ADVERTISEMENT

ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಆಯೋಜನೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2019, 13:45 IST
Last Updated 18 ಡಿಸೆಂಬರ್ 2019, 13:45 IST

ರಾಮನಗರ: ಬಹುಜನ ವಿದ್ಯಾರ್ಥಿ ಸಂಘಟನೆ(ಬಿವಿಎಸ್) ವತಿಯಿಂದ ಸಂವಿಧಾನ ಜಾಗೃತಿ ಸಮ್ಮೇಳನದ ಅಂಗವಾಗಿ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಸಂಘಟನೆಯ ಜಿಲ್ಲಾ ಸಂಯೋಜಕ ಎಸ್.ಕುಮಾರ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸಂಘಟನೆಯು ಸಂವಿಧಾನ ಸಮರ್ಪಣಾ ದಿನವಾದ ನ.26ರಿಂದ ಸಂವಿಧಾನ ಜಾರಿಗೆ ಬಂದ ಜ.26ರವರೆಗೆ ರಾಜ್ಯದಾದ್ಯಂತ ಶಾಲ–ಕಾಲೇಜುಗಳಲ್ಲಿ ಪ್ರಬಂಧ ಸ್ಪರ್ಧೆ ಆಯೋಜಿಸುತ್ತಿದೆ. ವಿಜೇತರಿಗೆ ಒಟ್ಟು ₨5 ಲಕ್ಷ ಬಹುಮಾನ ದೊರೆಯಲಿದೆ. ಪದವಿ, ಸ್ನಾತಕೋತ್ತರ ವಿಭಾಗದವರಿಗೆ 2500 ಪದಗಳ ಮಿತಿಯಲ್ಲಿ ಭಾರತೀಯ ಸಮಾಜ ಪರಿವರ್ತನೆಯಲ್ಲಿ ಸಂವಿಧಾನದ ಮೂಲಭೂತ ಹಕ್ಕುಗಳು ಹಾಗೂ ರಾಜ್ಯ ನಿರ್ದೇಶಕ ತತ್ವಗಳ ಪತ್ರ ಕುರಿತು ಸ್ಪರ್ಧೆ ಇರಲಿದೆ. ಪದವಿ ಪೂರ್ವ ಮತ್ತು ತತ್ಸಸಮಾನ ಕೋರ್ಸ್‌ಗಳ ವಿಭಾಗದ ವಿದ್ಯಾರ್ಥಿಗಳು ಒಂದು ಸಾವಿರ ಪದಗಳ ಮಿತಿಯಲ್ಲಿ ಭಾರತ ಸಂವಿಧಾನದ ಪ್ರಸ್ತಾವನೆಯ ಮಹತ್ವದ ಕುರಿತು ಪ್ರಬಂಧ ಬರೆಯಲಿದ್ದಾರೆ. ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಭಾರತದ ಸಂವಿಧಾನ ರಚನೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪಾತ್ರ ಕುರಿತು ಸ್ಪರ್ಧೆ ನಡೆಯಲಿದೆ ಎಂದರು.

ಪ್ರಬಂಧವನ್ನು ವಿಷಯ ತಜ್ಞರಿಂದ ಮೌಲ್ಯಮಾಪನ ಮಾಡಿಸಲಾಗುತ್ತದೆ. ಜಿಲ್ಲೆಯ ವಿದ್ಯಾರ್ಥಿಗಳು ಮುಂದಿನ ತಿಂಗಳ 10ರೊಳಗೆ ರಾಮನಗರದ ರಾಯರದೊಡ್ಡಿ ಸರ್ಕಾರಿ ಪ್ರಥಮ ದರ್ಜಿ ಮಹಿಳಾ ಕಾಲೇಜಿನ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಬೀರಯ್ಯ ಅವರಿಗೆ ತಲುಪಿಸಬೇಕು ಎಂದು ಹೇಳಿದರು.

ADVERTISEMENT

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ್, ಪದಾಕಾರಿಗಳಾದ ಲೋಕೇಶ್ ಮೌರ್ಯ, ಪ್ರಕಾಶ್ ಮೌರ್ಯ, ಹರೀಶ್ ಬಾಲು, ಭರತ್ ಕುಮಾರ್, ಮುತ್ತುರಾಜು, ವೀರಭದ್ರಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.