ಮಾಗಡಿ: ಪಟ್ಟಣದ ಕನ್ನಿಕಾ ಮಹಲ್ನಲ್ಲಿ ಆರ್ಯ ವೈಶ್ಯ ಮಹಿಳಾ ಮಂಡಲಿ ವತಿಯಿಂದ ಮಂಗಳವಾರ ಗಂಗಾಪೂಜೆ, ಚಪ್ಪರ ಪೂಜೆಯೊಂದಿಗೆ ಮೂರು ದಿನಗಳ ಕಾಲ ನಡೆಯಲಿರುವ ಗಜಗೌರಿ ಉತ್ಸವಕ್ಕೆ ಚಾಲನೆ ನೀಡಲಾಯಿತು.
ಮಹಿಳಾ ಮಂಡಳಿ ಅಧ್ಯಕ್ಷೆ ಮೀರಾಶಿವಕುಮಾರ್ ಗಜಗೌರಿ ದೇವಿ ಮೂರ್ತಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಲೋಕಕಲ್ಯಾಣಾರ್ಥವಾಗಿ ಗಜಗೌರಿ ಉತ್ಸವ ಆರಂಭಿಸಿದ್ದೇವೆ. ನವಗ್ರಹಹೋಮ, ಗಜಗೌರಿವ ವ್ರತ, ಪಂಚಾಮೃತ ಅಭಿಷೇಕ ನಡೆಸುತ್ತಿದ್ದೇವೆ. 9 ಗಜಗೌರಿ ಮೂರ್ತಿಗಳನ್ನು ಶಾಸ್ತ್ರೋಕ್ತವಾಗಿ ಅಲಂಕರಿಸಿ ಕೂಡಿಸಿದ್ದೇವೆ ಎಂದರು.
ಆರ್ಯವೈಶ್ಯ ಮಹಿಳಾ ಮಂಡಲಿಯ ಉಪಾಧ್ಯಕ್ಷೆ ಜ್ಯೋತಿ ನಂಜುಂಡಸ್ವಾಮಿ ಮಾತನಾಡಿದರು.
ಎಚ್.ಪಿ.ರಾಮಚಂದ್ರಗುಪ್ತ, ಎಚ್.ಪಿ.ಶಶಿಕಾಂತ್, ಮಂಜುನಾಥ್ ಮತ್ತು ತಂಡದವರು ಗಜಗೌರಿ ವ್ರತದ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.
ಕಾರ್ಯದರ್ಶಿ ರೂಪಾರಾಜ್ ಮಾತನಾಡಿ ಜ. 17ರಂದು ಮಧ್ಯಾಹ್ನ 2.30ಕ್ಕೆ ಗಜಗೌರಿ ದೇವಿಯ ಮೆರವಣಿಗೆ ಪಟ್ಟಣದ ಮುಖ್ಯರಸ್ತೆಗಳಲ್ಲಿ ಜನಪದ ಕಲಾ ತಂಡಗಳೊಂದಿಗೆ ನಡೆಯಲಿದೆ. ಅದೇ ದಿನ ಸಂಜೆ 6.30ಕ್ಕೆ ಗುಂಡಯ್ಯನ ಕಲ್ಯಾಣಿಯಲ್ಲಿ ಗಜಗೌರಿ ದೇವಿ ತೆಪ್ಪೋತ್ಸವ ನಡೆಯಲಿದೆ ಎಂದರು. ಮಂಡಳಿಯ ಖಜಾಂಚಿ ಆರತಿ ಮದನ್, ನಿರ್ದೇಶಕರಾದ ಉಷಾನಾಗರಾಜ್, ವೈಭವಿ ನವೀನ್, ರಾಜಲಕ್ಷ್ಮೀ ಲಕ್ಷ್ಮೀನಾರಾಯಣ, ಲಕ್ಷ್ಮೀಗುಪ್ತ ಗಜಗೌರಿ ಉತ್ಸವದ ಬಗ್ಗೆ ಮಾತನಾಡಿದರು.
ಆರ್ಯ ವೈಶ್ಯ ಮಂಡಲಿ, ವಾಸವಿ ಯುವಜನ ಸಂಘ, ವಾಸವಿ ದೀಕ್ಷಾ ಸಮಿತಿ, ವಾಸವಿ ಕ್ಲಬ್, ವೈಶ್ಯ ವಿವಿಧ ಪತ್ತಿನ ಸಹಕಾರ ಸಂಘ, ವಾಸವಿ ಸೇವಾ ಸುವಿಧಾ, ಆರ್ಯವೈಶ್ಯ ರಾಘವೇಂದ್ರ ಸೇವಾ ಸಮಿತಿ, ವಾಸವಿ ವಿದ್ಯಾನಿಕೇತನ್, ರಾಮೋತ್ಸವ ಸೇವಾ ಸಮಿತಿ, ರಾಮಕೃಷ್ಣ ಶಾರದಾ ಸತ್ಸಂಗ ಕೇಂದ್ರ, ಶಿವಶಕ್ತಿ ಸಂಘ, ಪದ್ಮಾವತಿ ಸಂಘ, ಕನ್ನಿಕಾ ಭಜನಾ ಮಂಡಲಿ, ಶರ್ವಾಣಿ ಭಜನಾ ಮಂಡಳಿ, ಗಜಗೌರಿ ಉತ್ಸವದ ಪೋಷಕರ ಸಮಿತಿ, ವಾಸವಿ ಯುವತಿಯರ ಸಂಘದ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.