
ಚನ್ನಪಟ್ಟಣ: ಚನ್ನಪಟ್ಟಣ ರೋಟರಿ ಕ್ಲಬ್ ಪದಾಧಿಕಾರಿಗಳು ಭಾನುವಾರ ಪಾರಂಪರಿಕ ನಡಿಗೆ (ಹೆರಿಟೇಜ್ ವಾಕ್) ಹಮ್ಮಿಕೊಂಡು ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ರೋಟರಿ ಪದಾಧಿಕಾರಿಗಳು ಚಿಕ್ಕಮಳೂರಿನ ವೇಣುಗೋಪಾಲ ದೇವಸ್ಥಾನ, ಅರ್ಕೇಶ್ವರ ದೇವಸ್ಥಾನ, ಕಲ್ಯನಾಥೇಶ್ವರ ದೇವಸ್ಥಾನ, ಪಾರ್ವತಿ ಕೈಲಾಸೇಶ್ವರ ದೇವಸ್ಥಾನ, ಯಾಲಕ್ಕಿಗೌಡರ ತೋಟದ ಧನ್ವಂತರಿ ಗಣಪತಿ, ಹತ್ತಾರು ಲಿಂಗಗಳು, ಕಲ್ಯಾಣಿ, ಕಣ್ವ ನದಿ ಸೇರಿದಂತೆ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ಭವ್ಯ ಇತಿಹಾಸದ ಜೀವಂತ ಸಾಕ್ಷಿಗಳಾಗಿ ಉಳಿದಿರುವ ಪಾರಂಪರಿಕ ಮತ್ತು ಐತಿಹಾಸಿಕ ನೆಲೆಗಳನ್ನು ಭವಿಷ್ಯದ ಪೀಳಿಗೆಗೆ ಉಳಿಸಿಕೊಡುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಚಾಲನೆ ನೀಡಿದ ರೋಟರಿ ಅಧ್ಯಕ್ಷ ಪ್ರಸನ್ನ ಕುಮಾರ್ ಅಭಿಪ್ರಾಯಪಟ್ಟರು.
ಆಧುನಿಕತೆಯ ಗಾಳಿ ಬೀಸಿದಂತೆಲ್ಲ ಐತಿಹಾಸಿಕ ನೆಲೆಗಳ ಬಗೆಗಿನ ಅಭಿಮಾನ ಹಾಗೂ ತಿಳಿವಳಿಕೆ ಕೂಡ ಕಡಿಮೆಯಾಗುತ್ತಿರುವುದು ವಿಷಾದದ ಸಂಗತಿ. ಯುವಜನರು ಇತಿಹಾಸದ ಕುರುಹುಗಳ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಇಲ್ಲವೇ ಅಳಿದುಳಿದ ಐತಿಹಾಸಿಕ ಸ್ಥಳಗಳು ಕಣ್ಮರೆಯಾಗುವ ದಿನಗಳು ದೂರವಿಲ್ಲ ಎಂದರು.
ಬಹುತೇಕ ಐತಿಹಾಸಿಕ ಸ್ಥಳಗಳು ಜೀರ್ಣಾವಸ್ಥೆ ತಲುಪುತ್ತಿವೆ. ಇತಿಹಾಸದ ಶ್ರೀಮಂತಿಕೆ ನೆನಪಿಸುವ ಅಮೂಲ್ಶವಾದ ಶಾಸನಗಳು, ವೀರಗಲ್ಲು, ಮಹಾಸತಿ ಕಲ್ಲು, ವಿಶೇಷ ವಾಸ್ತುಶಿಲ್ಪದ ದೇವಾಲಯಗಳು, ಮಂಟಪಗಳು, ಕಟ್ಟಡಗಳು, ಪುಷ್ಕರಣಿ, ಕೊಳಗಳು ಹೇರಳವಾಗಿವೆ. ಇವು ತಾತ್ಸಾರದಿಂದ ಮೂಲೆಗುಂಪಾಗುತ್ತಿವೆ. ಯುವ ಜನಾಂಗ ಹಾಗೂ ಸಂಘ ಸಂಸ್ಥೆಗಳು ಈ ಕುರಿತು ಚಿಂತನೆ ನಡೆಸಬೇಕಾದ ಅನಿವಾರ್ಯತೆ ಇದೆ ಎಂದು ರೋಟರಿ ಸದಸ್ಯ ಡಾ. ವಿಜಯ್ ರಾಂಪುರ ಹೇಳಿದರು.
ರೋಟರಿ ಕ್ಲಬ್ ಕಾರ್ಯದರ್ಶಿ ವಿನಯ್ ಕುಮಾರ್, ನಿಕಟಪೂರ್ವ ಅಧ್ಯಕ್ಷ ಬಿ.ವಿ. ಹಳ್ಳಿ ದಿನೇಶ್, ಸದಸ್ಯರಾದ ಸಿ.ಜಿ. ರಮೇಶ್ ಕುಮಾರ್, ಶಿವರಾಜು, ಚಿಕ್ಕಮಳೂರು ಕಿರಣ್, ಮೆಡಿಕಲ್ ಅರುಣ್, ಬ್ಯಾಡರಹಳ್ಳಿ ವೈದ್ಯೇಗೌಡ, ಪಿ. ಸಮೃದ್ಧ್, ಪಿ. ಸಂಪನ್ನ, ಕೆ. ಗೋಕುಲ್, ಆರ್. ರೋಹಿತ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.