ಕುದೂರು: ವರದಕ್ಷಿಣೆಗಾಗಿ ಪೀಡಿಸಿ ಮಹಿಳೆಗೆ ಆಕೆಯ ಪತಿ ಮನೆಯವರು ವಿಷ ಕುಡಿಸಿ ಕೊಲ್ಲಲು ಯತ್ನಿಸಿರುವ ಘಟನೆ ಸೋಲೂರು ಹೋಬಳಿಯ ಕೂಡ್ಲೂರು ಗ್ರಾಮದಲ್ಲಿ ಈಚೆಗೆ ನಡೆದಿದೆ.
ವಿಷ ಕುಡಿಸಿದ್ದರಿಂದ ಅಸ್ವಸ್ಥಗೊಂಡಿರುವ ವಿದ್ಯಾಶ್ರೀ (22) ಅವರನ್ನು ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ.
ತುಮಕೂರು ಜಿಲ್ಲೆ ಕುಣಿಗಲ್ ಪಟ್ಟಣದ ಬಿ.ಎಲ್.ಆರ್.ಎಸ್ ಲೇಔಟ್ ವಾಸಿ ವೀರಣ್ಣ ಹಾಗೂ ಗೌರಮ್ಮ ದಂಪತಿಯ ಪುತ್ರಿ ವಿದ್ಯಾಶ್ರೀ ಅವರನ್ನು ಮಾಗಡಿ ತಾಲ್ಲೂಕು ಕೂಡ್ಲೂರು ಗ್ರಾಮದ ರೇಣುಕಪ್ಪ ಎನ್ನುವವರ ಪುತ್ರ ಕರುಣೇಶ್ ಜೊತೆಗೆ ಮೂರು ವರ್ಷಗಳ ಹಿಂದೆ ಮದುವೆ ಮಾಡಿ ಕೊಡಲಾಗಿತ್ತು. ಮದುವೆಯ ಸಂದರ್ಭದಲ್ಲಿ 250 ಗ್ರಾಂ ಚಿನ್ನ, 1 ಕೆಜಿ ಬೆಳ್ಳಿ, ₹5 ಲಕ್ಷ ನಗದು ನೀಡಿ ಸುಮಾರು ₹15 ಲಕ್ಷ ರೂಪಾಯಿ ಖರ್ಚು ಮಾಡಿ ವಿವಾಹ ಮಾಡಿಕೊಡಲಾಗಿತ್ತು. ಈಗ ದಂಪತಿಗೆ ಎರಡು ವರ್ಷದ ಗಂಡು ಮಗುವಿದೆ. ಪತಿ ಕರುಣೇಶ್ ಮನೆಯವರು ವರದಕ್ಷಿಣೆ ನೀಡಬೇಕೆಂದು ಪದೇಪದೇ ಕಿರುಕುಳ ನೀಡುತ್ತಿರುವ ವಿಚಾರವನ್ನು ವಿದ್ಯಾಶ್ರೀ ತನ್ನ ಪೋಷಕರಿಗೆ ಹೇಳುತ್ತಿದ್ದರು. ಮಾರ್ಚ್ 14 ರಂದು ಪತಿ ಕರುಣೇಶ್, ಅತ್ತೆ ಸರ್ವಮ್ಮ, ಮಾವ ರೇಣುಕಪ್ಪ, ನಾದಿನಿ ಚೈತ್ರಾ, ಆಕೆಯ ಗಂಡ ವಿನೋದ್ ಕುಮಾರ್ ಸೇರಿಕೊಂಡು ವಿದ್ಯಾಶ್ರೀ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿದ್ದರು. ಆಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ನಂತರ ಗ್ರಾಮದ ಮುಖಂಡರು ಮಧ್ಯಸ್ಥಿಕೆ ವಹಿಸಿ ರಾಜೀ ಸಂಧಾನ ಮಾಡಿ ವಿದ್ಯಾಶ್ರೀಯನ್ನು ಮತ್ತೆ ಪತಿಯ ಮನೆಗೆ ಕಳುಹಿಸಿಕೊಟ್ಟಿದ್ದರು.
ಅಕ್ಟೋಬರ್ 14ರ ಬೆಳಗ್ಗೆ 6 ಗಂಟೆ ಸಮಯದಲ್ಲಿ ವಿದ್ಯಾಶ್ರೀ ಕಿರುಚಾಡುತ್ತಿರುವುದನ್ನು ಕೇಳಿಸಿಕೊಂಡು ಪಕ್ಕದ ಮನೆಯವರಾದ ದೀಪು ಮತ್ತು ಸ್ನೇಹಿತರು ಮನೆಯ ಬಾಗಿಲು ಬಡಿದು ನೋಡಿದಾಗ ವಿದ್ಯಾಶ್ರೀ ಅಸ್ವಸ್ಥಗೊಂಡಿದ್ದರು. ಆಕೆಯನ್ನು ಕಾರಿನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಿದ್ಯಾಶ್ರೀಗೆ ವಿಷ ಕುಡಿಸಿದ್ದನ್ನು ವೈದ್ಯರು ದೃಢಪಡಿಸಿದ್ದಾರೆ. ವಿದ್ಯಾಶ್ರೀ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ.
ಕಳೆದ ಎಂಟು ದಿನಗಳಿಂದ ಪತಿ ಮನೆಯವರು ವಿದ್ಯಾಶ್ರೀಗೆ ಹಿಂಸೆ ನೀಡುತ್ತಿದ್ದರು. ಹಬ್ಬ ಮುಗಿಸಿಕೊಂಡು ಮಾತನಾಡಿವುದಾಗಿ ತಿಳಿಸಿದ್ದೆವು. ಈಗ ಆಕೆಗೆ ವಿಷ ಕುಡಿಸಿ ಸಾಯಿಸಲು ಯತ್ನಿಸಿದ್ದಾರೆ. ಇದಕ್ಕೆ ಕಾರಣರಾದ ಮಗಳ ಪತಿ ಕರುಣೇಶ್, ಅತ್ತೆ ಸರ್ವಮ್ಮ, ಮಾವ ರೇಣುಕಪ್ಪ, ನಾದಿನಿ ಚೈತ್ರಾ ಹಾಗೂ ಆಕೆಯ ಗಂಡ ವಿನೋದ್ ಕುಮಾರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿದ್ಯಾಶ್ರೀ ತಾಯಿ ಗೌರಮ್ಮ ಕುದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.