ಚನ್ನಪಟ್ಟಣ: ಪರಕೀಯರ ವಶದಲ್ಲಿದ್ದ ಭಾರತವನ್ನು ಸ್ವತಂತ್ರ ಭಾರತವನ್ನಾಗಿ ಮಾಡಲು ಹೋರಾಡಿದ ಮಹಾನ್ ನಾಯಕ ಮಹಾತ್ಮ ಗಾಂಧಿ ಹಾಗೂ ದೇಶದ ಎರಡನೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ತತ್ವ, ಆದರ್ಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದು ನಗರಸಭೆ ಪೌರಾಯುಕ್ತ ಶಿವನಾಂಕರಿಗೌಡ ತಿಳಿಸಿದರು.
ಪಟ್ಟಣದ ಪುರ ಭವನದಲ್ಲಿ ನಗರಸಭೆ ಆಡಳಿತದಿಂದ ಆಯೋಜಿಸಿದ್ದ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಅಹಿಂಸಾ ಮಾರ್ಗದಿಂದ ಪರಕೀಯರ ಸಂಕೋಲೆಯಿಂದ ಭಾರತವನ್ನು ರಕ್ಷಣೆ ಮಾಡುವುದರ ಜೊತೆಗೆ ಸರಳ ಮಾರ್ಗ ಅನುಸರಿಸಿ ಎಲ್ಲರಿಗೂ ಮಾರ್ಗದರ್ಶಕರಾಗಿರುವ ಗಾಂಧೀಜಿ ಅವರ ಜೀವನ ಎಲ್ಲರಿಗೂ ಮಾದರಿ. ಹಾಗೆಯೇ ಭಾರತದ ಎರಡನೇ ಪ್ರಧಾನಿಯಾಗಿ ದೇಶದ ಚುಕ್ಕಾಣಿ ಹಿಡಿದ ಜನಾನುರಾಗಿ ನಾಯಕ ಲಾಲ್ ಬಹದ್ದೂರ್ ಶಾಸ್ತ್ರಿ ಭಾರತವನ್ನು ವಿಶ್ವಮಟ್ಟದಲ್ಲಿ ಗುರುತಿಸುವಂತೆ ಸಾಧನೆ ಮೆರೆದ ಮಹಾನ್ ನಾಯಕ ಎಂದು ತಿಳಿಸಿದರು.
ಡಿವೈಎಸ್ಪಿ ಕೆ.ಎನ್. ರಮೇಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದ ನಗರಸಭೆಯ ಪೌರ ಕಾರ್ಮಿಕರಿಗೆ ಪ್ರಮಾಣ ಪತ್ರ ನೀಡಲಾಯಿತು. ಪ್ರೊಬೆಷನ್ ಡಿವೈಎಸ್ಪಿ ಅನುಷಾರಾಣಿ, ಪರಿಸರ ಎಂಜಿನಿಯರ್ಗಳಾದ ಮೀನಾಕ್ಷಿ, ಲೋಹಿತ್, ನಗರಸಭೆ ಸದಸ್ಯರಾದ ಸುಮಾ ರವೀಶ್, ಶ್ರೀನಿವಾಸಮೂರ್ತಿ, ಸತೀಶ್ ಬಾಬು, ಲಕ್ಷ್ಮಮ್ಮ, ರಫೀಕ್, ವಾಸಿಲ್ ಆಲಿಖಾನ್, ಸರ್ವಮಂಗಳಾ, ಲೋಕೇಶ್, ಮಂಗಳಮ್ಮ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.