ರಾಮನಗರ: ಗ್ರಾಮಸಭೆಗಳು ಗ್ರಾಮಗಳ ಅಭಿವೃಧ್ಧಿಗೆ ಸೂಕ್ತ ವೇದಿಕೆಯಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಮಾರ್ಗದರ್ಶಿ ಅಧಿಕಾರಿ ವೈ.ಬಿ. ಪ್ರಸನ್ನಕುಮಾರ್ ಹೇಳಿದರು.
ಇಲ್ಲಿನ ವಿಭೂತಿಕೆರೆ ಗ್ರಾಮ ಪಂಚಾಯಿತಿ ಆವರಣದಲ್ಲಿ 2019-20 ನೇ ಸಾಲಿನ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಎರಡನೇ ಹಂತದ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮಸಭೆಯಲ್ಲಿ ಅವರು ಮಾತನಾಡಿದರು.
ಗ್ರಾಮಗಳ ಸರ್ವತೋಮುಖ ಅಭಿವೃಧ್ಧಿಗೆ ವಿಶೇಷ ಗ್ರಾಮಸಭೆಗಳು ಉಪಯುಕ್ತವಾಗಿವೆ. ಕಂದಾಯ, ಕೃಷಿ, ತೋಟಗಾರಿಕೆ, ಶಿಕ್ಷಣ, ಆರೋಗ್ಯ, ಪಶು ಸಂಗೋಪನೆ, ಸಮಾಜ ಕಲ್ಯಾಣ, ರೇಷ್ಮೆ ಮತ್ತಿತರ ಇಲಾಖೆಗಳ ಅಧಿಕಾರಿಗಳು ಗ್ರಾಮಸಭೆಗಳಲ್ಲಿ ಹಾಜರಿರುವುದರಿಂದ ಇಲಾಖೆಗಳ ಸಂಪೂರ್ಣ ಮಾಹಿತಿ ಸ್ಥಳದಲ್ಲೇ ಸಿಗುತ್ತದೆ. ಇದರಿಂದ ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸಿಕೊಳ್ಳಬಹುದು ಎಂದರು.
ಸಾಮಾಜಿಕ ಲೆಕ್ಕ ಪರಿಶೋಧನೆಯ ತಾಲ್ಲೂಕು ಸಂಚಾಲಕಿ ಶಿವಮ್ಮ ಮಾತನಾಡಿ, ನರೇಗಾ ಯೋಜನೆಯಲ್ಲಿ ಗ್ರಾಮ ಪಂಚಾಯಿತಿಯಲ್ಲಿ ದನದ ಕೊಟ್ಟಿಗೆ 17, ರೇಷ್ಮೆ ಇಲಾಖೆ ಕೆಲಸಗಳು 33, ಕೃಷಿ ಇಲಾಖೆ 12, ಅರಣ್ಯ 11, ಚೆಕ್ಡ್ಯಾಂ 12, ಕೆರೆ ಅಭಿವೃದ್ಧಿ ಹೂಳೆತ್ತುವುದು 2, ತಡೆಗೋಡೆ 4 ಕೆಲಸಗಳನ್ನು ನಿರ್ವಹಿಸಲಾಗಿದೆ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್. ಶಿವಾನಂದ, ಉಪಾಧ್ಯಕ್ಷೆ ಸುಂದ್ರಮ್ಮ ರಾಜಣ್ಣ, ಪಿಡಿಒ ಬೆಟ್ಟಸ್ವಾಮಿ ಗೌಡ, ಗ್ರಾಮ ಪಂಚಾಯಿತಿ ಸದಸ್ಯರಾದ ವಿ.ಎಂ. ಶಿವಲಿಂಗಪ್ರಸಾದ್, ಕೃಷ್ಣಮೂರ್ತಿ, ನರಸಿಂಹಯ್ಯ, ಚಂದ್ರಮ್ಮ, ಶಿವಮ್ಮ, ರೇಷ್ಮೆ ಅಧಿಕಾರಿ ತಿಮ್ಮೇಗೌಡ, ಕೃಷಿ ಅಧಿಕಾರಿ ಪರುಶುರಾಮ್, ಕಾರ್ಯದರ್ಶಿ ಪದ್ಮಯ್ಯ, ಶಿಕ್ಷಕ ಸೋಮಶೇಖರ್, ಮಂಜುನಾಥ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.