ADVERTISEMENT

ಮತಾಂತರ ನಿಷೇಧಕ್ಕೆ ಚಾಲನೆ ಕೊಟ್ಟಿದ್ದೇ ಕಾಂಗ್ರೆಸ್‌; ಕುಮಾರಸ್ವಾಮಿ ಆರೋಪ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2021, 12:17 IST
Last Updated 23 ಡಿಸೆಂಬರ್ 2021, 12:17 IST
   

ರಾಮನಗರ: ‘ಸಿದ್ದರಾಮಯ್ಯ ಕ್ಯಾಬಿನೆಟ್‌ನಲ್ಲಿ ಮತಾಂತರ ನಿಷೇಧದ ಕುರಿತು ಕಾಂಗ್ರೆಸ್‌ನವರೇ ಪ್ರಸ್ತಾವ ತಂದಿದ್ದು, ಈಗಿನ ಮತಾಂತರ ನಿಷೇಧ ಮಸೂದೆ ಬಗ್ಗೆ ಮಾತನಾಡಲು ಅವರಿಗೆ ನೈತಿಕತೆ ಇಲ್ಲ’ ಎಂದು ಜೆಡಿಎಸ್‌ ಶಾಸಕಾಂಗ ನಾಯಕ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಬಿಡದಿಯಲ್ಲಿ ಗುರುವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು, ‘ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಜಯಚಂದ್ರ ಈ ನೋಟ್‌ ತಂದಿದ್ದು, ಇದಕ್ಕೆ ಅವರೇ ಸಹಿ ಹಾಕಿದ್ದಾರೆ. ಇದೇ ಕಾರಣಕ್ಕೆ ಗುರುವಾರ ಸದನದಲ್ಲಿ ಬಿಜೆಪಿ ನಾಯಕರಿಂದ ಸಿದ್ದರಾಮಯ್ಯ ಮಂಗಳಾರತಿ ಮಾಡಿಸಿಕೊಂಡಿದ್ದಾರೆ. ಇನ್ನೂ ಯಾವ ಮುಖ ಹೊತ್ತುಕೊಂಡು ಮತಾಂತರ ನಿಷೇಧದ ಬಗ್ಗೆ ಮಾತನಾಡುತ್ತಾರೆ’ ಎಂದು ಪ್ರಶ್ನಿಸಿದರು.

ಮತಾಂತರ ನಿಷೇಧದ ವಿರುದ್ಧವಾಗಿ ಸದನದಲ್ಲಿ ಜೆಡಿಎಸ್‌ ಶಾಸಕರು ಮತ ಚಲಾಯಿಸಲಿದ್ದೇವೆ. ನಮ್ಮ ನಿಲುವಿಗೆ ಬದ್ಧ ಎಂದರು.

ADVERTISEMENT

ತರಾತುರಿಯಲ್ಲಿ ಪಾದಯಾತ್ರೆ:ಮೇಕೆದಾಟು ಕುರಿತು ಮೊದಲು ಹೋರಾಟ ಆರಂಭಿಸಿದ್ದೇ ಜೆಡಿಎಸ್. ನಾವೆಲ್ಲಿ ಪಾದಯಾತ್ರೆ ಶುರು ಮಾಡುತ್ತೇವೆಯೋ ಎಂಬ ಆತಂಕದಲ್ಲಿ ತರಾತುರಿಯಲ್ಲಿ ಈಗ ಪಾದಯಾತ್ರೆ ಮಾಡಲು ಹೊರಟಿದ್ದಾರೆ. ನಮ್ಮ ಹೋರಾಟವನ್ನು ಹೈಜಾಕ್ ಮಾಡಿಕೊಂಡು ಕೇವಲ ಜನರನ್ನು ಮರುಳು ಮಾಡಲು ಹೊರಟಿದ್ದಾರೆ. ಈ ಎರಡೂ ರಾಷ್ಟ್ರೀಯ ಪಕ್ಷಗಳಿಂದ ಯೋಜನೆಗೆ ಚಾಲನೆ ನೀಡಲು ಸಾಧ್ಯವಿಲ್ಲ ಎಂದು ಕುಮಾರಸ್ವಾಮಿ ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.