ಮಾಗಡಿ: ‘ಕಾರ್ತಿಕ ದೀಪೋತ್ಸವದ ಬೆಳಕು ಸರ್ವರ ಅಂತರಂಗದಲ್ಲಿ ಬೆಳಗುವ ಅಧ್ಯಾತ್ಮದ ಬೆಳಕಾಗಿ ದೈವಬಲದಿಂದ ಆನಂದ ನೀಡಲಿ’ ಎಂದು ಪ್ರಸನ್ನ ರಾಮೇಶ್ವರ ದೀಪೋತ್ಸವ ಸಮಿತಿ ಅಧ್ಯಕ್ಷ ಡಿ.ಎಸ್.ವೆಂಕಟೇಶ್ ಮೂರ್ತಿ ತಿಳಿಸಿದರು.
ಗೌರಮ್ಮನಕೆರೆ ಬಳಿ ಇರುವ ಪ್ರಸನ್ನ ರಾಮೇಶ್ವರಸ್ವಾಮಿ ದೇವಾಲಯದ ಆವಣರದಲ್ಲಿ ಗುರುವಾರ ರಾತ್ರಿ ನಡೆದ ದೀಪೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬದುಕಿನ ಕತ್ತಲೆ ಕಳೆದು ಬೆಳಕು ನೀಡಲು ದೇವರ ಅನುಗ್ರಹ ಬಹುಮುಖ್ಯ. ಮಾಡುವ ಕೆಲಸಗಳೆಲ್ಲವೂ ದೇವರ ಪೂಜೆ ಎಂದು ಭಾವಿಸಿ ಶ್ರದ್ಧೆ ಮತ್ತು ಭಕ್ತಿಯಿಂದ ನಿಷ್ಕಲ್ಮಶ ಮನಸ್ಸಿನಿಂದ ಮಾಡಿದಾಗ ದೇವರ ಒಲುಮೆ ಗಳಿಸಲು ಸಾಧ್ಯವಿದೆ ಎಂಬುದನ್ನು ಧರ್ಮಗುರುಗಳು ಹಾಗೂ ಆಚಾರ್ಯರು ಸಾಧಿಸಿ ತೋರಿಸಿದ್ದಾರೆ. ಬೆಳದಿಂಗಳು ಎಲ್ಲರ ಬದುಕಿಗೆ ಸ್ಫೂರ್ತಿಯಾಗಲಿದೆ ಎಂದರು.
ತಿರುಮಲ ತಿರುಪತಿ ಪಾದಯಾತ್ರಾ ಸಮಿತಿಯ ಅಧ್ಯಕ್ಷೆ ಶಾರದಾ ಸುರೇಶ್ ಮಾತನಾಡಿ, ಭಕ್ತರ ಮನ ಮತ್ತು ಮನಸ್ಸು ಸದಾ ಬೆಳಕಿನಿಂದ ಕೂಡಿರಬೇಕು ಎಂದರು.
ಪ್ರಸನ್ನ ರಾಮೇಶ್ವರ ದೀಪೋತ್ಸವ ಸಮಿತಿಯ ಮುಖಂಡರಾದ ಬಿ.ಎಲ್.ಪ್ರಸಾದ್ ರಾವ್, ವಿಜಯದೀಕ್ಷಿತ್, ಆಗಮಿಕ ವಿದ್ವಾನರಾದ ಕಿರಣ್ ದೀಕ್ಷಿತ್, ಕೆ.ಎನ್.ಗೋಪಾಲ್ ದೀಕ್ಷಿತ್, ಹಿರಿಯರಾದ ಶಾರದಮ್ಮ ರಾಮಚಂದ್ರರಾವ್, ಯತಿರಾಜ್, ಪದ್ಮಾವೆಂಕಟೇಶ್, ಸತ್ಯನಾರಾಯಣ್, ಜಯಲಕ್ಷ್ಮೀದೇವಿ, ಭೂಷಿಣಿನಾಗರಾಜ್, ಗೀತಾ, ಪ್ರಭಾನಾಗರಾಜ್, ರುಕ್ಮಿಣಿಯಮ್ಮ, ಕೋಂಡಹಳ್ಳಿ ನಾಗರಾಜ ರಾವ್, ತಿರುಮಲೆ ಪ್ರಭು, ಶೃಂಗೇರಿ ರಾಮಚಂದ್ರಭಟ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಕಲ್ಪನಾಶಿವಣ್ಣ, ದಾನಿಗಳಾದ ಪುರುಷೋತ್ತಮ್ ಪಟೇಲ್, ದೀಪೋತ್ಸವ ಕುರಿತು ಮಾತನಾಡಿದರು.
ಅರ್ಚಕ ಪ್ರವೀಣ್ ದೀಕ್ಷಿತ್ ತಂಡದವವರು ಪ್ರಸನ್ನ ರಾಮೇಶ್ವರ ಸ್ವಾಮಿಗೆ ವಿಶೇಷ ಅಲಂಕಾರ ಮಾಡಿ ಪೂಜಾದಿಗಳನ್ನು ನಡೆಸಿದರು. ಮಹಾರುದ್ರಹೋಮ ನಡೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.