ADVERTISEMENT

ಕೊರೊನಾ ಭಯದಿಂದ ವ್ಯಕ್ತಿ ಆತ್ಮಹತ್ಯೆ?

​ಪ್ರಜಾವಾಣಿ ವಾರ್ತೆ
Published 23 ಜುಲೈ 2020, 14:59 IST
Last Updated 23 ಜುಲೈ 2020, 14:59 IST

ರಾಮನಗರ: ಅರ್ಕಾವತಿ ನದಿ ದಡದಲ್ಲಿ ಗುರುವಾರ ಅರೆ ಬೆಂದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದ್ದು, ಕೊರೊನಾ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಚಾಮುಂಡೇಶ್ವರಿ ಬಡಾವಣೆ ನಿವಾಸಿ ವೆಂಕಟೇಶ್‌ (55) ಮೃತರು. ಶವದ ಪಕ್ಕದಲ್ಲಿ250 ನಗದು ಹಾಗೂ ಅವರ ಫೋಟೊ ಪತ್ತೆಯಾಗಿದೆ. ಇವರು ಪೆಟ್ರೋ‌ಲ್‌ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ವೆಂಕಟೇಶ್‌ ಬೆಂಗಳೂರಿನಲ್ಲಿ ನೆಲೆಸಿದ್ದು, ಈಚೆಗೆ ರಾಮನಗರಕ್ಕೆ ವಾಪಸ್‌ ಆಗಿದ್ದರು. ಕಳೆದೊಂದು ವಾರದಿಂದ ತಮ್ಮ ಮನೆಯಲ್ಲೇ ತಂಗಿದ್ದರು. ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇದೇ ತಿಂಗಳ 17ರಂದು ರಾಮನಗರದ ಫೀವರ್‌ ಕ್ಲಿನಿಕ್‌ನಲ್ಲಿ ತಪಾಸಣೆಗೆ ಒಳಗಾಗಿದ್ದರು. ಕೋವಿಡ್‌ ಪರೀಕ್ಷೆ ಸಹ ಮಾಡಿಸಿಕೊಂಡಿದ್ದರು. ಪರೀಕ್ಷೆ ವರದಿ ಬಂದಿರಲಿಲ್ಲ. ಆದರೆ ಆತಂಕಕ್ಕೆ ಒಳಗಾಗಿದ್ದ ಅವರು ಮನೆಯಿಂದ ಈಚೆಗೆ ಬರುತ್ತಿರಲಿಲ್ಲ ಎನ್ನಲಾಗಿದೆ.

ADVERTISEMENT

ಗುರುವಾರ ಬೆಳಗ್ಗೆ ಕ್ಯಾನ್‌ ಹಿಡಿದುಕೊಂಡು ಮನೆಯಿಂದ ಹೊರ ಹೋಗಿದ್ದಾಗಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಕ್ಯಾನ್‌ನಲ್ಲಿ ಪೆಟ್ರೋಲ್‌ ಖರೀದಿಸಿ ನಿರ್ಜನ ಪ್ರದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರ ಪ್ರಾಥಮಿಕ ತನಿಖೆ ವೇಳೆ ತಿಳಿದುಬಂದಿದೆ. ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಶವದ ಮರಣೋತ್ತರ ಪರೀಕ್ಷೆ ನಡೆದಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.