ADVERTISEMENT

ಜಿಲೆಟಿನ್‌ ಕಡ್ಡಿಯಿಂದಲೇ ಸ್ಫೋಟ: ನಾಲ್ವರ ಬಂಧನ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2021, 20:39 IST
Last Updated 19 ಆಗಸ್ಟ್ 2021, 20:39 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕನಕಪುರ: ಇಲ್ಲಿನ ಮರಳೇಗವಿ ಮಠದ ಸಮೀಪ ಕಾರು ಸ್ಫೋಟ ಪ್ರಕರಣ ತಿರುವು ಪಡೆದುಕೊಂಡಿದ್ದು, ವಾಹನದ ಒಳಗಿದ್ದ ಜಿಲೆಟಿನ್‌ ಕಡ್ಡಿಗಳಿಂದಲೇ ಸ್ಫೋಟ ಸಂಭವಿಸಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಘಟನೆಯಲ್ಲಿ ಮೃತಪಟ್ಟ ಮಹೇಶ್‌ಗೆ ಜಿಲೆಟಿನ್ ಕಡ್ಡಿಗಳನ್ನು ಮಾರಾಟ ಮಾಡಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಇದೇ 16ರಂದು ಮಧ್ಯಾಹ್ನ 3ರ ಸುಮಾರಿಗೆ ಮಠದ ಬಳಿ ಕಾರು ಸ್ಫೋಟಗೊಂಡಿತ್ತು. ಮಹೇಶ್‌ ಕಾರಿನಲ್ಲಿ ಜಿಲೆಟಿನ್‌ ಕಡ್ಡಿಗಳನ್ನು ಕೊಂಡೊಯ್ಯುತ್ತಿದ್ದರು. ಈ ವೇಳೆ ಅಕಸ್ಮಾತಾಗಿ ಸ್ಫೋಟ ಸಂಭವಿಸಿತು ಎಂಬುದು ತನಿಖೆ ವೇಳೆ ತಿಳಿದುಬಂದಿದೆ. ಎಫ್‌ಎಸ್ಎಲ್ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಇನ್ನಷ್ಟೇ ವರದಿ ಬರಬೇಕಿದೆ.

ಮಹೇಶ್‌ ಗಣಿಗಾರಿಕೆಗೆ ಬೇಕಾದ ಸಲಕರಣೆಗಳನ್ನು ಸಾಗಿಸಲು ಮಾತ್ರ ಅನುಮತಿ ಪಡೆದಿದ್ದರು. ಅವರ ಬಳಿ ಸ್ಫೋಟಕ ಸಾಮಗ್ರಿ ಇರಲಿಲ್ಲ. ಹೀಗಾಗಿ ಕನಕಪುರದಲ್ಲಿ ಪರವಾನಗಿ ಪಡೆದವರಿಂದ ದುಪ್ಪಟ್ಟು ಹಣ ನೀಡಿ ಜಿಲೆಟಿನ್‌ ಕಡ್ಡಿ ಖರೀದಿಸಿ ಕ್ವಾರಿಗೆ ಕೊಂಡೊಯ್ಯುತ್ತಿದ್ದರು ಎಂದು ದೂರಲಾಗಿದೆ.

ADVERTISEMENT

ಮಹೇಶ್‌ಗೆ ದುಪ್ಪಟ್ಟು ಬೆಲೆಗೆ ಜಿಲೆಟಿನ್‌ ಮಾರಾಟ ಮಾಡಿದ ಆರೋಪದ ಮೇಲೆ ಪಡುವಣಗೆರೆ ಎಸ್‌ಎಲ್‌ಎನ್ ಮ್ಯಾಗಜೀನ್‌ ಅಂಗಡಿಯ ಪ್ರಕಾಶ್ ರಾವ್, ಅವರ ಪುತ್ರ ಸುನಿಲ್ ರಾವ್, ಕಾರ್ಮಿಕರಾದ ಹರೀಶ್, ರಾಮಣ್ಣ ಅವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.