ADVERTISEMENT

ರಾಮನಗರ: ಸರ್ಕಾರಿ ಎಲ್‌ಕೆಜಿ–ಯುಕೆಜಿ ಶಾಲೆಗಳಲ್ಲಿ ಚಿಣ್ಣರ ಕಲರವ

ಜಿಲ್ಲೆಯಲ್ಲಿವೆ 20 ಪೂರ್ವ ಪ್ರಾಥಮಿ ಶಾಲೆಗಳು; ಎಲ್‌ಕೆಜಿ–ಯುಕೆಜಿ ಸೇರಿ ಶಾಲೆಗಳಲ್ಲಿದ್ದಾರೆ 447 ವಿದ್ಯಾರ್ಥಿಗಳು

ಓದೇಶ ಸಕಲೇಶಪುರ
Published 4 ನವೆಂಬರ್ 2025, 4:57 IST
Last Updated 4 ನವೆಂಬರ್ 2025, 4:57 IST
ರಾಮನಗರ ತಾಲ್ಲೂಕಿನ ಜಾಲಮಂಗಲದಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರಂಭಿಸಿರುವ ಪೂರ್ವ ಪ್ರಾಥಮಿಕ ಶಾಲೆಯಲ್ಲಿ (ಎಲ್‌ಕೆಜಿ–ಯುಕೆಜಿ) ಆಟದೊಂದಿಗೆ ಪಾಠ ಕಲಿಕೆಯಲ್ಲಿ ನಿರತ ಚಿಣ್ಣರು
ರಾಮನಗರ ತಾಲ್ಲೂಕಿನ ಜಾಲಮಂಗಲದಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರಂಭಿಸಿರುವ ಪೂರ್ವ ಪ್ರಾಥಮಿಕ ಶಾಲೆಯಲ್ಲಿ (ಎಲ್‌ಕೆಜಿ–ಯುಕೆಜಿ) ಆಟದೊಂದಿಗೆ ಪಾಠ ಕಲಿಕೆಯಲ್ಲಿ ನಿರತ ಚಿಣ್ಣರು   

ರಾಮನಗರ: ಬಡವರ ಮಕ್ಕಳಿಗೂ ಉಚಿತವಾಗಿ ಎಲ್‌ಕೆಜಿ ಮತ್ತು ಯುಕೆಜಿ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಆರಂಭಿಸಿರುವ ಪೂರ್ವ ಪ್ರಾಥಮಿಕ ಶಾಲೆಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆಯ್ದ‌ ಗ್ರಾಮ, ಪಟ್ಟಣ ಹಾಗೂ ನಗರಗಳಲ್ಲಿ ತೆರೆದಿರುವ ಶಾಲೆಗಳಿಗೆ ಚಿಣ್ಣರು ಸಹ ಖುಷಿಯಿಂದ ಬಂದು ಆಟದೊಂದಿಗೆ ಪಾಠ ಕಲಿಯುತ್ತಿದ್ದಾರೆ.

ಮಕ್ಕಳನ್ನು ಶಾಲೆಗೆ ಸೇರಿಸುವುದಕ್ಕೆ 6 ವರ್ಷ ತುಂಬುವುದಕ್ಕೆ ಮುಂಚಿನ ಪೂರ್ವ ಪ್ರಾಥಮಿಕ ಶಿಕ್ಷಣವು ಖಾಸಗಿ ಶಾಲೆಗಳಲ್ಲಿ ಮಾತ್ರ ಸಿಗುತ್ತಿತ್ತು. ತಂದೆ–ತಾಯಂದಿರು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾದ ಶಾಲೆಗಳಿಗೆ ಸಾವಿರದಿಂದ ಲಕ್ಷದವರೆಗೆ ಶುಲ್ಕ ಪಾವತಿಸಿ ಮಕ್ಕಳನ್ನು ಎಲ್‌ಕೆಜಿಗೆ ಕಳಿಸುತ್ತಿದ್ದರು. ಮಕ್ಕಳ ಅಧಿಕೃತ ಶಾಲಾ ಕಲಿಕೆಗೆ ಏಣಿಯಂತಿದ್ದ ಎಲ್‌ಕೆಜಿ–ಯುಕೆಜಿ ಬಡವರಿಗೆ ದುಬಾರಿಯಾಗಿತ್ತು.

ತಾಲ್ಲೂಕಿಗೆ ತಲಾ 5 ಶಾಲೆ: ಹಳ್ಳಿ, ಪಟ್ಟಣ, ನಗರ ಎನ್ನದೆ ಎಲ್ಲಾ ಬಡವರ ಮಕ್ಕಳಿಗೂ ಪೂರ್ವ ಪ್ರಾಥಮಿಕ ಶಿಕ್ಷಣ ಸಿಗಬೇಕೆಂಬ ಉದ್ದೇಶದಿಂದ ಸರ್ಕಾರ 2024ರಿಂದ ಎಲ್‌ಕೆಜಿ–ಯುಕೆಜಿ ಶಾಲೆಗಳನ್ನು ಆರಂಭಿಸಿದೆ. ಅದರಂತೆ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಕನಕಪುರ–ಹಾರೋಹಳ್ಳಿ ಒಂದು ತಾಲ್ಲೂಕು ಎಂದು ಪರಿಗಣಿಸಿ ಪ್ರತಿ ತಾಲ್ಲೂಕಿನಲ್ಲಿ ತಲಾ 5ರಂತೆ 20 ಶಾಲೆಗಳನ್ನು ಆರಂಭಿಸಿದೆ.

ADVERTISEMENT

ಸದ್ಯ ಪ್ರತಿ ಗ್ರಾಮದಲ್ಲಿ ಮಕ್ಕಳಿಗೆ ಅಂಗನವಾಡಿಗಳಿದ್ದರೂ, ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಖಾಸಗಿ ಶಿಕ್ಷಣ ಸಂಸ್ಥೆಗಳು ಹೆಚ್ಚಿನ ಒತ್ತು ನೀಡಿದ್ದವು. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ನಡೆಯುವ ಮಕ್ಕಳು ತರಗತಿಯಲ್ಲಿ ಆಟವಾಡುತ್ತಾ ಪಾಠವನ್ನು ಕಲಿತು ಮನೆಗೆ ಬರುತ್ತಿದ್ದರು. ಹಾಗಾಗಿ, ಸರ್ಕಾರವೂ ಇಂತಹ ಶಾಲೆಗಳನ್ನು ತೆರೆದು ಬಡವರ ಮಕ್ಕಳಿಗೆ ಅನುಕೂಲ ಕಲ್ಪಿಸಿದೆ

447 ಮಕ್ಕಳು ದಾಖಲು: ‘ಎರಡು ವರ್ಷಗಳ (4 ಮತ್ತು 5ನೇ ವರ್ಷ) ಎಲ್‌ಕೆಜಿ ಮತ್ತು ಯುಕೆಜಿಯ ಪೂರ್ವ ಪ್ರಾಥಮಿಕ ಶಾಲೆಗಳನ್ನು ಸರ್ಕಾರಿ ಹಿರಿಯ ಮತ್ತು ಪ್ರಾಥಮಿಕ ಶಾಲೆಗಳಲ್ಲೇ ಪ್ರತ್ಯೇಕ ಕೊಠಡಿಗಳಲ್ಲಿ ಆರಂಭಿಸಲಾಗಿದೆ. ಸದ್ಯ ಜಿಲ್ಲೆಯಾದ್ಯಂತ 447 ಮಕ್ಕಳು ಈ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ’ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಸ್. ಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

‘20 ಶಾಲೆಗಳ ಪೈಕಿ ಎಲ್‌ಕೆಯಲ್ಲಿ 269 ಮತ್ತು ಯುಕೆಜಿಯಲ್ಲಿ 178 ಮಕ್ಕಳು ಕಲಿಯುತ್ತಿದ್ದಾರೆ. ಖಾಸಗಿ ಮಾದರಿಯಲ್ಲೇ ಪೂರ್ವ ಪ್ರಾಥಮಿಕ ಶಾಲೆಗಳನ್ನು ವಿಶೇಷವಾಗಿ ಸಿದ್ಧಪಡಿಸಲಾಗಿದೆ. ತರಗತಿಯಲ್ಲಿ ಮಕ್ಕಳನ್ನು ಸೆಳೆಯುವ ಚಿತ್ರಗಳು, ಬಣ್ಣಗಳು, ಆಟೋಪಕರಣಗಳು, ಕಲಿಕೋಪಕರಣಗಳು, ಡೆಸ್ಕ್‌ಗಳನ್ನು ಅಳವಡಿಸಲಾಗಿದೆ. ಎರಡಡಕ್ಕೂ ಒಬ್ಬರು ಶಿಕ್ಷಕರನ್ನು ನಿಯೋಜಿಸಲಾಗಿದೆ’ ಎಂದು ಹೇಳಿದರು.

ತುಂಬಾ ಅನುಕೂಲ: ‘ನಮ್ಮ ಗ್ರಾಮದ ಕೆಲ ಮಕ್ಕಳು ಖಾಸಗಿ ಶಾಲೆಯಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ಓದುತ್ತಿದ್ದಾರೆ. ನಿತ್ಯ ವಾಹನದಲ್ಲಿ ಹೋಗಿ ಬರುತ್ತಾರೆ. ಅದಕ್ಕಾಗಿ ಅವರ ತಂದೆ–ತಾಯಿ ಸಾವಿರಾರು ರೂಪಾಯಿ ಶುಲ್ಕ ಪಾವತಿಸಿದ್ದಾರೆ. ನಾವು ಬಡವರಾಗಿದ್ದರಿಂದ ನಮ್ಮ ಮಕ್ಕಳನ್ನು ಅಂಗನವಾಡಿಗೆ ಕಳಿಸುತ್ತಿದ್ದೆವು’ ಎಂದು ಬಿಡದಿಯ ಪೋಷಕರೊಬ್ಬರು ತಿಳಿಸಿದರು.

‘ಇದೀಗ ಸರ್ಕಾರಿ ಶಾಲೆಯಲ್ಲೇ ಎಲ್‌ಕೆಜಿ–ಯುಕೆಜಿ ಶುರುವಾಗಿರುವ ವಿಷಯ ತಿಳಿಯಿತು. ಕೂಡಲೇ ನಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿದೆವು. ನಮ್ಮ ಮಕ್ಕಳು ಸಹ ಖುಷಿಯಾಗಿ ಶಾಲೆಗೆ ಹೋಗಿ ಬರುತ್ತಿದ್ದಾರೆ. ಅಂಗನವಾಡಿಗೆ ಹೋಗುತ್ತಿದ್ದಾಗ ಇದ್ದ ನಮ್ಮ ಮಕ್ಕಳ ಕಲಿಕಾ ಮಟ್ಟ ಮತ್ತು ಶಿಸ್ತು ಸುಧಾರಿಸಿದೆ’ ಎಂದು ಹೇಳಿದರು.

3 ಕಡೆ ಶೂನ್ಯ ಪ್ರವೇಶ: ಜಿಲ್ಲೆಯಲ್ಲಿ ತೆರೆದಿರುವ 20 ಶಾಲೆಗಳ ಪೈಕಿ ಕನಕಪುರ ತಾಲ್ಲೂಕಿನ ಮೇಡಮಾರನಹಳ್ಳಿ, ರಾಮನಗರ ತಾಲ್ಲೂಕಿನ ತಿಮ್ಮನಾಯಕನಹಳ್ಳಿ ಹಾಗೂ ದೊಡ್ಡಮಣ್ಣುಗುಡ್ಡೆ ಶಾಲೆ ಸೇರಿದಂತೆ 3 ಶಾಲೆಗಳಲ್ಲಿ ಶೂನ್ಯ ದಾಖಲಾತಿ ಕಂಡುಬಂದಿದೆ. ಇಲ್ಲಿ ಶಾಲೆ ಮಂಜೂರಾಗಿದ್ದರೂ ಯಾವ ಮಕ್ಕಳೂ ದಾಖಲಾಗಿಲ್ಲ ಎನ್ನುತ್ತವೆ ಶಿಕ್ಷಣ ಇಲಾಖೆ ಮೂಲಗಳು.

‘ತಿಮ್ಮನಾಯಕನಹಳ್ಳಿ ಮತ್ತು ದೊಡ್ಡಮಣ್ಣುಗುಡ್ಡೆ ಗ್ರಾಮಗಳಲ್ಲಿರುವುದು ಕಿರಿಯ ಪ್ರಾಥಮಿ ಶಾಲೆಗಳಾಗಿವೆ. ಗ್ರಾಮಗಳಲ್ಲಿ ಕಡಿಮೆ ಮಕ್ಕಳಿರುವುದರಿಂದ ಅಲ್ಲಿನ ಶಾಲೆಗಳಿಗೂ ಕಡಿಮೆ ಮಕ್ಕಳು ಪ್ರವೇಶ ಪಡೆಯುತ್ತಿದ್ದಾರೆ. ಹಾಗಾಗಿ, ಎರಡೂ ಗ್ರಾಮಗಳಿಗೆ ಮಂಜೂರಾಗಿರುವ ಪೂರ್ವ ಪ್ರಾಥಮಿಕ ಶಾಲೆಗಳ ಪೈಕಿ, ತಿಮ್ಮನಾಯಕನಹಳ್ಳಿ ಶಾಲೆಯನ್ನು ದೊಡ್ಡಗಂಗವಾಡಿಗೆ ಸೇರಿಸಲಾಗಿದೆ’ ಎಂದು ರಾಮನಗರ ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಸೋಮಲಿಂಗಯ್ಯ ತಿಳಿಸಿದರು.

‘ದೊಡ್ಡಮಣ್ಣುಗುಡ್ಡೆ ಗ್ರಾಮಕ್ಕೆ ಮಂಜೂರಾಗಿರುವ ಶಾಲೆಯನ್ನು ಜಾಲಮಂಗಲದಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಗೆ ಸೇರಿಸುತ್ತಿದ್ದೇವೆ. ಹೊಸದಾಗಿ ಶಾಲೆಗಳು ಆರಂಭವಾಗಿರುವುದರಿಂದ ಮಕ್ಕಳ ಪ್ರವೇಶ ಸಂಖ್ಯೆ ಸ್ವಲ್ಪ ಕಡಿಮೆ ಇದೆ. ಮುಂದೆ ನಿಧಾನವಾಗಿ ಈ ಸಂಖ್ಯೆ ಏರಿಕೆಯಾಗಲಿದೆ’ ಎಂದು ಅವರು ಹೇಳಿದರು.

ರಾಮನಗರ ತಾಲ್ಲೂಕಿನ ಜಾಲಮಂಗಲದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿರುವ ಪೂರ್ವ ಪ್ರಾಥಮಿಕ (ಎಲ್‌ಕೆಜಿ–ಯುಕೆಜಿ) ಶಾಲಾ ತರಗತಿ ಕೊಠಡಿ
ಜಿಲ್ಲೆಯಲ್ಲಿ ತೆರೆದಿರುವ ಪೂರ್ವ ಪ್ರಾಥಮಿಕ ಶಾಲೆಗಳಿಗೆ ಪೋಷಕರಿಂದ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿಣ್ಣರು ಸಹ ಸಂಭ್ರಮದಿಂದ ಶಾಲೆಗೆ ಬಂದು ಆಟದ ಜೊತೆಗೆ ಪಾಠವನ್ನು ಖುಷಿಯಿಂದ ಕಲಿಯುತ್ತಿದ್ದಾರೆ
– ಎಸ್. ಸ್ವಾಮಿ ಉಪ ನಿರ್ದೇಶಕ ಶಾಲಾ ಶಿಕ್ಷಣ ಇಲಾಖೆ ಬೆಂಗಳೂರು ದಕ್ಷಿಣ ಜಿಲ್ಲೆ

ಶಾಲೆಗಳು ಎಲ್ಲೆಲ್ಲಿವೆ?

* ರಾಮನಗರ: ಬಿಡದಿ (ಜಿಎಚ್‌ಪಿಎಸ್) ದೊಡ್ಡಗಂಗವಾಡಿ (ಜಿಎಚ್‌ಪಿಎಸ್) ಮಾದಾಪುರ (ಜಿಎಚ್‌ಪಿಎಸ್) ತಿಮ್ಮನಾಯಕನಹಳ್ಳಿ (ಜಿಎಲ್‌ಪಿಎಸ್) ದೊಡ್ಡಮಣ್ಣುಗುಡ್ಡೆದೊಡ್ಡಿ (ಜಿಎಲ್‌ಪಿಎಸ್)

* ಚನ್ನಪಟ್ಟಣ: ಅಕ್ಕೂರು (ಜಿಎಂ‌ಪಿಎಸ್) ನಾಗಾವರ (ಜಿಎಚ್‌ಪಿಎಸ್) ಮಾಕಳಿ (ಜಿಎಚ್‌ಪಿಎಸ್) ಮಂಗಳವಾರಪೇಟೆ (ಜಿಎಂಪಿಎಸ್) ಲಾಳಘಟ್ಟ (ಜಿಎಚ್‌ಪಿಎಸ್)

* ಮಾಗಡಿ: ಸಂಕೀಘಟ್ಟ ಜಿ.ಎಂ. ಹಳ್ಳಿ ತಿರುಮಲೆ ಸೋಲೂರು ಮೋಟಗಾನಹಳ್ಳಿ (ಎಲ್ಲವೂ ಜಿಎಚ್‌ಪಿಎಸ್)

* ಕನಕಪುರ: ಮೇಡಮಾರನಹಳ್ಳಿ (ಜಿಎಚ್‌ಪಿಎಸ್) ಹೂಕುಂದ (ಜಿಎಚ್‌ಪಿಎಸ್) ಸಾತನೂರು (ಜಿಎಂಪಿಎಸ್) ಕನಕಪುರ (ಜಿಕೆಬಿಎಂಎಸ್) ದೊಡ್ಡಮರಳವಾಡಿ (ಜಿಎಚ್‌ಪಿಎಸ್)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.