ADVERTISEMENT

ಹೈಕೋರ್ಟ್ ರಿಲೀಫ್ ಕೊಟ್ಟಿಲ್ಲ, ಇವರೇ ತೆಗೆದುಕೊಂಡಿದ್ದಾರೆ: ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2023, 15:30 IST
Last Updated 30 ನವೆಂಬರ್ 2023, 15:30 IST
Relief from the party to the victims: HD Kumaraswamy
Relief from the party to the victims: HD Kumaraswamy   

ಚನ್ನಪಟ್ಟಣ: ‘ಹೈಕೋರ್ಟ್ ಅವರಿಗೆ ರಿಲೀಫ್ ಕೊಟ್ಟಿಲ್ಲ. ಅವರೇ ತೆಗೆದುಕೊಂಡಿದ್ದಾರೆ. ಇನ್ನೂ ಸ್ವಲ್ಪ ದಿನ ಇದನ್ನು ಮುಂದಕ್ಕೆ ಎಳೆಯಬೇಕಲ್ಲ’ ಎಂದು ಜೆಡಿಎಸ್ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಕ್ರಮ ಆಸ್ತಿ ಪ್ರಕರಣ ಕುರಿತು ವ್ಯಂಗ್ಯವಾಡಿದರು.

ಪಟ್ಟಣದಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಬಹುಶಃ ಗ್ಯಾರಂಟಿ ಕಾರ್ಯಕ್ರಮದ ಮೂಲಕವೇ ದೇಶದಲ್ಲಿ ಅಧಿಕಾರಕ್ಕೆ ಬರುತ್ತೇವೆ. ಆಗ, ಎಲ್ಲಾ ಪ್ರಕರಣಗಳನ್ನು ಮುಚ್ಚಿ ಹಾಕಬಹುದು ಎಂದು ಐದಾರು ತಿಂಗಳು ಮುಂದೂಡುತ್ತಿದ್ದಾರೆ. ಇದೆಲ್ಲಾ ತಂತ್ರಗಾರಿಕೆ ಅಷ್ಟೇ. ಮುಂದೆ ಏನೇನಾಗುತ್ತದೊ ನೋಡೊಣ’ ಎಂದರು.

‘ನಾನು ವಕೀಲನಾಗಿರುವುದಕ್ಕೆ ಪ್ರಕರಣ ವಾಪಸ್ ತೆಗೆದುಕೊಂಡಿದ್ದು’ ಎಂಬ ಸಿ.ಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಅವರು ದೊಡ್ಡ ವಕೀಲರು ಅಂತ ನನಗೆ ಗೊತ್ತುಗೆ. ಇವರೊಬ್ಬರೇ ಕಾನೂನು ತಿಳಿದುಕೊಂಡಿದ್ದಾರೆ ತಾನೇ. ಅದಕ್ಕೆ ಅರ್ಕಾವತಿ ಡಿನೋಟಿಫಿಕೇಷನ್ ತೆಗೆದು ರಿಡೂ ಮಾಡಿದ್ರಿ. ಕೆಂಪಣ್ಣನ ಆಯೋಗ ಮಾಡಿ ಉಳಿದುಕೊಂಡ್ರಲ್ಲ. ಆ ರೀತಿಯ ವಕೀಲರು ಇವರು’ ಎಂದು ವಾಗ್ದಾಳಿ ನಡೆಸಿದರು.

ADVERTISEMENT

‘ಜನಸಾಮಾನ್ಯರಿಗೆ ಒಂದು ನ್ಯಾಯ, ಇವರಿಗೊಂದು ನ್ಯಾಯ. ಅಂತಹ ವಕೀಲಿಕೆಯಲ್ಲಿ ಇವರು ಬುದ್ದಿವಂತರಿದ್ದಾರೆ. ಲೋಕಾಯುಕ್ತವನ್ನು ನಿಷ್ಕ್ರಿಯಗೊಳಿಸಿ ಎಸಿಬಿ ರಚನೆ ಮಾಡಿ, ಇವರ ಮೇಲೆ ಬಂದ ‍ಪ್ರಕರಣ ಗಳನ್ನು ಮುಚ್ಚಿ ಹಾಕಿಕೊಂಡರು. ನಾನು ಮುಖ್ಯಮಂತ್ರಿಯಾಗಿದ್ದಾಗ ಕಾನೂನುಬಾಹಿರ ಚಟುವಟಿಕೆ ವಿರುದ್ದ ಹೋರಾಟ ಮಾಡಿದ್ದೆ. ನನ್ನ ಮೇಲೆ ಇವರ ಸರ್ಕಾರದ 15 ಪ್ರಕರಣ ಇತ್ತು. ಆಗ, ನಾನೂ ಇವರಂತೆ ನಡೆದುಕೊಂಡೆನಾ?’ ಎಂದು ಪ್ರಶ್ನಿಸಿದರು.

‘ನಾನು ಎರಡನೇ ಬಾರಿ ಮುಖ್ಯಮಂತ್ರಿಯಾದಾಗಲೂ ಪ್ರಕರಣ ಮುಚ್ಚಿ ಹಾಕಿಕೊಳ್ಳುವ ಕೆಲಸ ಮಾಡಲಿಲ್ಲ. ಮೆರಿಟ್ ಇದ್ರೆ ಮಾಡಿಕೊಳ್ಳಲಿ ಅಂತ ಬಿಟ್ಟಿದ್ದೀನಿ. ಅವರಿಗೂ, ನಮಗೂ ಇರುವ ವ್ಯತ್ಯಾಸ ಅಷ್ಟೇ’ ಎಂದರು.

ಮರುಕಳಿಸಬಾರದು: ಚಿಕಿತ್ಸೆ ಸಿಗದೆ ನಿಮ್ಹಾನ್ಸ್‌ನಲ್ಲಿ ಮಗ ಮೃತಪಟ್ಟಿರುವುದು ಬೇಸರದ ಸಂಗತಿ. ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಜಾಸ್ತಿ ಇದ್ದು, ಒತ್ತಡವೂ ಹೆಚ್ಚಾಗಿದೆ. ಕೇಂದ್ರ ಸರ್ಕಾರಕ್ಕೆ ಒಳಪಡುವ ಇಲ್ಲಿ ಮೂಲಸೌಕರ್ಯದ ಕೊರತೆ ಇದೆ. ಸರ್ಕಾರಗಳು ಅಗತ್ಯಕ್ಕೆ ತಕ್ಕಂತೆ ಕ್ರಮ ಕೈಗೊಳ್ಳದಿದ್ದಾಗ ಒತ್ತಡ ಜಾಸ್ತಿ ಆಗುತ್ತದೆ. ಇಂತಹದ್ದನ್ನು ಸರಿಪಡಿಸಿ, ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.