
ಕನಕಪುರ: ಕೋಡಿಹಳ್ಳಿ ಹೋಬಳಿ ಕೊಳಗೊಂಡನಹಳ್ಳಿ ಗಿರವಿ ಅಂಗಡಿ ಮಾಲೀಕ ಗ್ರಾಹಕರ ಐದು ಕೆ.ಜಿ ಚಿನ್ನ ಮತ್ತು ₹50 ಲಕ್ಷದೊಂದಿಗೆ ಪರಾರಿಯಾಗಿ ಎರಡು ಕಳೆದರೂ ಪೊಲೀಸರು ಆರೋಪಿಯನ್ನು ಪತ್ತೆ ಮಾಡಿಲ್ಲ ಎಂದು ಆರೋಪಿಸಿ ಗ್ರಾಮಸ್ಥರು ಮಂಗಳವಾರ ಪ್ರತಿಭಟನೆ ನಡೆಸಿದರು.
ಗಿರವಿ ಅಂಗಡಿ ಮಾಲೀಕ ಬಾಬುರಾವ್ ರಾತ್ರೋರಾತ್ರಿ ಜನರ ಚಿನ್ನಾಭರಣ ಮತ್ತು ಲಕ್ಷಾಂತರ ರೂಪಾಯಿ ಹಣದೊಂದಿಗೆ ಕುಟುಂಬ ಸಮೇತ ಪರಾರಿಯಾಗಿದ್ದು ಅಂದು ಪೊಲೀಸರು ದೂರು ಸ್ವೀಕರಿಸಿರಲಿಲ್ಲ. ಆರೋಪಿಯನ್ನು ಪತ್ತೆ ಹಚ್ಚಿ ಒಡವೆ ಹಾಗೂ ಹಣ ವಾಪಸ್ ಕೊಡುವುದಾಗಿ ಸಮಾಧಾನಪಡಿಸಿ ಕಳಿಸಿದ್ದರು. ಎರಡು ವರ್ಷವಾದರೂ ಆರೋಪಿಯನ್ನು ಪೊಲೀಸರು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎಂದು ಜನರು ದೂರಿದರು.
ಹನುಮಾನ್ ಜುವೆಲರ್ಸ್ ಆ್ಯಂಡ್ ಪಾನ್ ಬ್ರೋಕರ್ಸ್, ಮಾತಾಜಿ ಪಾನ್ ಬ್ರೋಕರ್ಸ್ ಆ್ಯಂಡ್ ಜುವೆಲರ್ಸ್ ಹೆಸರಿನ ಗಿರವಿ ಅಂಗಡಿಯಲ್ಲಿ ಕೊಳಗೊಂಡನಹಳ್ಳಿ ಹಾಗೂ ಸುತ್ತಮುತ್ತಲ 15 ಗ್ರಾಮಗಳ 150ಕ್ಕೂ ಹೆಚ್ಚು ಗ್ರಾಹಕರು ಚಿನ್ನಾಭರಣ ಗಿರವಿ ಇಟ್ಟಿದ್ದರು. ಪರಿಚಿತರ ಬಳಿ ಒಟ್ಟು ₹40 ಲಕ್ಷದಿಂದ ₹50 ಲಕ್ಷದವರೆಗೆ ಸಾಲ ಪಡೆದಿದ್ದ ಎಂದು ಪ್ರತಿಭಟನಕಾರರು ದೂರಿದರು.
ಈವರೆಗೂ ಪೊಲೀಸರು ಆರೋಪಿಯನ್ನು ಹುಡುಕಿ, ಒಡವೆಗಳನ್ನು ವಾಪಸ್ ಕೊಡಿಸಿಲ್ಲ. ಪೊಲೀಸರನ್ನು ವಿಚಾರಿಸಿದರೆ ಆರೋಪಿಯ ಹುಡುಕಾಟ ಮಾಡುತ್ತಿದ್ದೇವೆ. ಇನ್ನೂ ಪತ್ತೆಯಾಗಿಲ್ಲ ಎಂದು ಸಬೂಬೂ ಹೇಳಿ ಕಳಿಸುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.