಗದ ಮದಕರಿ ನಾಯಕನ ಕೋಟೆಗೆ ಹೈದರಾಲಿ ಸೈನಿಕರು ಕಿಂಡಿಯಲ್ಲಿ ನುಗ್ಗಿದಂತೆ ನನ್ನ ಕೋಟೆಗೆ ನುಗ್ಗುತ್ತಿದ್ದಾರೆ. ಆದರೆ ಈ ಬಗ್ಗೆ ಭಯವಿಲ್ಲ’ ಎಂದು ಅವರು ಸೋಮವಾರ ಪತ್ರಕರ್ತರಿಗೆ ತಿಳಿಸಿದರು.
‘ನಮ್ಮ ಪಕ್ಷದ ಯಾವ ಮುಖಂಡ, ಶಾಸಕರನ್ನು ಸೆಳದರೂ ಪರವಾಗಿಲ್ಲ. ಇನ್ನೂ ಎಷ್ಟೇ ಜನ ಹೋದರೂ ಜೆಡಿಎಸ್ ಬಲವಾಗಿರುತ್ತದೆ. ನನ್ನ ಪಕ್ಷದ ಸಾಮಾನ್ಯ ಕಾರ್ಯಕರ್ತರನ್ನು ಯಾರಿಂದಲೂ ಅಲುಗಾಡಿಸಲು ಸಾಧ್ಯವಿಲ್ಲ’ ಎಂದರು.
‘ಯಾರ ಕುತ್ತಿಗೆಗೆ ಸುತ್ತಿಕೊಳ್ಳುತ್ತದೆ ನೋಡೋಣ’
"ಸಿ.ಡಿ. ಪ್ರಕರಣ ಸಾರ್ವಜನಿಕರ ಪಾಲಿಗೆ ನಗೆಪಾಟಲಿನ ವಸ್ತುವಾಗಿದ್ದು, ಅಂತಿಮವಾಗಿ ಯಾರ ಕುತ್ತಿಗೆಗೆ ಸುತ್ತಿಹಾಕಿಕೊಳ್ಳುತ್ತದೆ ಎಂಬುದನ್ನು ನೋಡಲು ನಾನೂ ಕುತೂಹಲದಿಂದ ಇದ್ದೇನೆ’ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.
‘ಡಿ.ಕೆ. ಶಿವಕುಮಾರ್ ಈ ಪ್ರಕರಣದಲ್ಲಿ ಯಾಕೆ ತಮ್ಮ ಹೆಸರನ್ನು ತಾವೇ ಯಾಕೆ ತೆಗೆದುಕೊಂಡರು ಎಂಬುದೇ ಯಕ್ಷ ಪ್ರಶ್ನೆ. ಇದಕ್ಕೆ ಅವರೇ ಉತ್ತರಿಸಬೇಕು’ ಎಂದು ಎಚ್ಡಿಕೆ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.