ಚನ್ನಪಟ್ಟಣ: ಅಪರಾಧ ಪ್ರಕರಣಗಳನ್ನು ಭೇದಿಸುವುದು, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದಷ್ಟೇ ಪೊಲೀಸರ ಕೆಲಸವಲ್ಲ. ಸಾಮಾಜಿಕ ಸೇವೆಯೂ ನಮ್ಮ ಕರ್ತವ್ಯ ಎನ್ನುವುದನ್ನು ಅರಿತುಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಗಿರೀಶ್ ಕಿವಿಮಾತು ಹೇಳಿದರು.
ಪಟ್ಟಣದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ನಡೆದ ಪೊಲೀಸರಿಗೆ ದಿನಸಿ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೊರೊನಾ ಸಂಕಷ್ಟದ ವೇಳೆ ಜಿಲ್ಲೆಯ ಕೆಲವೆಡೆ ಪೊಲೀಸರು ಸಮಾಜ ಸೇವೆ ಮಾಡಿ ತೋರಿಸಿದ್ದಾರೆ. ಜಿಲ್ಲೆಯ ಕೆಲ ಪೊಲೀಸ್ ಠಾಣೆಯಿಂದ ಪ್ರತಿನಿತ್ಯ 2 ಸಾವಿರ ಜನರಿಗೆ ಊಟ ನೀಡಲಾಗುತ್ತಿದೆ. ಜೊತೆಗೆ ಕೆಲ ಕಂಪನಿಗಳು ಮತ್ತು ದಾನಿಗಳ ಸಹಕಾರ ಪಡೆದು ಕಡುಬಡವರಿಗೆ, ಆಟೊ ಚಾಲಕರಿಗೆ, ಸವಿತಾ ಸಮಾಜದವರಿಗೆ, ಬುಡಕಟ್ಟು ಜನಾಂಗದವರಿಗೆ ಆಹಾರ ಕಿಟ್ ವಿತರಣೆ ಮಾಡಿದ್ದಾರೆ ಎಂದರು.
ಕೊರೊನಾ ಸಂದರ್ಭದಲ್ಲಿ ಸಿಕ್ಕಿರುವ ಅವಕಾಶವನ್ನುಸದ್ಬಳಕೆ ಮಾಡಿಕೊಂಡು ಪೊಲೀಸರ ಬಗ್ಗೆ ಸಮಾಜದಲ್ಲಿ ಬೇರೂರಿರುವ ಕೆಲವು ಕೆಟ್ಟ ಭಾವನೆ ಹೋಗಲಾಡಿಸಲು ಮುಂದಾಗಬೇಕು. ಸಮಾಜಕ್ಕೆ ನೆರವಾಗುವ ಕೆಲಸ ಮಾಡಬೇಕು. ಪೊಲೀಸರು ಎಂದರೆ ಜನಸಾಮಾನ್ಯರು ದೂರ ಓಡುವ ದಿನಗಳಿದ್ದವು. ಇಂದು ಪೊಲೀಸರ ಕಾರ್ಯ ಮೆಚ್ಚುವಂತೆ ಮಾಡಲಾಗುತ್ತಿದೆ. ಇದು ನಮ್ಮ ಜಿಲ್ಲೆಯ ಪೊಲೀಸ್ ಇಲಾಖೆಗೆ ಕೀರ್ತಿ ತಂದಿದೆ ಎಂದರು.
ಚನ್ನಪಟ್ಟಣ ಡಿವೈಎಸ್ಪಿ ಕೆ.ಎನ್. ರಮೇಶ್, ರಾಮನಗರ ಡಿವೈಎಸ್ಪಿ ಮೋಹನ್ ಕುಮಾರ್, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಡಿವೈಎಸ್ಪಿ ಜಿ. ಮಹೇಶ್, ಸರ್ಕಲ್ ಇನ್ಸ್ಪೆಕ್ಟರ್ ದಿವಾಕರ್, ರಾಮಪ್ಪ ಬಿ. ಗುತ್ತೇದಾರ್, ಸಬ್ ಇನ್ಸ್ಪೆಕ್ಟರ್ ಮುರುಳಿ, ರವಿ, ರವೀಂದ್ರ, ಬಿ.ಕೆ. ಪ್ರಕಾಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.