ADVERTISEMENT

ಸ್ಥಳೀಯ ಸಂಸ್ಥೆಗೆ ಬೇಕು ಆರ್ಥಿಕ ಭದ್ರತೆ: ಹಣಕಾಸು ಆಯೋಗದ ಅಧ್ಯಕ್ಷರಿಗೆ ಮನವಿ

ನಗರಸಭೆಗೆ ಭೇಟಿ ನೀಡಿದ ಹಣಕಾಸು ಆಯೋಗದ ಅಧ್ಯಕ್ಷರಿಗೆ ಜನಪ್ರತಿನಿಧಿಗಳ ಮನವಿ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2025, 15:43 IST
Last Updated 23 ಏಪ್ರಿಲ್ 2025, 15:43 IST
ರಾಮನಗರ ನಗರಸಭೆಗೆ ಐದನೇ ಹಣಕಾಸು ಆಯೋಗದ ಅಧ್ಯಕ್ಷ ಡಾ. ಸಿ. ನಾರಾಯಣಸ್ವಾಮಿ ಹಾಗೂ ತಂಡದ ಸದಸ್ಯರು ಭೇಟಿ ನೀಡಿದರು. ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ, ಉಪಾಧ್ಯಕ್ಷೆ ಆಯೇಷಾ ಬಾನು, ಸದಸ್ಯರು ಹಾಗೂ ಅಧಿಕಾರಿಗಳು ಇದ್ದಾರೆ
ರಾಮನಗರ ನಗರಸಭೆಗೆ ಐದನೇ ಹಣಕಾಸು ಆಯೋಗದ ಅಧ್ಯಕ್ಷ ಡಾ. ಸಿ. ನಾರಾಯಣಸ್ವಾಮಿ ಹಾಗೂ ತಂಡದ ಸದಸ್ಯರು ಭೇಟಿ ನೀಡಿದರು. ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ, ಉಪಾಧ್ಯಕ್ಷೆ ಆಯೇಷಾ ಬಾನು, ಸದಸ್ಯರು ಹಾಗೂ ಅಧಿಕಾರಿಗಳು ಇದ್ದಾರೆ   

ರಾಮನಗರ: ಸ್ಥಳೀಯ ಆಡಳಿತ ಸಂಸ್ಥೆಯಾದ ನಗರಸಭೆಯ ಮೂಲ ಆದಾಯವಾದ ತೆರಿಗೆ ನಿಧಿಯಲ್ಲಿ ಹೆಚ್ಚಿನ ಪಾಲು ಸಿಬ್ಬಂದಿ ವೇತನ ಹಾಗೂ ವಾಹನಗಳ ನಿರ್ವಹಣೆಗೆ ಖರ್ಚಾಗುತ್ತಿದೆ. ಹೊರಗುತ್ತಿಗೆ ಹಾಗೂ ನೇರಪಾವತಿ ಸಿಬ್ಬಂದಿಗೆ ನಗರಸಭೆ ನಿಧಿಯಿಂದಲೇ ವೇತನ ಮತ್ತು ಭತ್ಯೆಗಳನ್ನು ನೀಡಲಾಗುತ್ತಿದೆ. ಈ ಖರ್ಚುಗಳು ನಗರಸಭೆಗೆ ಹೊರೆಯಾಗಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಹಿನ್ನೆಡೆಯಾಗುತ್ತಿದೆ. ಸ್ಥಳೀಯ ಸಂಸ್ಥೆಗಳು ಉತ್ತಮ ಆಡಳಿತ ನೀಡಬೇಕಾದರೆ ಅವುಗಳಿಗೆ ಆರ್ಥಿಕ ಭದ್ರತೆ ಒದಗಿಸಬೇಕು...

ನಗರ ಸ್ಥಳೀಯ ಸಂಸ್ಥೆಗಳ ಆರ್ಥಿಕ ಸಬಲೀಕರಣದ ಹಿನ್ನೆಲೆಯಲ್ಲಿ ಇಲ್ಲಿನ ನಗರಸಭೆಗೆ ಮಂಗಳವಾರ ಭೇಟಿ ನೀಡಿದ ರಾಜ್ಯದ 5ನೇ ಹಣಕಾಸು ಆಯೋಗದ ಅಧ್ಯಕ್ಷ ಡಾ. ಸಿ. ನಾರಾಯಣಸ್ವಾಮಿ, ಸದಸ್ಯರಾದ ಮೊಹಮ್ಮದ್ ಸನಾವುಲ್ಲಾ, ಆರ್‌.ಎಸ್. ಪೊಂಡೆ, ಸಮಾಲೋಚಕರಾದ ಸುಪ್ರಸನ್ನ ಹಾಗೂ ಯಾಲಕ್ಕಿಗೌಡ ಅವರನ್ನು ಒಳಗೊಂಡ ತಂಡಕ್ಕೆ ನಗರಸಭೆಯ ಚುನಾಯಿತ ಪ್ರತಿನಿಧಿಗಳು ಮಾಡಿದ ಮನವಿ ಇದು.

ನಗರಸಭೆಯ ಸಭಾಂಗಣದಲ್ಲಿ ಚುನಾಯಿತಿ ಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ತಂಡವು, ನಗರಸಭೆಯಲ್ಲಿರುವ ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದ ಕುಂದುಕೊರತೆಗಳನ್ನು ಆಲಿಸಿ, ಅಹವಾಲುಗಳನ್ನು ಸಹ ಸ್ವೀಕರಿಸಿತು.

ADVERTISEMENT

ನಗರವು ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಜನಸಂಖ್ಯೆ ಜೊತೆಗೆ ಆಸ್ತಿಗಳ ಸಂಖ್ಯೆಯೂ ಹಿಗ್ಗುತ್ತಿದೆ. ಪ್ರಸ್ತುತ ರಾಜ್ಯ ಮತ್ತು ಕೇಂದ್ರ ಸರ್ಕಾರರದ ವಿವಿಧ ಮೂಲಗಳಿಂದ ನಗರಸಭೆಗೆ ಸಿಗುತ್ತಿರುವ ಅನುದಾನ ಮೂಲಸೌಕರ್ಯ, ದುರಸ್ತಿ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಸಾಕಾಗುತ್ತಿಲ್ಲ. ಹಾಗಾಗಿ, ಅನುದಾನವನ್ನು ಹೆಚ್ಚಿಸಬೇಕು. ಆದಾಯ ಹೆಚ್ಚಳಕ್ಕೆ ನಗರಸಭೆ ಕೈಗೊಳ್ಳುವ ತೀರ್ಮಾನಕ್ಕೆ ಎದುರಾಗುವ ಆಡಳಿತಾತ್ಮಕ ಮತ್ತು ತಾಂತ್ರಿಕ ಸಮಸ್ಯೆಗಳನ್ನು ತ್ವರಿತವಾಗಿ ನಿವಾರಿಸಿ ಕೊಡಬೇಕು ಎಂದು ಗಮನಕ್ಕೆ ತಂದರು.

ಪಾರದರ್ಶಕ ಆಡಳಿತಕ್ಕಾಗಿ ಆಗಾಗ ಬದಲಾಗುವ ಆಡಳಿತಕ್ಕೆ ಸಂಬಂಧಿಸಿದ ತಂತ್ರಾಂಶಗಳು ಕುರಿತು ಸಿಬ್ಬಂದಿಗೆ ಸಕಾಲಕ್ಕೆ ತರಬೇತಿ ನೀಡಬೇಕು. ಸ್ಥಳೀಯ ಸಂಸ್ಥೆಗಳ ಆಡಳಿತ ವೈಖರಿ, ಸದಸ್ಯರ ಹಕ್ಕುಬಾಧ್ಯತೆಗಳ ಕುರಿತು ಚುನಾಯಿತ ಸದಸ್ಯರಿಗೆ ತರಬೇತಿಗೆ ವ್ಯವಸ್ಥೆ ಮಾಡಬೇಕು. ಇದರಿಂದ ಆಡಳಿತ ವ್ಯವಸ್ಥೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಸಾಧ್ಯವಾಗುತ್ತದೆ ಎಂದು ಸದಸ್ಯರು ಅಭಿಪ್ರಾಯಪಟ್ಟರು.

ನಗರಸಭೆಗೆ ಹಂಚಿಕೆಯಾಗಿರುವ ಅನುದಾನ, ನಗರಸಭೆ ನಿಧಿ, ಆದಾಯ, ಖರ್ಚು ವೆಚ್ಚಗಳ ಕುರಿತು ಅಂಕಿ ಅಂಶಗಳನ್ನು ಅಧಿಕಾರಿಗಳು ಆಯೋಗದ ಎದುರು ಮಂಡಿಸಿದರು. ಜನಪ್ರತಿನಿಧಿಗಳಿಂದ ಕುಂದುಕೊರತೆ ಜೊತೆಗೆ ವಿವಿಧ ಬೇಡಿಕೆಗಳನ್ನು ಆಲಿಸಿದ ಆಯೋಗದ ಅಧ್ಯಕ್ಷರು, ಎಲ್ಲವನ್ನೂ ಸರ್ಕಾರದಕ್ಕೆ ಗಮನಕ್ಕೆ ತರುವ ಭರವಸೆ ನೀಡಿದರು.

ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ, ಉಪಾಧ್ಯಕ್ಷೆ ಆಯೇಷಾ ಬಾನು, ಪೌರಾಯುಕ್ತ ಡಾ. ಜಯಣ್ಣ, ಸದಸ್ಯರು, ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.

288 ಹುದ್ದೆ ಪೈಕಿ 119 ಖಾಲಿ!

ನಗರಸಭೆಗೆ ಅಧಿಕಾರಿಗಳು ಸಿಬ್ಬಂದಿ ಹಾಗೂ ಪೌರ ಕಾರ್ಮಿಕರು ಸೇರಿದಂತೆ ಒಟ್ಟು 288 ಹುದ್ದೆಗಳು ಮಂಜೂರಾಗಿವೆ. ಆದರೆ ಭರ್ತಿಯಾಗಿರುವುದು ಕೇವಲ 119 ಮಾತ್ರ. 169 ಸಿಬ್ಬಂದಿ ಕೊರತೆಯಲ್ಲಿ ನಗರಸಭೆ ಕಾರ್ಯನಿರ್ವಹಿಸುತ್ತಿದೆ. ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಜೊತೆಗೆ ಹೊರಗುತ್ತಿಗೆ ಆಧಾರದ ಮೇಲೆ ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವವರನ್ನು ಕಾಯಂಗೊಳಿಸಬೇಕು. ಸಿಬ್ಬಂದಿ ಸಂಬಳವನ್ನು ಸರ್ಕಾರದಿಂದಲೇ ನೀಡಬೇಕು. ಆಗ ನಗರಸಭೆ ಮೇಲಿನ ಆರ್ಥಿಕ ಹೊರೆ ತಗ್ಗಲಿದೆ ಎಂದು ಸದಸ್ಯರು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.