ರಾಮನಗರ:ವಿವಿಧ ಕ್ಷೇತ್ರಗಳಲ್ಲಿನ ಸಾಧಕರು ಹಾಗೂ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ರೋಟರಿ ಸಿಲ್ಕ್ ಸಿಟಿ ವತಿಯಿಂದ ಸನ್ಮಾನಿಸಲಾಯಿತು.
ನಗರದ ಗುರುಶ್ರೀ ಮ್ಯಾನ್ಶನ್ ಕಟ್ಟಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಮನಗರದ ಲಕ್ಷ್ಮೀಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಜಿ.ದಯಾನಂದ, ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ವಿ. ಕವಿತಾ, ಜಿಲ್ಲಾಸ್ಪತ್ರೆ ವೈದ್ಯರಾದ ಡಾ. ಯಶೋಧ, ಪ್ರಯೋಗಾಲಯ ಪರೀಕ್ಷಕ ಎನ್.ಕೆ. ಪುಟ್ಟರಾಜು, ಆರೋಗ್ಯ ಇಲಾಖೆ ಸಿಬ್ಬಂದಿ ಗಂಗಾಧರ್ ಅವರನ್ನು ಸನ್ಮಾನಿಸಲಾಯಿತು.
ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಅತಿ ಹೆಚ್ಚು ಅಂಕ ಪಡೆದ ಜಾಲಮಂಗಲ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಬಿ.ಎಸ್. ಅರ್ಚನಾ(ಶೇ 93.44), ಇದೇ ಶಾಲೆಯ ಜೆ.ವಿ. ನಿಸರ್ಗಾ (92.96), ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ರಾಮನಗರ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಸಿ. ಚೈತನ್ಯಾ (542 ಅಂಕ), ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಹುಸೇನ್ ಪಾಷ (558 ಅಂಕ), ಸುಗ್ಗನಹಳ್ಳಿ ಪದವಿ ಪೂರ್ವ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿ ಜೆ.ಆರ್. ರಕ್ಷಿತಾ (528 ಅಂಕ) ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ರೋಟರಿ ಜಿಲ್ಲೆ 3190ರ ಜಿಲ್ಲಾ ಪಾಲಕ ಪಿ.ಶಿವಪ್ಪ ಮಾತನಾಡಿ "ಬೆಂಗಳೂರು ಹೊರವಲಯದಲ್ಲಿರುವ ರೋಟರಿ ಸಂಸ್ಥೆಗಳ ಪೈಕಿ ರೋಟರಿ ಸಿಲ್ಕ್ ಸಿಟಿ ಹೆಚ್ಚು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ’ ಎಂದು ಶ್ಲಾಘಿಸಿದರು.
ರೋಟರಿ ಸಿಲ್ಕ್ ಸಿಟಿ ಅಧ್ಯಕ್ಷ ಎನ್.ರವಿಕುಮಾರ್ ಮಾತನಾಡಿ ಕ್ಲಬ್ ಮತ್ತು ರಾಮಘಡ್ ರಾಕರ್ಸ್ ಸದಸ್ಯರು ಇಲ್ಲಿನ ವಿವಿಧ ಬೆಟ್ಟ, ಗುಡ್ಡಗಳಿಗೆ ಭೇಟಿ ಕೊಟ್ಟು ಸೀಡ್ ಬಾಲ್ ಮತ್ತು ಸಸಿ ನೆಡುವ ಕಾರ್ಯಕ್ರಮ ಮಾಡುತ್ತಿದ್ದಾರೆ. ಪರಿಸರ ಸ್ವಚ್ಚತೆಯಲ್ಲೂ ತೊಡಗಿಸಿಕೊಂಡಿದ್ದಾರೆ ಎಂದರು.
ಶಿಕ್ಷಕರ ದಿನಾಚರಣೆಯಲ್ಲಿ ಜಿಲ್ಲಾಡಳಿತದ ವತಿಯಿಂದ ಸನ್ಮಾನಿತರಾದ ಶಿಕ್ಷಕ ಎಂ.ಕೆ. ಮಂಜುನಾಥ್ ಅವರನ್ನು ಇದೇ ವೇಳೆ ಅಭಿನಂದಿಸಲಾಯಿತು. ಸೋಮಶೇಖರ್ ದಿನದ ವಿಶೇಷತೆ ಬಗ್ಗೆ ಮಾತನಾಡಿದರು. ರಘು ಕುಮಾರ್ ವರದಿ ಓದಿದರು. ಕೆ.ವಿ.ಉಮೇಶ್ ಪ್ರಾರ್ಥಿಸಿದರು. ನವೀನ್ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.