ADVERTISEMENT

ಚನ್ನಪಟ್ಟಣ | ನಕಲಿ ದಾಖಲೆ ಸೃಷ್ಟಿಸಿ ಜಮೀನು ಪರಭಾರೆ: ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2023, 6:41 IST
Last Updated 14 ಏಪ್ರಿಲ್ 2023, 6:41 IST

ಚನ್ನಪಟ್ಟಣ: ನಗರದ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನಕಲಿ ದಾಖಲೆ ಸೃಷ್ಟಿಸಿ ಬೇನಾಮಿ ಹೆಸರಿನಲ್ಲಿ ನೋಂದಣಿ ಮಾಡಲಾಗಿದೆ. ಈ ಪ್ರಕರಣ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ತಾಲ್ಲೂಕಿನ ಹುಚ್ಚಯ್ಯನದೊಡ್ಡಿ ರಮೇಶ್ ಎಂಬುವರ ಮೇಲೆ ನಗರದ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೇ ಗ್ರಾಮದ ಶೇಖರ್ ಹಾಗೂ ಮಂಚೇಗೌಡ ಎಂಬುವರು ಪ್ರತ್ಯೇಕವಾಗಿ ಪ್ರಕರಣ ದಾಖಲಿಸಿದ್ದಾರೆ.

ಗ್ರಾಮದ ಶೇಖರ್ ಮತ್ತು ಮಂಚೇಗೌಡ ಅವರ ಜಮೀನನ್ನು ಮಾರ್ಚ್‌ 23ರಂದು ಇದೇ ಗ್ರಾಮದ ರಮೇಶ್ ಎಂಬುವರು ನಕಲಿ ದಾಖಲೆ ಸೃಷ್ಟಿಸಿ, ತಮ್ಮ ಹೆಸರಿಗೆ ಪರಭಾರೆ ಮಾಡಿಕೊಂಡಿದ್ದಾರೆ ಎಂದು ದೂರು ದಾಖಲಾಗಿದೆ.

ADVERTISEMENT

ಮೃತರ ಹೆಸರು ಬಳಸಿ ನೋಂದಣಿ: ದಾಖಲಾಗಿರುವ ಎರಡೂ ಪ್ರಕರಣಗಳಲ್ಲಿ ಮೃತರ ಹೆಸರು ಬಳಸಿಕೊಂಡು ಜಮೀನು ಪರಭಾರೆ ಮಾಡಿರುವುದು ಬೆಳಕಿಗೆ ಬಂದಿದೆ. ಶೇಖರ್ ಅವರ ದೂರಿನ ಮಾಹಿತಿಯಂತೆ; ಜಮೀನು ನಮ್ಮ ಮುತ್ತ ಅಜ್ಜ ಸಿದ್ದೇಗೌಡ ಹೆಸರಿ
ನಲ್ಲಿದೆ. ಈ ಜಮೀನನ್ನು ಅಜ್ಜ ನೋಂದಣಿ ಮಾಡಿಕೊಟ್ಟಿರುವಂತೆ ದಾಖಲೆ ಸೃಷ್ಟಿಸಲಾಗಿದೆ. ಆದರೆ, ಸಿದ್ದೇಗೌಡ ಮೃತರಾಗಿ 76 ವರ್ಷ ಕಳೆದಿದೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.

ಹಾಗೆಯೇ ಮಂಚೇಗೌಡ ನೀಡಿರುವ ದೂರಿನಲ್ಲಿ ಜಮೀನು ನಮ್ಮ ತಾತ ಬಿಳಿಯಪ್ಪ ಹೆಸರಿನಲ್ಲಿದೆ. ಈ ಜಮೀನನ್ನು ತಾತ ನೋಂದಣಿ ಮಾಡಿಕೊಟ್ಟಿರುವಂತೆ ದಾಖಲೆ ಸೃಷ್ಟಿಸಲಾಗಿದೆ. ಆದರೆ, ಬಿಳಿಯಪ್ಪ ಮೃತರಾಗಿ 35ವರ್ಷ ಕಳೆದಿದೆ ಎಂದಿದೆ.

ಈ ಎರಡು ಪ್ರಕರಣಗಳಲ್ಲಿ ಉಪ ನೋಂದಣಾಧಿಕಾರಿ ಕಚೇರಿ ಸಿಬ್ಬಂದಿ, ಪತ್ರ ಬರಹಗಾರರು ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.