ADVERTISEMENT

ರಾಮನಗರ | ಶಿಕ್ಷಕರ ವರ್ಗಾವಣೆ ಮುನ್ನ ಚರ್ಚಿಸಿ: ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಸಪ್ಪ

ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ; ಡಿಡಿಪಿಐ ಕಾರ್ಯವೈಖರಿಗೆ ಸದಸ್ಯರ ಆರೋಪ

​ಪ್ರಜಾವಾಣಿ ವಾರ್ತೆ
Published 26 ಜೂನ್ 2020, 15:00 IST
Last Updated 26 ಜೂನ್ 2020, 15:00 IST
ಸಭೆಯಲ್ಲಿ ಜಿ.ಪಂ. ಸಿಇಒ ಇಕ್ರಂ ಮಾತನಾಡಿದರು
ಸಭೆಯಲ್ಲಿ ಜಿ.ಪಂ. ಸಿಇಒ ಇಕ್ರಂ ಮಾತನಾಡಿದರು   

ರಾಮನಗರ: ಜಿಲ್ಲೆಯಲ್ಲಿ ಶಿಕ್ಷಕರ ವರ್ಗಾವಣೆ, ಅಮಾನತಿಗೆ ಮುನ್ನ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳ ಬಳಿ ಚರ್ಚಿಸಿ ಕ್ರಮ ಕೈಗೊಳ್ಳಿ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಸಪ್ಪ ಅವರು ಡಿಡಿಪಿಐ ಸೋಮಶೇಖರಯ್ಯ ಅವರಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವರ್ಗಾವಣೆಗೆ ಬಗ್ಗೆ ಸದಸ್ಯರು ಸಾಕಷ್ಟು ಆರೋಪ ಮಾಡುತ್ತಿದ್ದಾರೆ. ಹೀಗಾಗಿ ಯಾವುದೇ ತೀರ್ಮಾನಕ್ಕೆ ಮುನ್ನ ಸಿಇಒ ಜತೆ ಮಾತನಾಡಿ ಎಂದು ಸಲಹೆ ನೀಡಿದರು.

ಇದಕ್ಕೂ ಮುನ್ನ ಸದಸ್ಯ ಶಿವಕುಮಾರ್ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದರು. ಶಿಕ್ಷಕರನ್ನು ವರ್ಗಾವಣೆ ಮಾಡುವ ಸಲುವಾಗಿಯೇ ಸಸ್ಪೆಂಡ್ ಮಾಡಲಾಗುತ್ತಿದೆ. 105ರಿಂದ 106 ಇಂತಹದ್ದೇ ಪ್ರಕರಣಗಳು ಇವೆ. ಇದರಲ್ಲಿ 98 ಮಂದಿಯನ್ನು ನಿದೋರ್ಷಿಗಳೆಂದು ಬಿಂಬಿಸಲಾಗಿದೆ. ಕನಕಪುರ ತಾಲೂಕಿನ ಹುಲಿಬೆಲೆ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕರನ್ನು ಇದೇ ರೀತಿ ಮಾಡಲಾಗಿದ್ದು ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ತಾಲ್ಲೂಕಿಗೆ ವರ್ಗಾವಣೆ ಮಾಡಲಾಗಿದೆ ಎಂದು ದೂರಿದರು.

ADVERTISEMENT

ದೊಡ್ಡಾಲಹಳ್ಳಿಯ ಕೆಪಿಎಸ್ ಶಾಲೆಯಲ್ಲಿ ಸಮರ್ಪಕ ಶಿಕ್ಷಕರಿಲ್ಲದೇ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗುತ್ತಿದ್ದಾರೆ ಎಂದರು.
ಡಿಡಿಪಿಐ ಸೋಮಶೇಖರಯ್ಯ ಉತ್ತರಿಸಿ ಜಿಲ್ಲೆಯಲ್ಲಿ ಈತನಕ ನಾಲ್ಕು ಪ್ರಕರಣಗಳಿಗೆ ಮಾತ್ರ ವರ್ಗಾವಣೆ ಮಾಡಿದ್ದೇನೆ. ಇನ್ನು ಹುಲಿಬೆಲೆಯ ಶಾಲೆಯ ಮುಖ್ಯಶಿಕ್ಷಕ ಸರಿಯಾದ ಸಮಯಕ್ಕೆ ಶಾಲೆಗೆ ಹಾಜರಾಗುತ್ತಿರಲಿಲ್ಲ. ಶಾಲೆಯ ಅನುದಾನವನ್ನು ಬಳಕೆ ಮಾಡಿಕೊಂಡ ಗಂಭೀರ ಆರೋಪವಿತ್ತು. ಹಾಗಾಗಿ ಮಾಗಡಿ ತಾಲೂಕಿಗೆ ವರ್ಗಾವಣೆ ಮಾಡಲಾಗಿದೆ ಎಂದು ಸಮಜಾಯಿಷಿ ನೀಡಿದರು.

ಶಾಸಕ ಮಂಜುನಾಥ್ ಮಾತನಾಡಿ, ಜಿಲ್ಲೆಯಲ್ಲಿ ಶಾಲಾ ಕಟ್ಟಡ, ಅಂಗನವಾಡಿ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿಯೇ ಉಳಿದುಕೊಂಡಿದೆ. ಇದನ್ನು ಒಡೆದು ಹಾಕಿ ಮರು ನಿರ್ಮಾಣ ಕಾರ್ಯ ಆಗಬೇಕು ಎಂದು ಆಗ್ರಹಿಸಿದರು.

ಮೂಲ ಸೌಕರ್ಯ ಕೊಡಿ: ಮಾಗಡಿ ಶಾಸಕ ಮಂಜುನಾಥ್ ಮಾತನಾಡಿ, ಜಿಲ್ಲೆಯಲ್ಲಿ ಕ್ವಾರೆಂಟೈನ್ ಆದವರ ಕಷ್ಟ ಹೇಳತೀರದಾಗಿದೆ. ಅಲ್ಲಿನ ಅವ್ಯವಸ್ಥೆ ಕುರಿತು ಫೋನ್ ಮಾಡಿ ಸಂಕಷ್ಟ ತೋಡಿಕೊಳ್ಳುತ್ತಿದ್ದಾರೆ. ಜಿಲ್ಲಾಡಳಿತ ಸಂಪೂರ್ಣ ಮೌನವಾಗಿದೆ. ಹಣ ಪಾಪತಿಸಿ ಖಾಸಗಿ ಜಾಗಗಳಲ್ಲಿ ಕ್ವಾರೆಂಟೈನ್ ಒಲವು ತೋರಿಸುತ್ತಿದ್ದಾರೆ. ಆದರೆ, ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಇನ್ನು ಕ್ವಾರೆಂಟೈನ್‌ ಕೇಂದ್ರಗಳಲ್ಲಿ ಶೌಚಾಲಯಗಳನ್ನು ಅವರೇ ಸ್ವಚ್ಛಗೊಳಿಸುತ್ತಿದ್ದಾರೆ. ಅಧಿಕಾರಿಗಳು ಮಾತ್ರ ಮೌನವಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಉತ್ತರಿಸಿದ ಡಿಎಚ್‍ಒ ನಿರಂಜನ್, ಈ ಕುರಿತು ಕ್ರಮ ತೆಗೆದುಕೊಳ್ಳಲಾಗುತ್ತದೆ. ಕೊರೊನಾದಿಂದ ಸಂಪೂರ್ಣ ಗುಣಮುಖರಾದವರನ್ನು ಬಿಡುಗಡೆ ಮಾಡಲಾಗುತ್ತಿದೆ. ಮನೆಗೆ ತೆರಳಿದ ನಂತರ 14ದಿನ ಹೋಮ್ ಕ್ವಾರೆಂಟೈನ್‌ನಲ್ಲೇ ಇರಬೇಕು ಉಪಾಧ್ಯಕ್ಷೆ ಉಷಾ ರವಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಶಂಕರ್, ಪ್ರಸನ್ನ ಕುಮಾರ್, ಸದಸ್ಯರು ಹಾಗೂ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.