ಬಿಡದಿ: ಹೋಬಳಿಯ ಕೇತಗಾನಹಳ್ಳಿಯಲ್ಲಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ತೋಟದ ಮನೆಗೆ ಹೊಸ ಅತಿಥಿಗಳ ಆಗಮನವಾಗಿದೆ.
ಶುಕ್ರವಾರ ಬಸವ ಜಯಂತಿಯಂದು ಕಪಿಲ, ಸ್ವರ್ಣ ಕಪಿಲ, ಗಿರ್ ತಳಿಯ ನಾಲ್ಕು ಗೋವುಗಳನ್ನು ಎಚ್ಡಿಕೆ ಪೂಜೆ ಸಲ್ಲಿಸುವ ಮೂಲಕ ಮನೆಗೆ ಬರಮಾಡಿಕೊಂಡರು. ಶಾಸಕಿ ಅನಿತಾ, ಪುತ್ರ ನಿಖಿಲ್ ಹಾಗೂ ಸೊಸೆ ರೇವತಿ ಇದ್ದರು.
ತೋಟಕ್ಕೆ ಗೋವುಗಳನ್ನು ಕುಮಾರಸ್ವಾಮಿ ತರಿಸಿದ್ದು, ಅವುಗಳ ಪೋಷಣೆ ಮಾಡುತ್ತಾ, ವ್ಯವಸಾಯಕ್ಕೆ ಒತ್ತು ಕೊಟ್ಟು ಸಮಯ ಕಳೆಯುತ್ತಿದ್ದಾರೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಕುಟುಂಬ ಸಮೇತರಾಗಿ ಬಂದು ತೋಟದ ಮನೆಯಲ್ಲಿ ವಾಸ್ತವ್ಯ ಹೂಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಕುಮಾರಸ್ವಾಮಿ, 'ರಾಜಕೀಯ ಮತ್ತು ಕೃಷಿ ದೃಷ್ಟಿಯಿಂದ ರಾಮನಗರ ನನ್ನ ಕರ್ಮಭೂಮಿ. ಕೇತಗಾನಹಳ್ಳಿಯ ನನ್ನ 'ಕೃಷಿ ಭೂಮಿ'ಗೆ ಬಸವಜಯಂತಿಯ ಈ ಶುಭದಿನದಂದು ಕಪಿಲ, ಸ್ವರ್ಣಕಪಿಲ, ಗಿರ್ ತಳಿಯ ನಾಲ್ಕು ಗೋವುಗಳನ್ನು ಪ್ರೀತಿಪೂರ್ವಕವಾಗಿ ಬರಮಾಡಿಕೊಳ್ಳಲಾಯಿತು. ಹಸುಗಳನ್ನು ನನ್ನ ಕುಟುಂಬ ಭಕ್ತಿಪೂರ್ವಕವಾಗಿ ಪೂಜಿಸಿದ ಸಂಭ್ರಮದ ಕ್ಷಣಗಳಿವು,' ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.