ರಾಮನಗರ/ಕನಕಪುರ: ಹೃದಯಾಘಾತ ಪ್ರಕರಣಗಳು ಇತ್ತೀಚೆಗೆ ಹೆಚ್ಚು ವರದಿಯಾಗುತ್ತಿದ್ದು, ಜಿಲ್ಲೆಯಲ್ಲಿ ಒಂದು ವಾರದ ಅಂತರದಲ್ಲಿ ಕೃಷಿ ಕಾರ್ಮಿಕ ಮತ್ತು ಛಾಯಾಗ್ರಾಹಕರೊಬ್ಬರು ಮೃತಪಟ್ಟಿದ್ದಾರೆ.
ಕೃಷಿ ಕಾರ್ಮಿಕ: ಕನಕಪುರ ತಾಲ್ಲೂಕಿನ ಕೂತಗಾನಹಳ್ಳಿಯ ಇರುಳಿಗರ ಕಾಲೊನಿಯ ಧರ್ಮಯ್ಯ (38) ಅವರು ಗುರುವಾರ ಹೃದಯಾಘಾತದಿಂದಾಗಿ ಮೃತಪಟ್ಟಿದ್ದಾರೆ. ಕೃಷಿ ಕೂಲಿ ಕಾರ್ಮಿಕರಾದ ಅವರಿಗೆ ಪತ್ನಿ, ಪುತ್ರಿ ಹಾಗೂ ಇಬ್ಬರು ಪುತ್ರಿಯರಿದ್ದಾರೆ.
ಧರ್ಮಯ್ಯ ಅವರಿಗೆ ಮಧ್ಯರಾತ್ರಿ ಎದೆನೋವು ಕಾಣಿಸಿಕೊಂಡಿತ್ತು. ಕುಟುಂಬದವರು ಸ್ಥಳೀಯ ಆಸ್ಪತ್ರೆಗೆ ತೋರಿಸಿ, ನಂತರ ಹಾರೋಹಳ್ಳಿಯಲ್ಲಿರುವ ದಯಾನಂದ ಸಾಗರ್ ಆಸ್ಪತ್ರೆಗೆ ಕರೆತಂದಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ನಸುಕಿನಲ್ಲಿ 3 ಗಂಟೆ ಸುಮಾರಿಗೆ ಕೊನೆಯುಸಿರೆಳೆದರು ಎಂದು ಮೂಲಗಳು ತಿಳಿಸಿವೆ.
ಛಾಯಾಗ್ರಾಹಕ ಸಾವು: ರಾಮನಗರದ ಕೆಂಪೇಗೌಡನದೊಡ್ಡಿಯ ಛಾಯಾಗ್ರಾಹಕ ಯೋಗಾನಂದ (47) ಅವರು ಹೃದಯಾಘಾತದಿಂದಾಗಿ ಇತ್ತೀಚೆಗೆ ಸಾವನ್ನಪ್ಪಿದ್ದಾರೆ. ಮೂಲತಃ ತಾಲ್ಲೂಕಿನ ಜಾಲಮಂಗಲದ ಗ್ರಾಮದವರಾದ ಅವರು ಕೆಂಪೇಗೌಡನದೊಡ್ಡಿಯಲ್ಲಿ ನೆಲೆಸಿದ್ದರು. ಅವರಿಗೆ ತಂದೆ–ತಾಯಿ, ಪತ್ನಿ ಹಾಗೂ ಇಬ್ಬರು ಪುತ್ರರಿದ್ದಾರೆ.
ಜುಲೈ 17ರಂದು ರಾತ್ರಿ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಕುಟುಂಬದವರು ಜಿಲ್ಲಾಸ್ಪತ್ರೆಗೆ ತೋರಿಸಿ, ನಂತರ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮಾರನೇಯ ದಿನ ಕೊನೆಯುಸಿರೆಳೆದರು ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.