ರಾಮನಗರ: ಅನುಮತಿ ಪಡೆಯದೆ ಸಾಲುಮರದ ತಿಮ್ಮಕ್ಕ ಅವರ ಜೀವನಾಧಾರಿತ ‘ವೃಕ್ಷಮಾತೆ’ ಸಿನಿಮಾವನ್ನು ಅವರ ಸ್ವಗ್ರಾಮ ಹುಲಿಕಲ್ನಲ್ಲಿ ಚಿತ್ರೀಕರಣ ಮಾಡುತ್ತಿರುವುದನ್ನು ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿ, ತಿಮ್ಮಕ್ಕ ಅವರು ಕುದೂರು ಪೊಲೀಸ್ ಠಾಣೆಗೆ ಇತ್ತೀಚೆಗೆ ದೂರು ಕೊಟ್ಟಿದ್ದಾರೆ.
ತಿಂಗಳ ಹಿಂದೆ ಸಿನಿಮಾ ನಿರ್ದೇಶಕರಾದ ಒರಟ ಶ್ರೀ ಮತ್ತು ದಿಲೀಪ್ ಎಂಬುವರು, ನೆಲ್ಲಿಕಟ್ಟೆ ಎಸ್. ಸಿದ್ದೇಶ್ ಅವರು ನನ್ನ ಜೀವನ ಕುರಿತು ಬರೆದಿರುವ ಪುಸ್ತಕ ಆಧರಿಸಿ ‘ವೃಕ್ಷಮಾತೆ’ ಎಂಬ ಸಿನಿಮಾವನ್ನು ಹುಲಿಕಲ್ನಲ್ಲಿ ಶೂಟಿಂಗ್ ಮಾಡುತ್ತಿದ್ದಾರೆ. ಸಿನಿಮಾ ನಿರ್ಮಾಣಕ್ಕೆ ನನ್ನ ಅನುಮತಿ ಪಡೆದಿಲ್ಲ. ಅಲ್ಲದೆ, ತಂಡವು ನನ್ನ ಸಿನಿಮಾ ಮಾಡುವುದು ನನಗೆ ಇಷ್ಟವಿಲ್ಲ ಎಂದು ದೂರಿನಲ್ಲಿ ತಿಮ್ಮಕ್ಕ ತಿಳಿಸಿದ್ದಾರೆ.
ಅನುಮತಿ ನೀಡದಿದ್ದರೂ ಸಿನಿಮಾ ತಂಡ ಚಿತ್ರೀಕರಣ ಮಾಡುತ್ತಿರುವುದನ್ನು ನಿಲ್ಲಿಸಬೇಕು. ಮತ್ತೇನಾದರೂ ಚಿತ್ರೀಕರಣ ಮುಂದುವರಿಸಿದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ. ತಿಮ್ಮಕ್ಕ ಅವರ ದತ್ತುಪುತ್ರ ಉಮೇಶ್ ಅವರು ಠಾಣೆಗೆ ಬಂದು ದೂರು ಕೊಟ್ಟಿದ್ದಾರೆ.
‘ದೂರಿನ ಮೇರೆಗೆ ಪೊಲೀಸರು ಸ್ಥಳಕ್ಕೆ ತೆರಳಿ, ಅನುಮತಿ ಪಡೆದು ಚಿತ್ರೀಕರಣ ಮಾಡುವಂತೆ ಚಿತ್ರತಂಡಕ್ಕೆ ಸೂಚನೆ ನೀಡಿದ್ದಾರೆ. ಬಳಿಕ, ಚಿತ್ರತಂಡ ಶೂಟಿಂಗ್ ಸ್ಥಗಿತಗೊಳಿಸಿ ವಾಪಸ್ಸಾಗಿದೆ’ ಎಂದು ಮಾಗಡಿ ಡಿವೈಎಸ್ಪಿ ಪ್ರವೀಣ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಒರಟ ಶ್ರೀ ಮತ್ತು ದಿಲೀಪ್ ಎಂಬುವರು ನಮ್ಮನ್ನು ಭೇಟಿ ಮಾಡಿ ತಿಮ್ಮಜ್ಜಿ ಕುರಿತು ಸಿನಿಮಾ ನಿರ್ಮಾಣಕ್ಕೆ ಅನುಮತಿ ಕೋರಿದ್ದರು. ನಾವು ಅನುಮತಿ ಕೊಟ್ಟಿರಲಿಲ್ಲ. ಆದರೂ, ಸಿನಿಮಾ ಚಿತ್ರೀಕರಣ ಆರಂಭಿಸಿದ್ದರು. ಹುಲಿಕಲ್ನಲ್ಲಿ ಚಿತ್ರೀಕರಣ ಮಾಡುತ್ತಿರುವ ವಿಷಯ ಗೊತ್ತಾಗುತ್ತಿದ್ದಂತೆ, ಪೊಲೀಸ್ ಠಾಣೆಗೆ ತೆರಳಿ ಶೂಟಿಂಗ್ ಸ್ಥಗಿತಕ್ಕೆ ದೂರು ಕೊಟ್ಟೆವು. ಜೊತೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೂ ದೂರು ನೀಡಿದ್ದೇವೆ’ ಎಂದು ತಿಮ್ಮಕ್ಕ ಅವರ ದತ್ತುಪುತ್ರ ಉಮೇಶ್ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.