ಚನ್ನಪಟ್ಟಣ: ವೃದ್ಧರನ್ನು ಮಕ್ಕಳಂತೆ ಜೋಪಾನ ಮಾಡಬೇಕಾದುದು ಎಲ್ಲರ ಕರ್ತವ್ಯ ಎಂದು ಶಿರಡಿ ಸಾಯಿಬಾಬಾ ವೃದ್ಧಾಶ್ರಮದ ಸಂಸ್ಥಾಪಕ ಕಾರ್ಯದರ್ಶಿ ಹರೀಶ್ ಹೆಗ್ಗಡೆ ಅಭಿಪ್ರಾಯಪಟ್ಟರು.
ತಾಲ್ಲೂಕಿನ ದೇವರಹಳ್ಳಿಯ ಶಿರಡಿ ಸಾಯಿಬಾಬಾ ವೃದ್ಧಾಶ್ರಮದಲ್ಲಿ ಹಾರಿಜಾನ್ ಲೇಕ್ ವ್ಯೂ ಶಾಲೆ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ವಿಶ್ವ ಹಿರಿಯರ ದಿನಾಚರಣೆಯನ್ನು ಉದ್ಘಾಟನೆ ಮಾಡಿ ಮಾತನಾಡಿದರು.
‘ಪ್ರಸಕ್ತ ದಿನಗಳಲ್ಲಿ ಹಿರಿಯ ಜೀವಗಳನ್ನು ದೂರ ಮಾಡಿ, ಅವರ ಮೇಲಿನ ಕಾಳಜಿಯನ್ನು ಮರೆತಿರುವ ನಾವು ಮುಂದೊಂದು ದಿನ ನಾವೂ ವೃದ್ಧರಾಗುತ್ತೇವೆ ಎಂಬುದನ್ನು ಮರೆತಿದ್ದೇವೆ. ಹಿರಿಯ ಜೀವಗಳನ್ನು ನಾವು ನೋಡಿಕೊಳ್ಳುವ ದೃಷ್ಟಿಕೋನವನ್ನು ಬದಲಾವಣೆ ಮಾಡಿಕೊಳ್ಳಬೇಕು. ಪ್ರತಿಯೊಬ್ಬರೂ ಮನೆಯಲ್ಲಿರುವ ಹಾಗೂ ಸಮಾಜದಲ್ಲಿರುವ ವೃದ್ಧರನ್ನು ಪ್ರೀತಿ ವಿಶ್ವಾಸದಿಂದ ನೋಡಿಕೊಳ್ಳಬೇಕು’ ಎಂದರು.
ಶಾಲೆಯ ವತಿಯಿಂದ ವೃದ್ಧಾಶ್ರಮಕ್ಕೆ ಬೇಕಾದ ಹಲವು ವಸ್ತುಗಳನ್ನು ವಿತರಿಸಲಾಯಿತು. ಶಾಲೆಯ ಮುಖ್ಯಶಿಕ್ಷಕರು, ಸಹ ಶಿಕ್ಷಕರು ಹಾಗೂ ಶಾಲೆಯ ಆಡಳಿತ ಮಂಡಳಿ ಸದಸ್ಯರು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.