ರಾಮನಗರ: ನಗರದ ಬೋಳಪ್ಪನಹಳ್ಳಿ ಕೆರೆ ಸಮೀಪ ಇಟ್ಟಿಗೆ ಕಾರ್ಖಾನೆಯೊಂದರ ಬಳಿ ನಿಷೇಧಿತ ವೈಟ್ನರ್ ಸೇವನೆ ಮಾಡುತ್ತಿದ್ದವರ ಮೇಲೆ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಸೋಮವಾರ ದಾಳಿ ನಡೆಸಿ ಮಕ್ಕಳ ರಕ್ಷಣೆ ಮಾಡಿದ್ದಾರೆ.
ದಾಳಿಯ ಸಂದರ್ಭ ಐವರು ಮಕ್ಕಳು ದೊರೆತಿದ್ದು, ಅವರಲ್ಲಿ ಒಬ್ಬ ತಪ್ಪಿಸಿಕೊಂಡಿದ್ದಾನೆ. ವಶಕ್ಕೆ ಸಿಕ್ಕ ಬಾಲಕರಲ್ಲಿ ಒಬ್ಬ ಒರಿಸ್ಸಾದವನಾಗಿದ್ದು, ಉಳಿದವರು ಸ್ಥಳೀಯರು. ದಾಳಿಯ ವೇಳೆ ಅರ್ಧ ಚೀಲದಷ್ಟು ವೈಟ್ನರ್ ದೊರೆತಿದೆ. ‘ಈ ಮಕ್ಕಳು ಶಾಲೆಗಳಿಗೆ ತೆರಳದೇ, ಇಟ್ಟಿಗೆ ಕಾರ್ಖಾನೆಯ ಬಳಿಯೇ ತಿರುಗಾಡುತ್ತಿದ್ದರು. ಖಚಿತ ಮಾಹಿತಿ ಅರಿತು ದಾಳಿ ನಡೆಸಿದ್ದೇವೆ. ಸದ್ಯ ಅವರಿಗೆ ತಾತ್ಕಾಲಿಕ ಶಿಬಿರದಲ್ಲಿ ರಕ್ಷಣೆ ಒದಗಿಸಲಾಗಿದ್ದು, ಪೋಷಕರು ಹಾಗು ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರು ಪಡಿಸಲಾಗುವುದು’ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಬಿ.ಎಲ್. ಸುರೇಂದ್ರ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.