ಹಾರೋಹಳ್ಳಿ: ಹಾರೋಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕೆಬ್ಬೆದೊಡ್ಡಿ ಗ್ರಾಮದಲ್ಲಿ ಗಬ್ಬೆದ್ದು ನಾರುತ್ತಿದ್ದ ಚರಂಡಿಗಳನ್ನು ಗ್ರಾಮಸ್ಥರೇ ತಮ್ಮ ಸ್ವಂತ ಹಣದಲ್ಲಿ ಸ್ವಚ್ಛ ಮಾಡಿಸಿಕೊಂಡರು.
ತಮ್ಮ ಗ್ರಾಮದಲ್ಲಿ ಚರಂಡಿಗಳಲ್ಲಿ ಕಸ, ಕಡ್ಡಿ ನಿಂತುಕೊಂಡಿದ್ದು, ಕೊಳಚೆ ನೀರು ಸರಾಗವಾಗಿ ಹರಿಯದೆ ಚರಂಡಿ ಗಬ್ಬು ನಾರುತ್ತಿದೆ. ಈ ಚರಂಡಿಗಳನ್ನು ದುರಸ್ತಿಗೊಳಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಲಾಯಿತು. ಆದರೆ, ಯಾವುದೇ ಪ್ರಯೋಜನವಾಗಲಿಲ್ಲ. ಇದರಿಂದಾಗಿ ಗ್ರಾಮಸ್ಥರೇ ಹಣ ಸಂಗ್ರಹಿಸಿ, ಚರಂಡಿಯನ್ನು ಶುಚಿ ಮಾಡಿಕೊಂಡಿದ್ದೇವೆ ಎಂದು ಗ್ರಾಮಸ್ಥರು ಹೇಳಿದರು.
ಗ್ರಾಮಸ್ಥರಾದ ವೀಣಾ ಮಾತನಾಡಿ, ಕೆಬ್ಬೆದೊಡ್ಡಿ ಗ್ರಾಮಸ್ಥರು ಹಲವು ವರ್ಷಗಳಿಂದ ಚರಂಡಿಯಲ್ಲಿ ನೀರು ಹರಿಯದೆ ಗಬ್ಬು ನಾರುತ್ತಿವೆ. ಚರಂಡಿಗಳು ತುಂಬಿಕೊಂಡು ರಸ್ತೆಯ ಮೇಲೆಲ್ಲಾ ಕೊಳಚೆ ನೀರು ಹರಿಯುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ, ಯಾವುದೇ ಪ್ರಯೋಜನವಾಗಿಲ್ಲ. ಒಂದು ನಲ್ಲಿಗೆ ತಲಾ ₹8,000 ತೆರಿಗೆ ಹಾಕಿದ್ದಾರೆ. ಆದರೆ, ಹಣವನ್ನು ಮಾತ್ರ ಜನರಿಗೆ ಮೂಲ ಸೌಕರ್ಯ ಕಲ್ಪಿಸಲು ವಿನಿಯೋಗಿಸುತ್ತಿಲ್ಲ ಎಂದು ದೂರಿದರು.
ಇದೇ ವೇಳೆ ಗ್ರಾಮಸ್ಥರಾದ ಉದಯ್, ಮಂಜುಳಾ, ವೀಣಾ, ಬೇಬಿ, ಪುಟ್ಟಲಕ್ಷ್ಮಮ್ಮ, ಕಾಳಪ್ಪ, ಮರಿಯಣ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.