ಬಿಡದಿ: ಕಾಂಗ್ರೆಸ್ ಮುಖಂಡ ಗಂಟಪ್ಪ ಕೊಲೆ ಪ್ರಕರಣವನ್ನು ಭೇದಿಸಿರುವ ಬಿಡದಿ ಠಾಣೆ ಪೊಲೀಸರು, ಅವರ ಸೊಸೆ ಸೇರಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಮೃತ ಗಂಟಪ್ಪ ಪುತ್ರ ನಂದೀಶ್ ಪತ್ನಿ ಚೈತ್ರಾ ಹಾಗೂ ಕನಕಪುರ ತಾಲೂಕು ಸೊಂಟೇನಹಳ್ಳಿ ವಾಸಿ ಎಂ.ನವೀನ್ ಬಂಧಿತರು.
ಫೆಬ್ರುವರಿ 25ರಂದು ರಾತ್ರಿ ಬೈರವನದೊಡ್ಡಿ ಗ್ರಾಮದ ಬಳಿಯ ಹಳೆಯ ಸರ್ವಿಸ್ ಸ್ಟೇಷನ್ ಶೆಡ್ ಮುಂಭಾಗ ದುಷ್ಕರ್ಮಿಗಳು ಆಯುಧಗಳಿಂದ ಗಂಟಪ್ಪ ತಲೆ, ಹೊಟ್ಟೆ, ಮುಖದ ಮೇಲೆ ಹಲ್ಲೆ ನಡೆಸಿದ್ದರು. ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು ಮಾರ್ಗದರ್ಶನದಲ್ಲಿ ಪೊಲೀಸ್ ಅಧಿಕಾರಿ ಮೋಹನ್ ಕುಮಾರ್ ನೇತೃತ್ವದಲ್ಲಿ ಬಿಡದಿ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಆರ್.ಪ್ರಕಾಶ್ ಅವರನ್ನೊಳಗೊಂಡ ತಂಡ ರಚಿಸಿ ತನಿಖೆ ನಡೆಸಲಾಗಿತ್ತು. ಗಂಟಪ್ಪ ಸೊಸೆ ಚೈತ್ರಾಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಕೃತ್ಯ ಎಸಗಿರುವುದನ್ನು ಒಪ್ಪಿಕೊಂಡಿದ್ದಾರೆ.
ಮಾವ ಗಂಟಪ್ಪರವರು ಮಗ ಮತ್ತು ಸೊಸೆ ಮದುವೆ ಆದಾಗಿನಿಂದ ಮನೆಗೆ ಸೇರಿಸಿಕೊಳ್ಳದೇ ಹೊರ ಹಾಕಿದ್ದು, ಅವಮಾನಕರವಾಗಿ ನಡೆದುಕೊಂಡಿದ್ದರು. ಅಲ್ಲದೆ, ಯಾವುದೇ ಆಸ್ತಿ ಮತ್ತು ಹಣ, ಒಡವೆಗಳನ್ನು ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಚೈತ್ರಾ, ನವೀನ್ನೊಂದಿಗೆ ಸೇರಿ ಗಂಟಪ್ಪನ ಕೊಲೆಗೆ ಒಳಸಂಚು ನಡೆಸಿದರು. ಇದಕ್ಕಾಗಿ ನವೀನ್ಗೆ 30 ಗ್ರಾಂ ಚಿನ್ನದ ಸರ ನೀಡಿದ್ದ ಚೈತ್ರಾ ಇನ್ನೂ ಹೆಚ್ಚಿನ ಹಣ ನೀಡುವುದಾಗಿ ಹೇಳಿದ್ದರು ಎನ್ನಲಾಗಿದೆ.
ಪೊಲೀಸರು ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಮತ್ತು ಆಯುಧವನ್ನು ವಶಪಡಿಸಿಕೊಂಡು ಪ್ರಕರಣವನ್ನು ದಾಖಲಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.