ರೈಲು
– ಪ್ರಜಾವಾಣಿ ಚಿತ್ರ
ಚನ್ನಪಟ್ಟಣ (ರಾಮನಗರ): ಮೈಸೂರು- ಉದಯಪುರ ನಡುವೆ ಸಂಚರಿಸುವ ಹಮ್ಸಫರ್ ಎಕ್ಸ್ಪ್ರೆಸ್ ರೈಲಿನ ಎಂಜಿನ್ನಲ್ಲಿ ಗುರುವಾರ ಬೆಳಿಗ್ಗೆ ತಾಲ್ಲೂಕಿನ ವಂದಾರಗುಪ್ಪೆ ಗೇಟ್ ಬಳಿ ಬೆಂಕಿ ಕಾಣಿಸಿಕೊಂಡಿತು.
ಬೆಂಕಿ ಗಮನಿಸಿದ ಗೇಟ್ಮ್ಯಾನ್ ಕೆಂಪು ಬಾವುಟ ಪ್ರದರ್ಶಿಸಿದ್ದರಿಂದ ಲೋಕೊ ಪೈಲಟ್ ತುರ್ತು ಬ್ರೇಕ್ ಹಾಕಿ ರೈಲು ನಿಲ್ಲಿಸಿದರು. ಕೂಗಳತೆ ದೂರದಲ್ಲಿದ್ದ ಅಗ್ನಿಶಾಮಕ ಠಾಣೆ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದರು. ಘಟನೆಯಲ್ಲಿ ಯಾರಿಗೂ ತೊಂದರೆಯಾಗಿಲ್ಲ.
ಎಂಜಿನ್ನಲ್ಲಿ ಬೆಂಕಿ ಕಂಡ ಸಾರ್ವಜನಿಕರು ರೈಲು ನಿಲ್ಲಿಸುವಂತೆ ಜೋರಾಗಿ ಕೂಗಿಕೊಂಡರು. ಇದನ್ನು ಗಮನಿಸದ ಲೋಕೊಪೈಲಟ್ ಮುಂದೆ ಗೇಟ್ಮ್ಯಾನ್ ತೋರಿದ ಕೆಂಪು ಬಾವುಟ ಕಂಡು ರೈಲು ನಿಲ್ಲಿಸಿದ. ಆ ಹೊತ್ತಿಗಾಗಲೇ ಜನರು ಓಡಿ ಹೋಗಿ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದರು.
ಎಂಜಿನ್ನಲ್ಲಿ ಡೀಸೆಲ್ ಸೋರಿಕೆಯಾಗಿ ಬೆಂಕಿ ಕಾಣಿಸಿಕೊಂಡಿರುವ ಸಾಧ್ಯತೆ ಇದೆ. ಬೆಂಕಿಯನ್ನು ಬೇಗ ನಂದಿಸದಿದ್ದರೆ ಬೋಗಿಗಳಿಗೂ ವ್ಯಾಪಿಸುವ ಸಾಧ್ಯತೆ ಇತ್ತು ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.