ADVERTISEMENT

ಪರಿಹಾರ ನೀಡುವುದಾಗಿ ಕರೆದು ಅವಮಾನಿಸಿದ ರೇವಣ್ಣ: ಮೃತ ಯುವಕನ ಕುಟುಂಬ ಆರೋಪ

ಹಿಟ್‌ ಆ್ಯಂಡ್‌ ರನ್‌ ಪ್ರಕರಣ: ಮೃತ ಯುವಕನ ಕುಟುಂಬ ಆರೋಪ

​ಪ್ರಜಾವಾಣಿ ವಾರ್ತೆ
Published 8 ಜನವರಿ 2026, 4:36 IST
Last Updated 8 ಜನವರಿ 2026, 4:36 IST
ತಿಂಗಳ ಹಿಂದೆ ಮಾಗಡಿ ತಾಲ್ಲೂಕಿನ ಸಿಡಿಗನಹಳ್ಳಿಯಲ್ಲಿ ನಡೆದಿದ್ದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ಎಚ್‌.ಎಂ. ರೇವಣ್ಣ ಪುತ್ರನ ಕಾರಿನ ಹಿಟ್‌ ಆ್ಯಂಡ್ ರನ್‌ನಿಂದ ಯುವಕ ರಾಜೇಶ್ ಮೃತಪಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಅವರ ತಂದೆ ಗುಡ್ಡೇಗೌಡ, ತಾಯಿ ನಾಗರತ್ನ ಹಾಗೂ ಅಕ್ಕ ನಂದಿನಿ ಅವರು ಮಾಧ್ಯಮದೊಂದಿಗೆ ಅಳಲು ತೋಡಿಕೊಂಡರು
ತಿಂಗಳ ಹಿಂದೆ ಮಾಗಡಿ ತಾಲ್ಲೂಕಿನ ಸಿಡಿಗನಹಳ್ಳಿಯಲ್ಲಿ ನಡೆದಿದ್ದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ಎಚ್‌.ಎಂ. ರೇವಣ್ಣ ಪುತ್ರನ ಕಾರಿನ ಹಿಟ್‌ ಆ್ಯಂಡ್ ರನ್‌ನಿಂದ ಯುವಕ ರಾಜೇಶ್ ಮೃತಪಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಅವರ ತಂದೆ ಗುಡ್ಡೇಗೌಡ, ತಾಯಿ ನಾಗರತ್ನ ಹಾಗೂ ಅಕ್ಕ ನಂದಿನಿ ಅವರು ಮಾಧ್ಯಮದೊಂದಿಗೆ ಅಳಲು ತೋಡಿಕೊಂಡರು   

ಮಾಗಡಿ (ರಾಮನಗರ): ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ಎಚ್‌.ಎಂ.ರೇವಣ್ಣ ಪುತ್ರನ ಕಾರು ಗುದ್ದಿ ಮೃತಪಟ್ಟ ಯುವಕನ ಕುಟುಂಬದವರು, ‘ಪರಿಹಾರ ಕೊಡುವುದಾಗಿ ಮನೆಗೆ ಕರೆಯಿಸಿಕೊಂಡ ರೇವಣ್ಣ ಅವಮಾನಿಸಿದ್ದಾರೆ’ ಎಂದು ಹರಿಹಾಯ್ದಿದ್ದಾರೆ. 

ತಿಂಗಳ ಹಿಂದೆ ತಾಲ್ಲೂಕಿನ ಸಿಡಿಗನಹಳ್ಳಿಯಲ್ಲಿ ರೇವಣ್ಣ ಅವರ ಪುತ್ರನ ಕಾರಿನ ಹಿಟ್‌ ಆ್ಯಂಡ್ ರನ್‌ ಅಪಘಾತದಲ್ಲಿ ಬೆಳಗುಂಬ ಗ್ರಾಮದ ರಾಜೇಶ್ (27) ಎಂಬ ಯುವಕ ಮೃತಪಟ್ಟಿದ್ದ.

ರಾಜೇಶ್ ತಂದೆ ಗುಡ್ಡೇಗೌಡ, ತಾಯಿ ನಾಗರತ್ನ ಹಾಗೂ ಅಕ್ಕ ನಂದಿನಿ ಮಂಗಳವಾರ ರೇವಣ್ಣ ವಿರುದ್ಧ ಮಾಧ್ಯಮದ ಮುಂದೆ  ಅಸಮಾಧಾನ ತೋಡಿಕೊಂಡರು. 

ADVERTISEMENT

‘ಅಪಘಾತ ನಡೆದ ದಿನ ನಮ್ಮ ಕುಟುಂಬಕ್ಕೆ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದ ರೇವಣ್ಣ ಮಾಗಡಿಯ ತಮ್ಮ ತೋಟದ ಮನೆಗೆ ನಮ್ಮನ್ನು ಕರೆಯಿಸಿಕೊಂಡರು. ನಿಮ್ಮ ಮಗನಿಗೆ ಸಾಯಲು ನಮ್ಮ ಕಾರೇ ಬೇಕಿತ್ತಾ? ಘಟನೆ ಕುರಿತು ಮಾಧ್ಯಮದ ಮುಂದೆ ಮಾತನಾಡಿ ನಮ್ಮ ಮರ್ಯಾದೆ ಹಾಳು ಮಾಡಿದ್ದೀರಿ’ ಎಂದು ಬೆದರಿಕೆ ಹಾಕಿದರು ಎಂದು ಕುಟುಂಬದವರು ದೂರಿದರು.

‘ಪರಿಹಾರವಾಗಿ ₹2 ಲಕ್ಷ ಕೊಡುವೆ ತೆಗೆದುಕೊಂಡು ಹೋಗಿ. ಇಲ್ಲವಾದರೆ ಬಿಡಿ. ಹೇಗಿದ್ದರೂ ನಮ್ಮ ಕಾರಿಗೆ ವಿಮೆ ಇದೆ. ಪ್ರಕರಣವನ್ನು ನಾನು ಕೋರ್ಟ್‌ನಲ್ಲಿ ನೋಡಿಕೊಳ್ಳುತ್ತೇನೆ ಎಂದರು. ತಮ್ಮ ಮಗನಿಂದ ಕುಟುಂಬವೊಂದರ ಏಕೈಕ ಪುತ್ರ ತೀರಿಕೊಂಡಿದ್ದಾನೆ ಎಂಬ ಕನಿಕರವನ್ನೂ ಸಹ ರೇವಣ್ಣ ತೋರಲಿಲ್ಲ’ ಎಂದರು.

‘ಊರಿನವರ ಸಮ್ಮುಖದಲ್ಲಿಯೇ ನನ್ನ ವಯಸ್ಸಾದ ತಂದೆ, ತಾಯಿಗೆ ನೋವಾಗುವಂತೆ ಮಾತನಾಡಿದರು. ನಾವೇನೂ ಕೇಳದಿದ್ದರೂ  ಅವರೇ ಪರಿಹಾರ ಕೊಡುತ್ತೇವೆ ಬನ್ನಿ ಎಂದು ಕರೆಯಿಸಿಕೊಂಡು ಅವಮಾನಿಸಿದರು. ಅವರ ಮಾತುಗಳಿಂದ ನಮಗೆ ತುಂಬಾ ನೋವಾಯಿತು. ಅವರ ಹಣ ಮುಟ್ಟದೆ ನಾವು ಮನೆಗೆ ವಾಪಸ್ ಬಂದೆವು’ ಎಂದು ಮೃತ ರಾಜೇಶ್‌ ಅಕ್ಕ ನಂದಿನಿ ನೋವು ತೋಡಿಕೊಂಡರು. 

ಕಾನೂನು ಹೋರಾಟ:

‘ಪ್ರಕರಣದಲ್ಲಿ ಪೊಲೀಸರು ಸಂಪೂರ್ಣ ನಿರ್ಲಕ್ಷ್ಯ ತೋರಿದ್ದಾರೆ. ರಾಜೇಶ್‌ಗೆ ಡಿಕ್ಕಿ ಹೊಡೆದ ಕಾರಿನ ಚಾಲಕ ಯಾರೆಂಬುದನ್ನು ಇದುವರೆಗೆ ಪತ್ತೆ ಹಚ್ಚಿಲ್ಲ. ಬಡವರ ಜೀವಕ್ಕೆ ಬೆಲೆ ಇಲ್ಲವಾಗಿದೆ. ಏಕೈಕ ಪುತ್ರನನ್ನು ಕಳೆದುಕೊಂಡ ನಮ್ಮ ಕುಟುಂಬಕ್ಕೆ ಆಸರೆ ಇಲ್ಲವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ಕಾನೂನು ಹೋರಾಟ ನಡೆಸುತ್ತೇವೆ’ ಎಂದು ಅವರು ಹೇಳಿದರು.

ಡಿ. 12ರಂದು ರಾತ್ರಿ ರೇವಣ್ಣ ಅವರ‌ ಪುತ್ರ ಆರ್. ‌ಶಶಾಂಕ್ ಅವರ ಕಾರು‌ ತಾಲ್ಲೂಕಿನ ಗುಡೇಮಾರನಹಳ್ಳಿ ಮುಖ್ಯರಸ್ತೆಯ ಸಿಡಿಗನಹಳ್ಳಿ ಬಳಿ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದ್ದರಿಂದ ಸ್ಕೂಟರ್‌ ಸವಾರ ರಾಜೇಶ್ ಸ್ಥಳದಲ್ಲೇ ಮೃತಪಟ್ಟಿದ್ದರು. ಬಳಿಕ, ಚಾಲಕ ಕಾರು ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿದ್ದ. ಘಟನೆ ಕುರಿತು ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘₹25 ಲಕ್ಷ ಕೇಳಿ ಎದ್ದು ಹೋದರು; ಕೇಳಿದ್ದರೆ ಇನ್ನಷ್ಟು ಕೊಡುತ್ತಿದ್ದೆ’

ಮೃತ ಯುವಕನ ಕುಟುಂಬದವರು ₹25 ಲಕ್ಷ ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ.ರೇವಣ್ಣ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.   ‘ಅಪಘಾತ ನಡೆದಿರುವುದು ಸತ್ಯ. ಘಟನೆ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಯುವಕನ ಸಾವಿನಿಂದ ನನಗೂ ನೋವಾಗಿದೆ. ಅವರು ನಮ್ಮ ಕ್ಷೇತ್ರದವರಾಗಿದ್ದರಿಂದ ಮಾನವೀಯ ದೃಷ್ಟಿಯಿಂದ ಕುಟುಂಬದವರನ್ನು ಮನೆಗೆ ಕರೆಸಿಕೊಂಡಿದ್ದೆ.ಏನು ಬೇಕೆಂದು ಕೇಳಿದಾಗ ಮಗಳ ಮದುವೆಗೆ ₹25 ಲಕ್ಷ ಕೊಡಿ ಎಂದರು. ₹2 ಲಕ್ಷ ಕೊಡುತ್ತೇನೆ ಎಂದಿದ್ದಕ್ಕೆ ಒಪ್ಪದೆ ಎದ್ದು ಹೋದರು’ ಎಂದರು.

ಕುಳಿತು ಮಾತನಾಡಿದ್ದರೆ ಮತ್ತಷ್ಟು ಕೊಡುತ್ತಿದ್ದೆ. ರಾಜ್ಯದಲ್ಲಿ ನಿತ್ಯ ಅಪಘಾತದಿಂದ ಸಾವುಗಳು ಸಂಭವಿಸುತ್ತಲೇ ಇರುತ್ತವೆ. ಅದಕ್ಕೆ ಯಾರು ಪರಿಹಾರ ಕೊಡುತ್ತಾರೆ? ನಮ್ಮ ಕಾರಿಗೆ ವಿಮೆ ಇದೆ. ಮುಂದೆ ವಿಮಾ ಕಂಪನಿಯಿಂದ ಪರಿಹಾರ ಸಿಗುತ್ತದೆ. ದುಃಖದಲ್ಲಿರುವ ಯುವಕನ ಕುಟುಂಬದವರಿಗೆ ನಾನು ಅವಮಾನಿಸುವುದಾಗಲಿ ಅಥವಾ ನಿಂದಿಸುವುದಾಗಲಿ ಮಾಡಿಲ್ಲ. ಅವರ ಆರೋಪದ ಕುರಿತು ಎರಡ್ಮೂರು ದಿನದಲ್ಲಿ ಮಾಗಡಿಗೆ ಬಂದು ಮಾತನಾಡುವೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.