ಮಾಗಡಿ: ‘ಸರ್ವ ಜನಾಂಗಗಳ ಪ್ರಗತಿಗೆ ಅರ್ಪಣೆಯಿಂದ ದುಡಿದವರಲ್ಲಿ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕನ್ನಡ ನಾಡು ಕಂಡ ಅಪರೂಪದ ಜನಸೇವಕರು’ ಎಂದು ತಾಲ್ಲೂಕು ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷ ಶೈಲಜಾ ವೆಂಕಟೇಶ್ ತಿಳಿಸಿದರು.
ಜೆಡಿಎಸ್ ಮಹಿಳಾ ಘಟಕದ ವತಿಯಿಂದ ಸೋಮವಾರ ರಾಜೀವ ಗಾಂಧಿ ಕೊಳಗೇರಿಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರ 61ನೇ ಜನ್ಮದಿನದ ಅಂಗವಾಗಿ ಸಿಹಿ ವಿತರಿಸಿ ಅವರು ಮಾತನಾಡಿದರು.
ನೀರಾವರಿ ಅಭಿವೃದ್ಧಿ, ರೈತರ ಸಾಲಮನ್ನಾ, ಪರಿಶಿಷ್ಟ ಜಾತಿ ಮತ್ತು ಪಂಗಡದ ಹಾಗೂ ಅಲ್ಪಸಂಖ್ಯಾತರ ಅಭಿವೃದ್ದಿಗೆ ವಿಶೇಷ ಕೊಡುಗೆ ನೀಡಿದ್ದಾರೆ. ಕೋಟೆ ಮತ್ತು ಕೆರೆಕಟ್ಟೆಗಳ ಜೀರ್ಣೋದ್ಧಾರಕ್ಕೆ ಮೊದಲ ಆದ್ಯತೆ ನೀಡಿದ್ದರು. ಶಾಸಕ ಎ.ಮಂಜುನಾಥ ಅವರ ಮೂಲಕ ತಾಲ್ಲೂಕಿನ ಎಲ್ಲ ಸಂಪರ್ಕ ರಸ್ತೆ, ಯೋಜನಾ ಪ್ರಾಧಿಕಾರ, ದೇಗುಲಗಳ ಜೀರ್ಣೋದ್ದಾರ ಮತ್ತು ಡಾ.ಶಿವಕುಮಾರ ಸ್ವಾಮೀಜಿ ಮತ್ತು ಡಾ.ಬಾಲಗಂಗಾಧರನಾಥ ಸ್ವಾಮೀಜಿ ಅವರ ಜನ್ಮಸ್ಥಳಗಳನ್ನು ಅಭಿವೃದ್ದಿ ಪಡಿಸಲು ಅಧಿಕ ಅನುದಾನ ನೀಡಿದ್ದ ಕುಮಾರಸ್ವಾಮಿ ಅಜಾತಶತ್ರುವಾಗಿದ್ದಾರೆ ಎಂದು ಹೇಳಿದರು.
ದೇವರು ಅವರಿಗೆ ಆರೋಗ್ಯಭಾಗ್ಯ ನೀಡಲಿ ಎಂದು ನಾವೆಲ್ಲರೂ ಪ್ರಾರ್ಥಿಸಿ, ಸರಳವಾಗಿ ಅವರ ಜನ್ಮದಿನ ಆಚರಿಸುತ್ತಿದ್ದೇವೆ ಎಂದರು.
ಪುರಸಭೆ ಸದಸ್ಯೆ ಹೇಮಲತಾ, ಜೆಡಿಎಸ್ ಮುಖಂಡರಾದ ಧನಲಕ್ಷ್ಮಿ, ವಿಮಲ, ಆನಂದ್, ಕುಮಾರ್, ತಾಲ್ಲೂಕು ರೈತ ಸಂಘದ ಕಾರ್ಯದರ್ಶಿ ಮಂಜುನಾಥ್, ರವಿಕುಮಾರ್ ವಿದ್ಯಾರ್ಥಿ ಜನತಾ ದಳದ ಅಧ್ಯಕ್ಷ ಗಿರಿಧರ್, ಎಚ್.ಡಿ. ಕುಮಾರಸ್ವಾಮಿ ಅವರ ಆಡಳಿತದ ಅವಧಿಯಲ್ಲಿ ಕೈಗೊಂಡಿದ್ದ ಅಭಿವೃದ್ಧಿಗಳ ಬಗ್ಗೆ ಮಾತನಾಡಿದರು. ಕೊಳಗೇರಿ ನಿವಾಸಿಗಳು, ಮಕ್ಕಳು, ಮಹಿಳೆಯರಿಗೆ ಸಿಹಿ ವಿತರಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.