ADVERTISEMENT

ಡಿ.ಕೆ.ಸುರೇಶ್ ಟೀಕಿಸಿದರೆ ಪರಿಣಾಮ ನೆಟ್ಟಗಿರಲ್ಲ: ಎಚ್.ಎನ್.ಅಶೋಕ್

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2023, 13:41 IST
Last Updated 22 ಆಗಸ್ಟ್ 2023, 13:41 IST
ಮಾಗಡಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್‌ ಮುಖಂಡ ಎಚ್‌.ಎನ್‌.ಅಶೋಕ್‌ ಮಾತನಾಡಿದರು. ಬಮೂಲ್‌ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ನಾಗರಾಜು, ರಾಮಕೃಷ್ಣಯ್ಯ, ಗಾಣಕಲ್‌ ನಟರಾಜ್‌ ಇದ್ದರು
ಮಾಗಡಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್‌ ಮುಖಂಡ ಎಚ್‌.ಎನ್‌.ಅಶೋಕ್‌ ಮಾತನಾಡಿದರು. ಬಮೂಲ್‌ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ನಾಗರಾಜು, ರಾಮಕೃಷ್ಣಯ್ಯ, ಗಾಣಕಲ್‌ ನಟರಾಜ್‌ ಇದ್ದರು   

ಮಾಗಡಿ: ‘ದೇಶದಲ್ಲಿಯೇ ಉತ್ತಮ ಸಂಸದ ಎಂದು ಹೆಸರು ಪಡೆದಿರುವ ಡಿ.ಕೆ.ಸುರೇಶ್ ಬಗ್ಗೆ ಮಾತನಾಡುವಾಗ ನಾಲಿಗೆ ಬಿಗಿ ಹಿಡಿದಿರಬೇಕು. ಇಲ್ಲವಾದರೆ ಕಾಂಗ್ರೆಸ್‌ನಿಂದ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಮುಖಂಡ ಎಚ್.ಎನ್.ಅಶೋಕ್ ಹೇಳಿದರು.

ಪಟ್ಟಣದ ಬಿಡಿಸಿಸಿ ಬ್ಯಾಂಕ್ ಕಚೇರಿ ಆವರಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಾಜಿ ಶಾಸಕ ಎ.ಮಂಜುನಾಥ್ ವಿರುದ್ಧ ವಾಗ್ದಾಳಿ ನಡೆಸಿದರು.

‘ಅಡ್ರೆಸ್ ಇಲ್ಲದೆ ಬಂದ ಕೇರಾಫ್‌ ಎ.ಮಂಜುನಾಥ್‌ಗೆ ವಿಳಾಸ ಒದಗಿಸಿದ್ದು ಸಂಸದರು. ಡಿ.ಕೆ.ಸುರೇಶ್‌ ಕೊಡುಗೆ ಏನು ಎಂಬುದು ಜನರಿಗೆ ಗೊತ್ತಿದೆ. ಮಾಜಿ ಶಾಸಕರ ಅಪ್ರಬುದ್ಧ ಹೇಳಿಕೆಯನ್ನು ಖಂಡಿಸಿದ್ದೇವೆ. ಶ್ರೀರಂಗ ಏತ ನೀರಾವರಿ ಯೋಜನೆ ಮಂಜೂರಾತಿಯಲ್ಲಿ ಮಾಜಿ ಸಚಿವ ಎಚ್.ಎಂ.ರೇವಣ್ಣ ಹಾಗೂ ಸಂಸದರ ಶ್ರಮ ಏನು ಎಂಬುದು ಜನರಿಗೆ ತಿಳಿದಿದೆ’ ಎಂದು ಮಂಜುನಾಥ್‌ ಹೇಳಿಕೆಗೆ ತಿರುಗೇಟು ನೀಡಿದರು.

ADVERTISEMENT

‘ಎ.ಮಂಜುನಾಥ್ ಯಾರು? ತಮಿಳುನಾಡಿನವ. ಸಂಸದರು ಇವ ನಮ್ಮವ ಎಂದು ಗುರುತಿಸಿದರು. ಸತ್ತೇಗಾಲ ಯೋಜನೆ ಬಗ್ಗೆ ಮಾಜಿ ಶಾಸಕರಿಗೆ ಯಾವುದೇ ವಿಷಯಗಳಲ್ಲೂ ಸ್ಪಷ್ಟವಾದ ಅರಿವಿಲ್ಲ’ ಎಂದು ಅಶೋಕ್‌ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

‘ಡಿ.ಕೆ.ಸುರೇಶ್ ನೈಸ್ ರಸ್ತೆ ಯೋಜನೆಯಲ್ಲಿ ಶಾಮೀಲಾಗಿದ್ದಾರೆ ಎಂದು ಜನರ ತಲೆಗೆ ಹುಳ ಬಿಡುವ ಕೆಲಸ ನಿಲ್ಲಿಸು. ಎಚ್.ಡಿ.ಕುಮಾರಸ್ವಾಮಿ ನನ್ನ ಬಳಿ ಪೆನ್‌ಡ್ರೈವ್‌ ಇದೆ ಅಂತಾ ಸುಳ್ಳು ಹೇಳಿದಂತೆ; ಮಾಜಿ ಶಾಸಕರು ಸಂಸದರ ಬಗ್ಗೆ ನನ್ನ ಬಳಿ ಮಹತ್ವದ ದಾಖಲೆ ಇದೆ ಎಂದು ಹೇಳುತ್ತಿದ್ದಾರೆ. ಚರ್ಚೆಗೆ ಬನ್ನಿ ಅಂತೀದ್ದಿಯಾ? ನಿನ್ನ ಬಳಿ ಏನಿದೆ ಅಂತಾ ಚರ್ಚೆಗೆ ಬರೋದು? ಜನರೇ ನಿನಗೆ ದಾರಿ ತೋರಿಸಿದ್ದಾರೆ. ಅಸಂಬದ್ದ ಮಾತುಗಳಿಗೆ ಕಡಿವಾಣವಿರಲಿ’ ಎಂದು ಕಿಡಿಕಾರಿದರು.

‘ಸಂಕಷ್ಟದಲ್ಲಿ ಸಿಲುಕಿದಾಗೆಲ್ಲಾ ನಿನ್ನ ರಕ್ಷಿಸಿದ್ದು ನಮ್ಮ ಸಂಸದರು. ಎಚ್‌.ಡಿ.ಕುಮಾರಸ್ವಾಮಿ ಮೆಚ್ಚಿಸಲು ಬಾಯಿಗೆ ಬಂದಂತೆ ಮಾತನಾಡುತ್ತಿದ್ದೀರಾ? ಸಂಸದ ಡಿ.ಕೆ.ಸುರೇಶ್ ಅವರನ್ನು ಟೀಕಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ’ ಎಂದು ಅಶೋಕ್ ಎಚ್ಚರಿಕೆ ನೀಡಿದರು.

ಬಮೂಲ್ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ಕಾಂಗ್ರೆಸ್ ಮುಖಂಡರಾದ ಗಾಣಕಲ್ ನಟರಾಜ್, ನಾಗರಾಜ, ರಾಮಕೃಷ್ಣ, ಬಿಡದಿ ಹೇಮಂತ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.