ಕನಕಪುರ: ಮಹನೀಯರ ಹೋರಾಟದ ಫಲದಿಂದ ನಾವೆಲ್ಲರೂ ಸ್ವತಂತ್ರರಾಗಿದ್ದೇವೆ. ಇಂದಿನ ಯುವ ಪೀಳಿಗೆಗೆ ಮಹನೀಯರ ಬಗ್ಗೆ ತಿಳಿಸಿಕೊಡುವ ಮೂಲಕ ಅವರಲ್ಲಿ ದೇಶಪ್ರೇಮ ಬೆಳೆಸಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ರವಿ ಅಭಿಪ್ರಾಯಪಟ್ಟರು.
ಇಲ್ಲಿನ ತಾಲ್ಲೂಕು ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜ ವಂದನೆ ಸ್ವೀಕರಿಸಿ ಮಾತನಾಡಿದರು.
ದೇಶ ಸ್ವಾತಂತ್ರ್ಯ ನಂತರ ಹಲವು ಅಭಿವೃದ್ಧಿಗಳನ್ನು ಕಂಡಿದೆ. ಅನೇಕ ಸವಾಲುಗಳನ್ನು ಎದುರಿಸಿದೆ. ಇಂದಿರಾ ಗಾಂಧಿ ಅನೇಕ ಸವಾಲುಗಳ ನಡುವೆಯೂ ದೇಶವನ್ನು ಅಭಿವೃದ್ಧಿಯತ್ತ ಮುನ್ನಡೆಸಿದರು ಎಂದರು.
ದೇಶದಲ್ಲಿ ಇಂದಿಗೂ ಶತ್ರು ರಾಷ್ಟ್ರಗಳ ವೈರತ್ವವಿದೆ. ಪಾಕಿಸ್ತಾನದ ಅಣ್ವಸ್ತ್ರದ ಬೇದರಿಕೆ, ಉಗ್ರಗಾಮಿಗಳ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಎದುರಿಸುತ್ತಿದ್ದು ಅವರಿಗೆ ರಾಷ್ಟ್ರದ ಜನರು ಬೆಂಬಲವಾಗಿ ನಿಂತಿದ್ದಾರೆ ಎಂದರು.
ಭಾರತ ಜಾತ್ಯತೀತ ರಾಷ್ಟ್ರ. ಹೂದೋಟದಂತೆ ಎಲ್ಲ ಜಾತಿ ಧರ್ಮದವರಿದ್ದು ಇಲ್ಲಿ ಕೋಮು ಸಂಘರ್ಷಕ್ಕೆ ಅವಕಾಶ ನೀಡದೆ ದೇಶದಲ್ಲಿ ಶಾಂತಿ ನೆಲೆಸಲು ಸೌಹಾರ್ದದಿಂದ ನಾವೆಲ್ಲರೂ ಬಾಳಬೇಕಿದೆ ಎಂದು ತಿಳಿಸಿದರು.
ತಹಶೀಲ್ದಾರ್ ಸಂಜಯ್.ಎಂ ಧ್ವಜ ವಂದನೆ ಸ್ವೀಕರಿಸಿದರು. ಒಕ್ಕೂಟ ವ್ಯವಸ್ಥೆಯಲ್ಲಿ ದೇಶದ ಅಭಿವೃದ್ಧಿಗೆ ಕರ್ನಾಟಕದ ಪಾತ್ರ ಪ್ರಮುಖವಾಗಿದೆ ಎಂದರು.
ಶಾಲೆ ಮಕ್ಕಳು ದೇಶಭಕ್ತಿ ಗೀತೆಗಳು, ಸಮೂಹ ನೃತ್ಯ ಪ್ರದರ್ಶಿಸಿ ಎಲ್ಲರ ಗಮನ ಸೆಳೆದರು.
ಎನ್ಸಿಸಿ, ಸ್ಕೌಟ್ಸ್ ಅಂಡ್ ಗೈಡ್ಸ್, ಪೊಲೀಸರು ಹಾಗೂ ನಗರಸಭೆ ಪೌರಕಾರ್ಮಿಕರು ಪಥ ಸಂಚಲನದಲ್ಲಿ ಪಾಲ್ಗೊಂಡು ಧ್ವಜ ವಂದನೆ ಸಲ್ಲಿಸಿದರು.
ತಾಲ್ಲೂಕು ಪಂಚಾಯಿತಿ ಇಒ ಅವಿನಾಶ್, ನಗರಸಭೆ ಅಧ್ಯಕ್ಷೆ ಹೇಮರಾಜು, ಉಪಾಧ್ಯಕ್ಷ ಸೈಯದ್ ಸಾದಿಕ್, ಪೌರಾಯುಕ್ತ ಎಂ.ಎಸ್.ಮಹದೇವ್, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಡಿ.ವಿಜಯದೇವ್, ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಕೆ.ಎನ್.ದಿಲೀಪ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಹರೀಶ್, ಟಿಎಪಿಸಿಎಂಎಸ್ ಅಧ್ಯಕ್ಷ ಮಹೇಶ್, ಸರ್ವೆ ಇಲಾಖೆ ಸಹಾಯಕ ನಿರ್ದೇಶಕ ನಂದೀಶ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ನಗರಸಭೆ ಸದಸ್ಯರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.