ರಾಮನಗರ: ಜಿಂದಾಲ್ ಕಂಪನಿಯಿಂದ 20 ಕೋಟಿ ರೂಪಾಯಿ ಮೊತ್ತದ ಚೆಕ್ ಪಡೆದು, ಜಮೀನಿನ ಲೀಸ್ ಕಮ್ ಸೇಲ್ ಕರಾರು ಪತ್ರಕ್ಕೆ ಸಹಿ ಹಾಕಿದ್ದು ಯಾರು ಎಂಬುದನ್ನು ಯಡಿಯೂರಪ್ಪ ಉತ್ತರಿಸಲಿ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.
ಚನ್ನಪಟ್ಟಣ ತಾಲ್ಲೂಕಿನಇಗ್ಗಲೂರು ಬ್ಯಾರೇಜ್ ಸಮೀಪ ಸೋಮವಾರ ಪತ್ರಕರ್ತರ ಜೊತೆ ಅವರು ಮಾತನಾಡಿದರು.
ಜಿಂದಾಲ್ ಗೆ ಭೂಮಿ ನೀಡುವುದು ಸೇರಿದಂತೆ ಯಾವುದೇ ವಿಷಯದ ಕುರಿತು ಮುಕ್ತ ಚರ್ಚೆಗೆ ನಾವು ಸಿದ್ದರಿದ್ದೇವೆ. ಆದರೆ, ಬಿಜೆಪಿ ಪ್ರತಿಭಟನೆ ಹೆಸರಿನಲ್ಲಿ ವ್ಯರ್ಥ ಕಾಲಹರಣ ಮಾಡುತ್ತಿದೆ ಎಂದು ದೂರಿದರು.
ಯಡಿಯೂರಪ್ಪ ಜಿಂದಾಲ್ ನಿಂದ ಇಪ್ಪತ್ತು ಕೋಟಿ ಹಣದ ಚೆಕ್ ಪಡೆದಿದ್ದನ್ನು ಈ ಹಿಂದೆ ನಾನೇ ದಾಖಲೆ ಬಿಡುಗಡೆ ಮಾಡಿದ್ದೆ ಎಂದು ಈ ವೇಳೆ ನೆನಪು ಮಾಡಿದರು.
ಜಿಂದಾಲ್ ಗೆ ಸಂಬಂಧಿಸಿದಂತೆ ಸ್ಥಳೀಯ ಶಾಸಕರಿಗೆ ಸರಿಯಾದ ಮಾಹಿತಿ ಇಲ್ಲ. ಹೀಗಾಗಿ ಅವರು ಪ್ರತಿಭಟನೆಯ ಮಾತುಗಳನ್ನಾಡಿದ್ದಾರೆ. ಅದು ಸೇರಿದಂತೆ ಐಎಂಎ ಪ್ರಕರಣ , ಬರ ನಿರ್ವಹಣೆ , ಸಾಲ ಮನ್ನ ಮೊದಲಾದ ವಿಷಯಗಳ ಕುರಿತು ವಿಧಾನಸಭೆ ಅಧಿವೇಶನದಲ್ಲಿ ಚರ್ಚಿಸಲು ಸಿದ್ಧನಿದ್ದೇನೆ. ಬಿಜೆಪಿಯವರು ಬರಲಿ ಎಂದು ಆಹ್ವಾನ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.