ADVERTISEMENT

‘ದೇಹಾರೋಗ್ಯಕ್ಕೆ ದೇಶಿಯ ಆಹಾರ ತಿನ್ನಿ’

​ಪ್ರಜಾವಾಣಿ ವಾರ್ತೆ
Published 22 ಜುಲೈ 2019, 13:33 IST
Last Updated 22 ಜುಲೈ 2019, 13:33 IST
ಮಾಗಡಿ ತಾಲ್ಲೂಕಿನ ತಾವರೆಕೆರೆಯಲ್ಲಿ ನಡೆದ ಪೌಷ್ಟಿಕ ಆಹಾರ ಮೇಳದಲ್ಲಿ ಕವಿತಾ ಮಾತನಾಡಿದರು
ಮಾಗಡಿ ತಾಲ್ಲೂಕಿನ ತಾವರೆಕೆರೆಯಲ್ಲಿ ನಡೆದ ಪೌಷ್ಟಿಕ ಆಹಾರ ಮೇಳದಲ್ಲಿ ಕವಿತಾ ಮಾತನಾಡಿದರು   

ತಿಪ್ಪಸಂದ್ರ(ಮಾಗಡಿ): ದೇಶಿಯ ಸಿರಿಧಾನ್ಯಗಳಾದ ಹಾರಕ, ನವಣೆ, ಕೊರಲೆ, ತಿಂದು ದೇಹಾರೋಗ್ಯ ಕಾಪಾಡಿಕೊಳ್ಳಲು ಮುಂದಾಗಬೇಕು ಎಂದು ಸರ್ಕಾರಿ ಆಸ್ಪತ್ರೆಯ ಆರೋಗ್ಯ ಶಿಕ್ಷಣಾಧಿಕಾರಿ ಆರ್‌. ರಂಗನಾಥ್‌ ಮನವಿ ಮಾಡಿದರು.

ಹೋಬಳಿಯ ತಾವರೆಕೆರೆ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕೇಂದ್ರದ ವತಿಯಿಂದ ಪೌಷ್ಟಿಕ ಆಹಾರ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.

ಪೂರ್ವಿಕರು ಕೊಟ್ಟಿಗೆ ಗೊಬ್ಬರ ಮತ್ತು ಕುರಿ ಮೇಕೆ ಗೊಬ್ಬರವನ್ನು ಭೂಮಿಗೆ ಹಾಕಿ ಬೆಳೆಗಳನ್ನು ಬೆಳೆಯುತ್ತಿದ್ದರು. ಬೆರಕೆ ಸೊಪ್ಪು, ರಾಗಿ, ಜೋಳ ತಿಂದು ನೂರಾರು ವರ್ಷಗಳ ಕಾಲ ಆರೋಗ್ಯಪೂರ್ಣ ಬದುಕು ಸಾಗಿಸಿ, ಕೂಡುಕುಟುಂಬದಲ್ಲಿ ನೆಮ್ಮದಿಯ ಜೀವನ ನಡೆಸಿದ್ದರು. ರಸಗೊಬ್ಬರ ಬಳಸುತ್ತಿರುವುದು ದೇಹಾರೋಗ್ಯ ನಶಿಸಲು ಮುಖ್ಯ ಕಾರಣವಾಗಿದೆ. ಬೇಕರಿ ತಿನಿಸು ಮಕ್ಕಳಿಗೆ ಕೊಡಬೇಡಿ. ಬೆರಕೆ ಸೊಪ್ಪು, ಮೇಕೆ ಹಾಲು ಬಳಸಿ ದೇಹಾರೋಗ್ಯ ಸುಧಾರಿಸಿಕೊಳ್ಳಲು ಮುಂದಾಗಬೇಕು ಎಂದರು.

ADVERTISEMENT

ಜ್ಞಾನವಿಕಾಸ ಸಮನ್ವಯಾಧಿಕಾರಿ ಕವಿತಾ ಮಾತನಾಡಿ, ಸಕ್ಕರೆ, ಉಪ್ಪು ಕಡಿಮೆ ತಿನ್ನುವುದು ಆರೋಗ್ಯದ ಲಕ್ಷಣ. ಸರಳ ವ್ಯಾಯಾಮ ಮಾಡುವುದು ಅನನ್ಯವಾದುದು. ಮಹಿಳೆಯರು ಹೊಲದಲ್ಲಿ ದುಡಿಯುವುದರಿಂದ ಪೌಷ್ಟಿಕ ಆಹಾರ ಸೇವನೆ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದರು.

ಸಂಯೋಜಕಿಯರಾದ ಕೆಂಪಮ್ಮ, ಸುನಂದ ಮಾತನಾಡಿದರು. ಸಂಪಿಗೆ ಕೇಂದ್ರದ ಸದಸ್ಯರುಗಳು ಇದ್ದರು. ಜ್ಞಾನ ವಿಕಾಸ ಕೇಂದ್ರದ 40 ಸದಸ್ಯರು ಮನೆಯಲ್ಲಿ ತಯಾರಿಸಿಕೊಂಡು ತಂದಿದ್ದ ಪೌಷ್ಟಿಕ ಆಹಾರವನ್ನು ಹಂಚಲಾಯಿತು. ಗುಣಮಟ್ಟದ ಪೌಷ್ಟಿಕ ಆಹಾರ ತಯಾರಿಸಿದ್ದವರಿಗೆ ಬಹುಮಾನ ನೀಡಿ ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.